Friday 14 June, 2013

ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ಲೀಲೆ...

ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮುಂಗಾರು ಎನ್ನುವುದು ಅತೀ ಮಹತ್ವದ ವಿದ್ಯಮಾನ. ನಮ್ಮ ದೇಶದ ಆರ್ಥಿಕತೆಗೆ, ಸಮಾಜಕ್ಕೆ, ಕಲೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಹೀಗೆ ಎಲ್ಲದರಲ್ಲೂ ಮುಂಗಾರು ಎನ್ನುವುದು ಸಂಭ್ರಮ. ಕೃಷಿ ಚಟುವಟಿಕೆ ಸುತ್ತುವುದೇ ಮುಂಗಾರಿನ ಸುತ್ತ. ಏನು ಈ ಮುಂಗಾರು? ಯಾಕೆ ಅದು ಭಾರತೀಯರಿಗೆ ಅಷ್ಟು ದೊಡ್ಡ ಸಂಗತಿ?
Monsoon ಪದದ ಮೂಲ ಅರಬ್ಬಿಯ 'ಮಾಸಿಮ್' ಅಥವಾ 'ಮೋಸಮ್', ಅಂದರೆ ಋತು ಎಂದರ್ಥ. ಮುಂಗಾರು ಎನ್ನುವುದು ದೊಡ್ಡ ಪ್ರಮಾಣದಲ್ಲಿ ಬೀಸುವ ಸಮುದ್ರ ಗಾಳಿ (gigantic sea breeze). ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೇಲೇಳಿದಂತ, ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಆ ಕಡಿಮೆ ಒತ್ತಡದ ಪ್ರದೇಶಕ್ಕೆ ತಣ್ಣಗಿನ, ಹೆಚ್ಚು ಒತ್ತಡದ ಸಮುದ್ರದ ಮೇಲಿನ ಗಾಳಿ ನುಗ್ಗುತ್ತದೆ. ಈ ಗಾಳಿಗೆ ಸಾಗರ ಮರುತ (sea breeze) ಎನ್ನುತ್ತಾರೆ. ಇದು ಸಾಮಾನ್ಯವಾಗಿ ಪ್ರತಿದಿನವೂ ನಡೆಯುವ ಸಂಗತಿ.
ಮುಂಗಾರು ಭಾರತ ಮಾತ್ರವಲ್ಲದೆ ಭೂಮಿಯ ಎಲ್ಲ ಕಡೆ ಬೀಸುತ್ತದೆ. ಉತ್ತರ ಅಮೆರಿಕಾ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಶಿಯಾ ಆಸ್ಟ್ರೇಲಿಯ ಮುಂಗಾರು ಮುಖ್ಯ ಮಾರುತಗಳು. ಏಶಿಯಾ ಮುಂಗಾರಿನಲ್ಲಿ ಎರಡು ಭಾಗಗಳು-ದಕ್ಷಿಣ ಏಶಿಯಾ ಮುಂಗಾರು (ಭಾರತ ಮತ್ತು ಸುತ್ತಲಿನ ಪ್ರದೇಶ), ಮತ್ತು ಪೂರ್ವ ಏಶಿಯಾ ಮುಂಗಾರು (ಚೈನಾ, ಕೋರಿಯ, ಜಪಾನ್). ಇವೆಲ್ಲದರಲ್ಲೂ, ಭಾರತದ ನೈಋತ್ಯ ಮುಂಗಾರು ಅತಿ ಕ್ಲಿಷ್ಟ ಹವಾಮಾನ ವ್ಯವಸ್ಥೆ (most complex weather system) ಎನಿಸಿಕೊಂಡಿದೆ.
ಮೊದಲೆಲ್ಲ ಸಮುದ್ರಯಾನ ಮಾಡುವ ನಾವಿಕರು ಇದನ್ನು ಗುರುತಿಸುತ್ತಿದ್ದರು. ರೋಮನ್ನರು ಈ ಗಾಳಿಯ ಸಹಾಯದಿಂದ ಭಾರತಕ್ಕೆ ಬಂದು ವ್ಯಾಪಾರ ಮಾಡುತ್ತಿದ್ದರು. ವಾಸ್ಕೋ ಡ ಗಾಮ ಮುಂಗಾರು ಮಾರುತದ ಜ್ಞಾನ ಹೊಂದಿದ್ದು ಭಾರತಕ್ಕೆ ಅದರಿಂದಲೇ ಭೇಟಿ ಮಾಡಿದ್ದು. ಇದರ ವ್ಯವಸ್ಥಿತವಾಗಿ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. 1686 ರಲ್ಲಿ ಲಂಡನ್ ರಾಯಲ್ ಸೊಸೈಟಿಯ ಕಾರ್ಯದರ್ಶಿ ಎಡ್ಮಂಡ್ ಹ್ಯಾಲಿ (ಹ್ಯಾಲಿ ಧೂಮಕೇತು ಕಂಡುಹಿಡಿದವರು) ಮುಂಗಾರನ್ನು ಅಭ್ಯಸಿಸಿ “A historical account of the trade-winds and monsoons observable in the seas between and near the tropics with an attempt to assign the physical cause of the said winds” ಎಂಬ ಸಂಶೋಧನಾ ಲೇಖನ ಪ್ರಕಟಿಸಿದರು. ಇದರಲ್ಲಿ ಮುಂಗಾರಿನ ಮುಖ್ಯ ಕಾರಣ ಭೂಮಿ ಮತ್ತು ಸಮುದ್ರದ ಮೇಲಿನ ಶಾಖದ ವ್ಯತ್ಯಾಸ ಎಂದು ಮೊಟ್ಟಮೊದಲು ಪ್ರತಿಪಾದಿಸಿದರು.
ಮೇಲೆ ಹೇಳಿದಂತೆ ಭಾರತ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಇದಕ್ಕೆ ಕಾರಣ ಬರೀ ಗಾಳಿ ಬಿಸಿಯಾಗಿ ಮೇಲೇರುವುದೊಂದೇ ಅಲ್ಲ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪರಿಣಾಮ ಬೀರುತ್ತವೆ. ಶಾಂತ ಸಾಗರದಲ್ಲಿ ಹುಟ್ಟುವ ಎಲ್ ನಿನೊ ಮತ್ತು ದಕ್ಷಿಣ ಆವರ್ತನ (El Nino and Southern Oscillations-ENSO) ನಮ್ಮ ಮುಂಗಾರಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ ಎಲ್ ನಿನೊ ಇರುವ ವರ್ಷದಲ್ಲಿ ಮುಂಗಾರು ಕ್ಷೀಣವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಲಾ ನಿನೊ (La Nino) ಎಂಬ ಹವಾಮಾನ ಕೂಡ ಇರುತ್ತದೆ. ಮುಂಗಾರು ವಿಜ್ಞಾನದ ಪಿತಾಮಹ ಎನಿಸಿದ ಸರ್ ಗಿಲ್ಬರ್ಟ್ ವಾಕರ್ (Sir Gilbert Walker) ಅವರು ಮುಂಗಾರನ್ನು ಆಳವಾಗಿ ಅಭ್ಯಸಿಸಿದವರು. ಈಜಿಪ್ಟಿನ ನೈಲ್ ನದಿಯ ಪ್ರವಾಹಕ್ಕೂ ಭಾರತದ ಮುಂಗಾರಿಗೂ ಸಂಬಂಧವಿದೆ ಎಂದು ಪ್ರತಿಪಾದಿಸಿದರು. ದಕ್ಷಿಣ ಆವರ್ತನ ಕಂಡು ಹಿಡಿದವರೂ ಇವರೆ.
ಭಾರತದ ಮುಂಗಾರು ಅಷ್ಟು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದು ಕಡೆ ನೆಲ. ಅಲ್ಲಿ ಹೆಚ್ಚು ಬಿಸಿಯಾಗಿರುವ ಥಾರ್ ಮರುಭೂಮಿ. ಮತ್ತೊಂದು ಕಡೆ ಮಹಾ ಗೋಡೆಯಂತಹ ಹಿಮಾಲಯ. ಉಳಿದ ಕಡೆ ಸುತ್ತಲೂ ಸಮುದ್ರ. ಬೇಸಿಗೆಯಲ್ಲಿ ಭಾರತ ಭೂಖಂಡ ಅತಿಯಾಗಿ ಬಿಸಿಯಾಗಿ, ಗಾಳಿ ಮೇಲೇರುತ್ತದೆ. ಇದಕ್ಕೆ ರಾಜಸ್ಥಾನದ ಥಾರ್ ಮರುಭೂಮಿ, ಕಲ್ಲುಬಂಡೆಗಳ ದಖ್ಖನ್ ಪ್ರಸ್ಥಭೂಮಿ (Deccan plateau) ಕೂಡಾ ದೊಡ್ಡ ಕಾರಣ. ಈ ಗಾಳಿಯು ಇನ್ನಷ್ಟು ಮೇಲೇಳುವಂತೆ ಮಾಡುವುದು ಪಶ್ಚಿಮ ಮತ್ತು ಪೂರ್ವ ಘಟ್ಟಗಳು. ಇದು ಒಮ್ಮೆಲೆ ಆಗುವ ವಿದ್ಯಮಾನವಲ್ಲ. ಸುಮಾರು ಸಂಪೂರ್ಣ ಬೇಸಿಗೆ ಕಾಲ ಇದು ನಡೆಯುತ್ತದೆ. ಸಾಮಾನ್ಯವಾಗಿ ಮೇ ತಿಂಗಳು ಅತಿ ಹೆಚ್ಚು ಉಷ್ಣಾಂಶದ ತಿಂಗಳು. ಉಷ್ಣಾಂಶದ buildup ಆಗಿ, ದೇಶದ ನೆಲದ ಮೇಲೆ ವಾಯುಭಾರ ಕಡಿಮೆಯಾಗಿರುತ್ತದೆ. ಹೆಚ್ಚು ಎತ್ತರದಿಂದ ಕಡಿಮೆ ಎತ್ತರಕ್ಕೆ ಹರಿಯುವುದು ನೀರಿನ ಗುಣವಾದರೆ, ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಹರಿಯುವುದು ಗಾಳಿಯ ಗುಣ. ತಣ್ಣಗಿನ, ಹೆಚ್ಚು ಭಾರದ ಸಮುದ್ರದ ಮೇಲಿನ ಗಾಳಿ ಭೂಮಿಯ, ಅಂದರೆ ಭಾರತ ಭೂಖಂಡದ ಕಡೆ ನುಗ್ಗಲು ಶುರುವಾಗುತ್ತದೆ. ಇದು ಸಾಮಾನ್ಯವಾಗಿ ಜೂನ್ ಇಂದ ಪ್ರಾರಂಭವಾಗಿ ಒಂದು, ಒಂದೂವರೆ ತಿಂಗಳಲ್ಲಿ ಇಡೀ ದೇಶವನ್ನು ವ್ಯಾಪಿಸುತ್ತದೆ. ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ಈ ನೈಋತ್ಯ ಮಾರುತ, ಅಂದರೆ ಮಾನ್ಸೂನ್, ಆವಿಯಾದ ಸಮುದ್ರ ನೀರನ್ನೂ ಹೊತ್ತು ತಂದು ಭೂಮಿಯ ಮೇಲೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಹೀಗೆ ಸುರಿಯುವ ಮಳೆ ಇನ್ನಷ್ಟು ಶಾಖವನ್ನು (latent heat) ಬಿಡುಗಡೆಗೊಳಿಸುತ್ತದೆ. ಇದರಿಂದ ಬಿಸಿಯಾದ ಗಾಳಿ ಮತ್ತೆ ಮೇಲೆದ್ದು ಸಮುದ್ರದಿಂದ ನೀರಾವಿ ತುಂಬಿದ ಗಾಳಿಯನ್ನು ಸೆಳೆಯುತ್ತದೆ. ಹೀಗೆ ಮುಂಗಾರು ನೆಲದ ಮೇಲೆ ಮಳೆಯನ್ನು ಸುರಿಸುತ್ತ ಮುಂದೆ ಮುಂದೆ ಸಾಗುತ್ತ ಇಡೀ ದೇಶವನ್ನು ವ್ಯಾಪಿಸುತ್ತದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷವೂ ಅದೇ ದಿಕ್ಕಿನಲ್ಲಿ ಸಾಗುತ್ತದೆ.

ಭಾರತದಲ್ಲಿ ನೈಋತ್ಯ ಮುಂಗಾರು (southwest monsoon) ಮತ್ತು ಈಶಾನ್ಯ ಮುಂಗಾರು (northeast monsoon) ಎಂಬ ಎರಡು ರೀತಿಯ ಮುಂಗಾರುಗಳಿವೆ.

ನೈಋತ್ಯ ಮುಂಗಾರು
ನೈಋತ್ಯ ಮುಂಗಾರು ಜೂನ್ ನಿಂದ ಸಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯವನ್ನು ಮಳೆಗಾಲವೆನ್ನುತ್ತಾರೆ. ಇದನ್ನು summer monsoon ಎಂದೂ ಕರೆಯಲಾಗುತ್ತದೆ. ಇದರಲ್ಲಿ ಎರಡು ಭಾಗ ಅಥವಾ ತೋಳುಗಳಿವೆ-ಅರಬ್ಬಿ ಸಮುದ್ರ ತೋಳು, ಮತ್ತು ಬಂಗಾಲ ಕೊಲ್ಲಿ ತೋಳು.
ಅರಬ್ಬಿ ಸಮುದ್ರ ತೋಳು ಸುಮಾರು ಜೂನ್ ಒಂದರಂದು ಭಾರತ ಮುಖ್ಯಭೂಮಿಯನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತ ಮಲೆನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆ ಸುರಿಸುತ್ತ ಸಾಗುತ್ತದೆ. ಈ ಸಮಯದಲ್ಲಿ ಘಟ್ಟದ ಪೂರ್ವಭಾಗದಲ್ಲಿ ಅಷ್ಟೇನು ಮಳೆಯಾಗುವುದಿಲ್ಲ, ಕಾರಣ ಘಟ್ಟಗಳೇ ಹೆಚ್ಚಿನ ಪ್ರಮಾಣದ ಮಳೆಯನ್ನು ತನ್ನಲ್ಲಿ ಸುರಿಸಿಕೊಳ್ಳುವುದರಿಂದ. ಈ rain shadow region ನಲ್ಲಿ ಮಲೆನಾಡಿಗೆ ಹೋಲಿಸಿದರೆ ಮಳೆ ಕಡಿಮೆ.
ಬಂಗಾಲ ಕೊಲ್ಲಿ ತೋಳು ಕೂಡ ಸರಿಸುಮಾರಿಗೆ ಅದೇ ಸಮಯಕ್ಕೆ ಪ್ರಾರಂಭವಾಗಿ ಅಂಡಮಾನ್ ನಲ್ಲಿ ಮಳೆ ಸುರಿಸುತ್ತದೆ. ಇದು ಭಾರತದ ಪೂರ್ವಭಾಗಗಳ ಕಡೆಗೆ ಸಾಗುತ್ತದೆ. ಅಲ್ಲಿ ತಡೆಗೋಡೆಯಾಗಿರುವ ಹಿಮಾಲಯ, ಮುಂಗಾರನ್ನು ಪಶಿಮದ ಕಡೆಗೆ ತಿರುಗಿಸುತ್ತದೆ. ಈ ತೋಳಿನ ಕಾರಣ ಮೇಘಾಲಯದ ಮಾಸಿನ್ರಾಮ್ (Mawsynram) ನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆಯಾಗುತ್ತದೆ. ಇದು ಈಗ ಜಗತ್ತಿನ ಅತಿ ಹೆಚ್ಚು ಒದ್ದೆ ಪ್ರದೇಶ (wettest place on earth) ಎನಿಸಿಕೊಂಡಿದೆ. ಅನೇಕ ವರ್ಷಗಳಿಂದ ಈ ದಾಖಲೆಯನ್ನು ಹೊಂದಿದ್ದ ಅಲ್ಲೇ ಪಕ್ಕದಲ್ಲಿರುವ ಚೆರ್ರಾಪುಂಜಿಯಿಂದ ಕಿತ್ತುಕೊಂಡಿದೆ. (ಎರಡನೆ ಅತಿ ಹೆಚ್ಚು ಮಳೆ ಬೀಳುವ ದಾಖಲೆ ಈಗ ಕರ್ನಾಟಕದ ಆಗುಂಬೆಗಿಲ್ಲ, ಅದು ಪಕ್ಕದಲ್ಲಿರುವ ಹುಲಿಕಲ್ಲಿಗೆ ಸೇರಿದೆ). ಪಶ್ಚಿಮದ ಕಡೆ ತಿರುಗಿದ ಮುಂಗಾರು, ಗಂಗಾ ಬಯಲಿನ ಮೇಲೆ ಮಳೆ ಸುರಿಸುತ್ತ ಮುಂದೆ ಹೋಗುತ್ತದೆ. ಹಿಮಾಲಯದ ಕಾರಣ ಮುಂಗಾರಿನ ಒಂದು ಹನಿಯೂ ಭಾರತವನ್ನು ಬಿಟ್ಟು ಟಿಬೆಟ್, ಚೀನಾ ಕಡೆಗೆ ಹೋಗುವುದಿಲ್ಲ. ಹಿಮಾಲಯ ಪರ್ವತ ಶ್ರೇಣಿ ಮುಂಗಾರು ಮಾರುತಕ್ಕೆ ಒಂದು ರೀತಿಯ ಅಣೆಕಟ್ಟಿನಂತೆ ವರ್ತಿಸಿ, ಭಾರತದಲ್ಲೇ ಎಲ್ಲಾ ಮಳೆಯೂ ಬೀಳುವಂತೆ ಮಾಡುತ್ತದೆ. ಉತ್ತರದಲ್ಲಿ ಈ ಎರಡೂ ತೋಳುಗಳು ಸಂಧಿಸುತ್ತವೆ.
ಈಶಾನ್ಯ ಮುಂಗಾರು (ಹಿಂಗಾರು)
ಇದು ಸಪ್ಟೆಂಬರ್ ನಂತರ ಪ್ರಾರಂಭವಾಗುತ್ತದೆ. ಇದಕ್ಕೆ winter monsoon, retreating monsoon (ಹಿಂಗಾರು) ಎಂದು ಕರೆಯಲಾಗುತ್ತದೆ. ಇದರ ಕಾರಣ ಮತ್ತು ಹರಿಯುವ ದಿಕ್ಕು ನೈಋತ್ಯ ಮುಂಗಾರಿನ ವಿರುದ್ಧವಾದುದು. ಸಪ್ಟೆಂಬರ್ ನಂತರ ಸೂರ್ಯ ದಕ್ಷಿಣದಲ್ಲಿರುವ ಕಾರಣ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ನೆಲವು ಎಷ್ಟು ಬೇಗ ಬಿಸಿಯಾಗುತ್ತದೆಯೋ, ಅಷ್ಟೆ ವೇಗವಾಗಿ ನೀರಿಗಿಂತ ಬೇಗ ತಣ್ಣಗಾಗುತ್ತದೆ. ಅಂದರೆ ಈಗ ನೆಲದ ಮೇಲಿನ ಗಾಳಿ ಹೆಚ್ಚು ತಣ್ಣಗೆ, ಭಾರವಾಗಿರುತ್ತದೆ, ಸಮುದ್ರದ ಮೇಲಿನ ಗಾಳಿಗಿಂತ. ಮುಂಗಾರು ದಕ್ಷಿಣದಿಂದ ಉತ್ತರ ಪ್ರಯಾಣ ಮಾಡಿದರೆ, ಹಿಂಗಾರು ಉತ್ತರದಿಂದ ದಕ್ಷಿಣ, ನೆಲದಿಂದ ಸಮುದ್ರದ ಕಡೆಗೆ ಪ್ರಯಾಣ ಮಾಡುತ್ತದೆ. ಬಂಗಾಲ ಕೊಲ್ಲಿಯ ಮೇಲೆ ಬೀಸುವ ಈ ಹಿಂಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿಸುತ್ತದೆ. ಇದರಿಂದಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕರ್ನಾಟಕದ ಪೂರ್ವ ಭಾಗ, ತಮಿಳುನಾಡಿನ ಹೆಚ್ಚಿನ ಭಾಗದಲ್ಲಿ ಹಿಂಗಾರು ಮಳೆಯಾಗುತ್ತದೆ. ಮುಂಗಾರನ್ನು ಹೋಲಿಸಿದರೆ, ಹಿಂಗಾರಿನ ಮಳೆ ಪ್ರಮಾಣ, ಆರ್ಭಟ ಕಡಿಮೆ.
ಒಟ್ಟಿನಲ್ಲಿ, ನಮ್ಮ ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ಕೊಡುವುದು ಈ ಮುಂಗಾರು ಮಳೆ. ನಮ್ಮ ಕೃಷಿ, ಅದರ ಮೇಲೆ ಸಂಪೂರ್ಣ ಅವಲಂಬನೆ ಹೊಂದಿದ ನಮ್ಮ ಆರ್ಥಿಕ ಸ್ಥಿತಿ, ಇವಕ್ಕೆಲ್ಲ ಈ ಮುಂಗಾರು ಮಳೆಯೇ ದೊಡ್ಡ ಆಧಾರ. ಭಾರತೀಯ ಜೀವ ಶೈಲಿ ಸುತ್ತುವುದೇ ಈ ಮಳೆಯ ಸುತ್ತ. ಅದೆಷ್ಟು ಕಾವ್ಯ, ಸಾಹಿತ್ಯ, ಕಾದಂಬರಿ, ಚಲನಚಿತ್ರಗಳಿಗೆ ಈ ಮಳೆ ಸ್ಫೂರ್ತಿ. ರಾಜಸ್ಥಾನಿ, ಮೊಘಲ್ ಶೈಲಿಯ ತೈಲ ಚಿತ್ರಗಳಲ್ಲಿ ಮಳೆ, ಮೋಡ, ಮಳೆಗಾಲ ಇವೇ ಮುಖ್ಯವಾಗಿವೆ. ಮೊಘಲ್ ಮತ್ತು ರಾಜಸ್ಥಾನದ ರಾಜರು ಮಳೆಯನ್ನು ಅನುಭವಿಸಲೆಂದೇ ಮಳೆ ಮಂಟಪ (monsoon pavilion) ಕಟ್ಟಿಸಿ ಮಳೆ ಬರುವುದನ್ನು ನೋಡುತ್ತ ಆನಂದಿಸುತ್ತಿದ್ದರಂತೆ. ಒಣ, ಮರುಭೂಮಿಯ ತರಹದ ಆ ಪ್ರದೇಶದಲ್ಲಿ ಮಳೆಯೆನ್ನುವುದು ದೊಡ್ಡ ಸಂಭ್ರಮವಾಗುವುದು ಆಶ್ಚರ್ಯವೇನಲ್ಲ.


ಕಾಳಿದಾಸನು ತನ್ನ ಮೇಘದೂತದಲ್ಲಿ ಮೋಡವು ಯಾವ ದಿಕ್ಕಿನಲ್ಲಿ ಚಲಿಸುತ್ತದೆ, ಎಲ್ಲಿ ನಿಲ್ಲುತ್ತದೆ, ಮತ್ತೆ ಯಾವಾಗ ಮುಂದೆ ಹೋಗುತ್ತದೆ ಎಂದು ಸ್ಪಷ್ಟವಾಗಿ ವರ್ಣಿಸಿದ್ದಾನೆ. ಆಧುನಿಕ ಉಪಕರಣಗಳಿಲ್ಲದ ಆ ದಿನಗಳಲ್ಲಿ ಇದು ಹೇಗೆ ಸಾಧ್ಯವಿತ್ತು ಎನ್ನುವುದಕ್ಕೆ ಉತ್ತರವಿಲ್ಲ. ಅನೇಕ ವರ್ಷಗಳಿಂದ ಕರಾರುವಾಕ್ಕಾಗಿ ಅದೇ ದಿನ ಪ್ರಾರಂಭವಾಗಿ, ಅದೇ ದಿಕ್ಕಿನಲ್ಲಿ ಚಲಿಸುತ್ತ, ಸರಿಯಾದ ದಿನಾಂಕದಂದು ಆಯಾ ಪ್ರದೇಶದಲ್ಲಿ ಮಳೆ ಸುರಿಸುತ್ತಿದ್ದ ಮುಂಗಾರು ಈಗೀಗ ಕೈಕೊಡಲು ಶುರುವಾಗಿದೆ. ಇದಕ್ಕೆ ಕಡಿಮೆಯಾದ ಕಾಡು, ವಾಹನ, ಕಾರ್ಖಾನೆಗಳಿಂದ ಉತ್ಪತ್ತಿಯಾದ ಇಂಗಾಲ ಅನಿಲದಿಂದ ಬಿಸಿಯಾಗುತ್ತಿರುವ ಭೂ ವಾತಾವರಣ, ಎಲ್ಲ ದೊಡ್ಡ ರೀತಿಯಲ್ಲಿ ಕಾರಣವಾಗುತ್ತಿವೆ. ಹೀಗೆ ಮುಂದುವರೆದರೆ ಮುಂಗಾರು ಒಂದು ಗತಕಾಲದ ವೈಭವವಾಗುವ ಅಪಾಯ ದೂರವಿಲ್ಲ.

5 comments:

ಸುಬ್ರಮಣ್ಯ said...

ಹೊರಗೆ ಹೊಡೆಯುತ್ತಿರುವ ಮುಂಗಾರು ಮಳೆಯಲ್ಲಿ ನಿಮ್ಮ ಲೇಖನ ಓದುತ್ತಿದ್ದೇನೆ.

sunaath said...

ಮುಂಗಾರು ಮಳೆಯ ವೈಜ್ಞಾನಿಕ ವಿಶ್ಲೇಷಣೆಯನ್ನು ತುಂಬ ತಿಳಿಯಾಗಿ ಹಾಗು ಕಾವ್ಯಾತ್ಮಕವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

ಚಿನ್ಮಯ ಭಟ್ said...

ಚೆನ್ನಾಗಿದೆ....
ಆ ಕಡೆ ವಿಜ್ನಾನವೂ,ಈ ಕಡೆ ಸಾಹಿತ್ಯವೂ...
ಇಷ್ಟವಾಯ್ತು..
ಬರೆಯುತ್ತಿರಿ...

sughosh s. nigale said...

ಚೆನ್ನಾಗಿದೆ. :-)

Unknown said...

good one...