Monday 2 October, 2017

ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ

ಅರೆ, ಇದೇನಿದು, ಈ ಬ್ಲಾಗ್ ಪುಟ ಯಾವಾಗ ಸುದ್ದಿವಾಹಿನಿ ಆಯಿತು? ಹೌದು, ಇದು ನಮ್ಮ ಸುದ್ದಿವಾಹಿನಿಗಳು ಉಪಯೋಗಿಸುವ ಪದಪುಂಜಗಳ ಬಗ್ಗೆ. ಈಗೆ ಎಡಬಿಡದೆ ಮಳೆ ಸುರಿಯುತ್ತಿದೆ ಎಲ್ಲಾ ಕಡೆ. ಟಿವಿ ಚಾನಲ್‌ಗಳನ್ನು ನೋಡಿ. "ವರುಣನ ಆರ್ಭಟ, ವರುಣನ ಅಬ್ಬರ" ಎಂಬ ಶೀರ್ಷಿಕೆಗಳ ಅಬ್ಬರ. ಸುಮ್ಮನೆ ಮಳೆ ಎಂದರೆ ಅದು ಸಪ್ಪೆ, ವರುಣನ ಆರ್ಭಟ ಎಂದೇ ಹೇಳಬೇಕು, ಬರೆಯಬೇಕು. ನಾಲ್ಕು ಹನಿ ಮಳೆಯಾಗಲೀ, ಕುಂಭದ್ರೋಣ ಮಳೆಯಾಗಲಿ, ಈ ವಿಶೇಷಣ ಉಪಯೋಗಿಸಲೇಬೇಕು.

ಇನ್ನು ಬೆಂಗಳೂರನ್ನು ಬೆಂಗಳೂರು ಎಂದು ಕೇಳಿ, ಓದಿ ಎಷ್ಟು ಸಮಯವಾಯಿತೋ ಎನಿಸುತ್ತದೆ. ಕೊಳಚೆ ಪ್ರದೇಶದ ಸುದ್ದಿಯಿರಲಿ, ಉದ್ಯಾನವಿರಲಿ, ಮಾಲ್ ಸುದ್ದಿಯಿರಲಿ, ರಸ್ತೆ ಬಗ್ಗೆ ಇರಲಿ, ಸಿಲಿಕಾನ್ ಸಿಟಿ ಎಂದೇ ಸಂಬೋಧಿಸಬೇಕು. ಆಗಾಗ ಕೇಳಿಬರುವ ಇನ್ನೊಂದು ವಿಶೇಷಣ ಪದ "ಉದ್ಯಾನ ನಗರಿ". ಇದು "ಸಿಲಿಕಾನ್ ಸಿಟಿ" ಯಷ್ಟು ಪ್ರಯೋಗದಲ್ಲಿಲ್ಲ, ಆದರೆ ಕೆಲ ವರ್ಷಗಳ ಹಿಂದೆ ಇದು ಸ್ವಲ್ಪ ಅತೀ ಪ್ರಯೋಗದಲ್ಲಿತ್ತು.

ಅತಿಯಾದ ವಿಶೇಷಣ ಪದಗಳ ಇತರ ಊರುಗಳೂ ಇವೆ. ಮೈಸೂರನ್ನು "ಅರಮನೆ ನಗರಿ" ಎಂದೇ ಹೇಳಬೇಕು. ಬೆಳಗಾವಿ "ಕುಂದಾ ನಗರಿ" ಆಗಲೇಬೇಕು. ಶಿವಮೊಗ್ಗ "ತುಂಗಾ ನಗರಿ". ಚಿತ್ರದುರ್ಗ "ಕೋಟೆ ನಗರಿ"

ಸಚಿನ್ ತೆಂಡುಲ್ಕರ್ ಬಗ್ಗೆ ಪ್ರತಿಸಲ ಹೇಳುವಾಗಲೂ "ಮಾಸ್ಟರ್ ಬ್ಲಾಸ್ಟರ್" ಎಂದೇ ಸಂಬೋಧಿಸಬೇಕು.


ಈ ವಿಶೇಷಣ ಪದಗಳು ಪ್ರಾರಂಭದಲ್ಲಿ ಕೇಳುವಾಗ ಅಷ್ಟೇನೂ ಅನಿಸುವುದಿಲ್ಲ. ಆದರೆ ಅತೀ ಬಳಕೆಯಿಂದ, ಸಮಯ ಸಂದರ್ಭ ನೋಡದೆ, ಎಲ್ಲಾ ಸತಿ ಅವನ್ನೇ ಬಳಸಿದಾಗ ಕಿರಿಕಿರಿ ಎನಿಸುತ್ತದೆ. ದಸರಾ ಬಗ್ಗೆ ಹೇಳುವಾಗ "ಅರಮನೆ ನಗರಿ" ಎಂದರೆ ಸರಿ ಇರಬಹುದೇನೊ. ಮೈಸೂರಿನ ಕೊಳಚೆ ಪ್ರದೇಶದ ಬಗ್ಗೆ ಹೇಳುವಾಗಲೂ ಇದೇ ಪದ ಪ್ರಯೋಗ ವಿಚಿತ್ರವಲ್ಲವೆ? ಅತೀ ಬಳಕೆಯಿಂದ ಕ್ಲೀಷೆ (cliche) ಎನಿಸುತ್ತದೆ. ನೇರ ಪದ ಉಪಯೋಗಿಸಿದರೆ ಸಪ್ಪೆ ಎಂದು ತಿಳಿದುಕೊಂಡಿದ್ದಾರೋ ನಮ್ಮ ಸುದ್ದಿವಾಹಿನಿಗಳು. ಈಗ ಪತ್ರಿಕೆಗಳು, ನೆಟ್ ಪತ್ರಿಕೆಗಳೂ ಈ ವ್ಯಾಧಿ ಶುರುಮಾಡಿಕೊಂಡಿವೆ

Tuesday 2 June, 2015

ಮುಗ್ಧ ಕಲ್ಪನೆಯೋ, ತಪ್ಪು ಕಲ್ಪನೆಯೋ?

ವೃತ್ತಿಗೂ ಸ್ವಭಾವಕ್ಕೂ ಸಂಬಂಧ ಕಲ್ಪಿಸುವುದು ಬಹುಶಃ ನಾವು ಭಾರತೀಯರೇ ಜಾಸ್ತಿ ಎಂದು ನನ್ನ ಅನಿಸಿಕೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಅವರ ಜಾತಕ ಹೇಳಿಬಿಡುವುದರಲ್ಲಿ ನಾವು ನಿಸ್ಸೀಮರು. ಇಂತಿಂಥ ವೃತ್ತಿಯವರು ಹೀಗೇ ಎಂದು generalise ಮಾಡಿಬಿಡುತ್ತೇವೆ ಸುಲಭವಾಗಿ. ಇದು ಎಷ್ಟು ಸರಿ.

ಸಾಂಪ್ರದಾಯಿಕ ವೃತ್ತಿ ಇರಲಿ, ಇಂದಿನ ಆಧುನಿಕ ವೃತ್ತಿಗಳಿರಲಿ, ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಅವುಗಳಿಗೆ ತಮ್ಮದೆ ಕಷ್ಟ ಸುಖ ಇದ್ದೇ ಇರುತ್ತದೆ. ಇಂಥ ಕೆಲಸ ಮಾಡುವವರು ಸುಖಿಗಳು, ಈ ವೃತ್ತಿಯವರು ದಂಡಪಿಂಡಗಳು ಎಂದು ತೀರ್ಮಾನ ಮಾಡುವುದು ಎಷ್ಟು ಸರಿಯೋ ಗೊತ್ತಿಲ್ಲ.

ಕೆಲ ಸ್ಯಾಂಪಲ್ಲುಗಳು-
* ಅವನು ಸರಕಾರಿ ಕೆಲಸದವನೆ? ಅವನು ಲಂಚಕೋರ
* ಸರಕಾರಿ ಕೆಲಸವೇ? ಕೆಲಸವೇ ಮಾಡುವುದಿಲ್ಲ. ಮನೇಲೂ ನಿದ್ದೆ, ಆಫೀಸಿನಲ್ಲೂ ನಿದ್ದೆ
* ಪೋಲೀಸರೇ? ಅವರೆಲ್ಲ ಭ್ರಷ್ಟರು, ದೊಡ್ಡ ಹೊಟ್ಟೆಯವರು, ಲಂಚಕೋರರು, ಜನಸಾಮಾನ್ಯರಿಗೆ ಹಿಂಸೆ ಕೊಡುವುದೇ ಸಂತೋಷ ಅವರಿಗೆ
* ಶಾಲೆ/ಕಾಲೇಜ್ ಅಧ್ಯಾಪಕನೇ? ಎರಡು ಗಂಟೆ ಪಾಠ ಮಾಡಿದರೆ ಮುಗೀತು, ಅವರಿಗೆ ಬೇರೆ ಕೆಲಸವೇ ಇರೋಲ್ಲ, ಇಡೀ ದಿನ staffroomನಲ್ಲಿ ಹರಟೆ ಹೊಡೆಯುತ್ತ ಕೂರಬಹುದು. ವರ್ಷವಿಡೀ ರಜೆಗಳು, ತಿಂಗಳುಗಟ್ಟಲೆ vacation
* software engineerಏ? ಪಾಪ ಸಿಕ್ಕಾಪಟ್ಟೆ ಒತ್ತಡ, stress ಅವರಿಗೆ. ಮಧ್ಯರಾತ್ರಿಗೇ ಮನೆಗೆ ಬರುವುದು ಅವರು deadline, project ಅದೂ ಇದೂ ಎಂದು
* ರಾಜಕಾರಣಿಯೇ? ಮುಗಿದೇ ಹೋಯಿತು. ಅವನು ಖಂಡಿತ ಮಹಾ ಭ್ರಷ್ಟ, ದೇಶ ಕೊಳ್ಳೆ ಹೊಡೆಯುವುದಕ್ಕೇ ಈ ವೃತ್ತಿಗೆ ಬಂದವನು
* ರೈತನೇ? ಪಾಪ ದೇಶಕ್ಕಾಗಿ ದುಡಿದು ದುಡಿದೂ ಹಣ್ಣಾದವನು. ಅವನು ಮಾತ್ರ ಕಷ್ಟಪಡುವವನು. ಇತರರೆಲ್ಲ ಅವನ ಹೊಟ್ಟೆಮೇಲೆ ಹೊಡೆದು ಶೋಷಣೆ ಮಾಡುವವರು

ಇಂಥ ತಪ್ಪು ಕಲ್ಪನೆಗಳಿಗೆ ಕೊನೆಯೇ ಇಲ್ಲ ಬಿಡಿ. ಕೆಲ ಮಟ್ಟಿಗೆ ಇವೆಲ್ಲವೂ ಸತ್ಯ ಹೌದು. ಆದರೆ ಇಂತಿಂಥ ಕೆಲಸ ಮಾಡುವವರು ಹೀಗೇ ಇರುತ್ತಾರೆ ಎಂದು ಸಾರಾಸಗಟಾಗಿ ತೀರ್ಮಾನಿಸಿ ಬಿಡುವುದು ಎಷ್ಟು ಸರಿ?
ಬರೀ ವೃತ್ತಿ ಸಂಬಂಧೀ misconceptionಗಳು ಮಾತ್ರವಲ್ಲ, ಪ್ರದೇಶ ಸಂಬಂಧೀ ತಪ್ಪು ಕಲ್ಪನೆಗಳು ಅನೇಕ ಇವೆ.
* ಉತ್ತರಭಾರತದ ವಿದ್ಯಾರ್ಥಿಗಳೆಲ್ಲ ಶ್ರೀಮಂತರು, donation ಕೊಟ್ಟು ಕಾಲೇಜ್ ಸೇರುವುದರಿಂದ ಅವರಿಗೆ ದುಡ್ಡಿನ ಮಹತ್ವ ಗೊತ್ತಿಲ್ಲ. ಅವರು ಓದುವುದಿಲ್ಲ
           ಇದು ತಪ್ಪು ಕಲ್ಪನೆ ಎಂಬುದು ನನ್ನ ಸ್ವಂತ ಅನುಭವ. ನಿಜ ಹೇಳಬೇಕೆಂದರೆ ನಮ್ಮ ಸ್ಥಳೀಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಶ್ರದ್ಧೆಯಿಂದ ಓದುವವರು ಉತ್ತರದ ವಿದ್ಯಾರ್ಥಿಗಳೇ. ಶ್ರೀಮಂತರಿಗೆಲ್ಲ ಹಣದ ಮಹತ್ವ ಗೊತ್ತಿಲ್ಲ, ಅವರೆಲ್ಲ ಪುಂಡು ಪೋಕರಿತನ ಮಾಡುತ್ತ ಸಮಯ, ದುಡ್ಡು ಹಾಳು ಮಾಡುವವರು ಎನ್ನುವುದು ದೊಡ್ಡ misconception. ಬಡತನದ ಹಿನ್ನಲೆಯಿರುವವರೆಲ್ಲ ತುಂಬ ಮುಗ್ಧರು, ಶ್ರದ್ಧೆಯಿಂದ ಅಭ್ಯಾಸ ಮಾಡುವವರು ಎಂಬ ನಮ್ಮ ಕಥೆ, ಕಾದಂಬರಿ, ಸಿನೆಮಾದವರು ಹೇಳಿ ಹೇಳಿ ದೊಡ್ಡ ತಪ್ಪು ಕಲ್ಪನೆ ಸೃಷ್ಟಿಸಿದ್ದಾರೆ. ಇದು ಯಾವಾಗಲೂ ನಿಜವಲ್ಲ.

ನೂರೆಂಟು ಜಾತಿ ಧರ್ಮವಿರುವ ನಮ್ಮ ದೇಶದಲ್ಲಿ ಜಾತಿ ವಿಷಯದಲಿ ತಪ್ಪು ಕಲ್ಪನೆಗಳಿಗೆ ಬರವೆ?
* ಮೇಲ್ವರ್ಗದವರು, ಅದರಲ್ಲೂ ಬ್ರಾಹ್ಮಣರು ಶೋಷಕರು. ದಲಿತರನ್ನು ಶೋಷಣೆ ಮಾಡುವುದೇ ಅವರ ಕೆಲಸ
* ಹಿಂದುಳಿದವರೆಲ್ಲ, ಅದರಲ್ಲೂ ದಲಿತರು ಎಲ್ಲರೂ ಅತೀ ಕಷ್ಟದಲ್ಲಿರುವವರು. ಯಾವಾಗಲೂ ತುಳಿತಕ್ಕೊಳಗಾದವರು. ಅವರು ಮುಗ್ಧರು, ಒಳ್ಳೆಯವರು, ಬರೀ ನೋವು ಅನುಭವಿಸುವವರು.
* ಮೇಲ್ವರ್ಗದವರೆಲ್ಲ ಶ್ರೀಮಂತರು, ಹಿಂದುಳಿದವರೆಲ್ಲ ಬಡವರು
* ನಗರದ ಜನರೆಲ್ಲ ಮೋಸ ಮಾಡುವವರು, ಹಳ್ಳಿ ಜನರೆಲ್ಲ ಮುಗ್ಧರು
* ಹೊಲಗದ್ದೆಗಳಲ್ಲಿ ಕೆಲಸ ಮಾಡುವವರೇ ಕಷ್ಟ ಪಡುವವರು, corporate, ನಗರದ ವೃತ್ತಿಯವರು ಕಷ್ಟಪಡುವುದೇ ಇಲ್ಲ, ಬೆವರು ಸುರಿದರೆ ಮಾತ್ರ ಕಷ್ಟಪಟ್ಟಂತೆ


ಆದರೆ ಒಂದು ವಿಷಯದಲ್ಲಿ ಮಾತ್ರ ವಿಶ್ವಾದ್ಯಂತ ಇರುವ ದೊಡ್ಡ misconception ಎಂದರೆ ಗಂಡಸರೆಲ್ಲ ಬಲಾತ್ಕಾರ ಮಾಡುವವರು, ಹೆಂಗಸರೆಲ್ಲ ಬಲಾತ್ಕಾರಕ್ಕೆ ಒಳಗಾಗುವ ಜೀವಿಗಳು. ನಮ್ಮಲ್ಲಿ ವರದಕ್ಷಿಣೆ ಕಾಯ್ದೆಯ ದುರುಪಯೋಗ ಎಷ್ಟು ಜಾಸ್ತಿ ಇದೆಯೋ, ಅಮೇರಿಕಾದಂತಹ ದೇಶದಲ್ಲಿ sexual harassment ಕಾಯ್ದೆಯ ದುರುಪಯೋಗ ಅಷ್ಟೇ ಇದೆ

Wednesday 19 February, 2014

ಕಂಡಿಲ್ಲ ಯಾರೂ, ಆ ದೇವರನ್ನು; ಇರಬಹುದು ಏನೋ, ನಿನ್ನಂತೆ ಅವನು...

                                       
                               ಕರಗಿ ಹೋಗಲೇನು, ನಿನ್ನ ಕರಗಳಲ್ಲಿ ನಾನು...

Friday 14 June, 2013

ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ಲೀಲೆ...

ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮುಂಗಾರು ಎನ್ನುವುದು ಅತೀ ಮಹತ್ವದ ವಿದ್ಯಮಾನ. ನಮ್ಮ ದೇಶದ ಆರ್ಥಿಕತೆಗೆ, ಸಮಾಜಕ್ಕೆ, ಕಲೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಹೀಗೆ ಎಲ್ಲದರಲ್ಲೂ ಮುಂಗಾರು ಎನ್ನುವುದು ಸಂಭ್ರಮ. ಕೃಷಿ ಚಟುವಟಿಕೆ ಸುತ್ತುವುದೇ ಮುಂಗಾರಿನ ಸುತ್ತ. ಏನು ಈ ಮುಂಗಾರು? ಯಾಕೆ ಅದು ಭಾರತೀಯರಿಗೆ ಅಷ್ಟು ದೊಡ್ಡ ಸಂಗತಿ?
Monsoon ಪದದ ಮೂಲ ಅರಬ್ಬಿಯ 'ಮಾಸಿಮ್' ಅಥವಾ 'ಮೋಸಮ್', ಅಂದರೆ ಋತು ಎಂದರ್ಥ. ಮುಂಗಾರು ಎನ್ನುವುದು ದೊಡ್ಡ ಪ್ರಮಾಣದಲ್ಲಿ ಬೀಸುವ ಸಮುದ್ರ ಗಾಳಿ (gigantic sea breeze). ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೇಲೇಳಿದಂತ, ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಆ ಕಡಿಮೆ ಒತ್ತಡದ ಪ್ರದೇಶಕ್ಕೆ ತಣ್ಣಗಿನ, ಹೆಚ್ಚು ಒತ್ತಡದ ಸಮುದ್ರದ ಮೇಲಿನ ಗಾಳಿ ನುಗ್ಗುತ್ತದೆ. ಈ ಗಾಳಿಗೆ ಸಾಗರ ಮರುತ (sea breeze) ಎನ್ನುತ್ತಾರೆ. ಇದು ಸಾಮಾನ್ಯವಾಗಿ ಪ್ರತಿದಿನವೂ ನಡೆಯುವ ಸಂಗತಿ.
ಮುಂಗಾರು ಭಾರತ ಮಾತ್ರವಲ್ಲದೆ ಭೂಮಿಯ ಎಲ್ಲ ಕಡೆ ಬೀಸುತ್ತದೆ. ಉತ್ತರ ಅಮೆರಿಕಾ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಶಿಯಾ ಆಸ್ಟ್ರೇಲಿಯ ಮುಂಗಾರು ಮುಖ್ಯ ಮಾರುತಗಳು. ಏಶಿಯಾ ಮುಂಗಾರಿನಲ್ಲಿ ಎರಡು ಭಾಗಗಳು-ದಕ್ಷಿಣ ಏಶಿಯಾ ಮುಂಗಾರು (ಭಾರತ ಮತ್ತು ಸುತ್ತಲಿನ ಪ್ರದೇಶ), ಮತ್ತು ಪೂರ್ವ ಏಶಿಯಾ ಮುಂಗಾರು (ಚೈನಾ, ಕೋರಿಯ, ಜಪಾನ್). ಇವೆಲ್ಲದರಲ್ಲೂ, ಭಾರತದ ನೈಋತ್ಯ ಮುಂಗಾರು ಅತಿ ಕ್ಲಿಷ್ಟ ಹವಾಮಾನ ವ್ಯವಸ್ಥೆ (most complex weather system) ಎನಿಸಿಕೊಂಡಿದೆ.
ಮೊದಲೆಲ್ಲ ಸಮುದ್ರಯಾನ ಮಾಡುವ ನಾವಿಕರು ಇದನ್ನು ಗುರುತಿಸುತ್ತಿದ್ದರು. ರೋಮನ್ನರು ಈ ಗಾಳಿಯ ಸಹಾಯದಿಂದ ಭಾರತಕ್ಕೆ ಬಂದು ವ್ಯಾಪಾರ ಮಾಡುತ್ತಿದ್ದರು. ವಾಸ್ಕೋ ಡ ಗಾಮ ಮುಂಗಾರು ಮಾರುತದ ಜ್ಞಾನ ಹೊಂದಿದ್ದು ಭಾರತಕ್ಕೆ ಅದರಿಂದಲೇ ಭೇಟಿ ಮಾಡಿದ್ದು. ಇದರ ವ್ಯವಸ್ಥಿತವಾಗಿ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. 1686 ರಲ್ಲಿ ಲಂಡನ್ ರಾಯಲ್ ಸೊಸೈಟಿಯ ಕಾರ್ಯದರ್ಶಿ ಎಡ್ಮಂಡ್ ಹ್ಯಾಲಿ (ಹ್ಯಾಲಿ ಧೂಮಕೇತು ಕಂಡುಹಿಡಿದವರು) ಮುಂಗಾರನ್ನು ಅಭ್ಯಸಿಸಿ “A historical account of the trade-winds and monsoons observable in the seas between and near the tropics with an attempt to assign the physical cause of the said winds” ಎಂಬ ಸಂಶೋಧನಾ ಲೇಖನ ಪ್ರಕಟಿಸಿದರು. ಇದರಲ್ಲಿ ಮುಂಗಾರಿನ ಮುಖ್ಯ ಕಾರಣ ಭೂಮಿ ಮತ್ತು ಸಮುದ್ರದ ಮೇಲಿನ ಶಾಖದ ವ್ಯತ್ಯಾಸ ಎಂದು ಮೊಟ್ಟಮೊದಲು ಪ್ರತಿಪಾದಿಸಿದರು.
ಮೇಲೆ ಹೇಳಿದಂತೆ ಭಾರತ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಇದಕ್ಕೆ ಕಾರಣ ಬರೀ ಗಾಳಿ ಬಿಸಿಯಾಗಿ ಮೇಲೇರುವುದೊಂದೇ ಅಲ್ಲ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪರಿಣಾಮ ಬೀರುತ್ತವೆ. ಶಾಂತ ಸಾಗರದಲ್ಲಿ ಹುಟ್ಟುವ ಎಲ್ ನಿನೊ ಮತ್ತು ದಕ್ಷಿಣ ಆವರ್ತನ (El Nino and Southern Oscillations-ENSO) ನಮ್ಮ ಮುಂಗಾರಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ ಎಲ್ ನಿನೊ ಇರುವ ವರ್ಷದಲ್ಲಿ ಮುಂಗಾರು ಕ್ಷೀಣವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಲಾ ನಿನೊ (La Nino) ಎಂಬ ಹವಾಮಾನ ಕೂಡ ಇರುತ್ತದೆ. ಮುಂಗಾರು ವಿಜ್ಞಾನದ ಪಿತಾಮಹ ಎನಿಸಿದ ಸರ್ ಗಿಲ್ಬರ್ಟ್ ವಾಕರ್ (Sir Gilbert Walker) ಅವರು ಮುಂಗಾರನ್ನು ಆಳವಾಗಿ ಅಭ್ಯಸಿಸಿದವರು. ಈಜಿಪ್ಟಿನ ನೈಲ್ ನದಿಯ ಪ್ರವಾಹಕ್ಕೂ ಭಾರತದ ಮುಂಗಾರಿಗೂ ಸಂಬಂಧವಿದೆ ಎಂದು ಪ್ರತಿಪಾದಿಸಿದರು. ದಕ್ಷಿಣ ಆವರ್ತನ ಕಂಡು ಹಿಡಿದವರೂ ಇವರೆ.
ಭಾರತದ ಮುಂಗಾರು ಅಷ್ಟು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದು ಕಡೆ ನೆಲ. ಅಲ್ಲಿ ಹೆಚ್ಚು ಬಿಸಿಯಾಗಿರುವ ಥಾರ್ ಮರುಭೂಮಿ. ಮತ್ತೊಂದು ಕಡೆ ಮಹಾ ಗೋಡೆಯಂತಹ ಹಿಮಾಲಯ. ಉಳಿದ ಕಡೆ ಸುತ್ತಲೂ ಸಮುದ್ರ. ಬೇಸಿಗೆಯಲ್ಲಿ ಭಾರತ ಭೂಖಂಡ ಅತಿಯಾಗಿ ಬಿಸಿಯಾಗಿ, ಗಾಳಿ ಮೇಲೇರುತ್ತದೆ. ಇದಕ್ಕೆ ರಾಜಸ್ಥಾನದ ಥಾರ್ ಮರುಭೂಮಿ, ಕಲ್ಲುಬಂಡೆಗಳ ದಖ್ಖನ್ ಪ್ರಸ್ಥಭೂಮಿ (Deccan plateau) ಕೂಡಾ ದೊಡ್ಡ ಕಾರಣ. ಈ ಗಾಳಿಯು ಇನ್ನಷ್ಟು ಮೇಲೇಳುವಂತೆ ಮಾಡುವುದು ಪಶ್ಚಿಮ ಮತ್ತು ಪೂರ್ವ ಘಟ್ಟಗಳು. ಇದು ಒಮ್ಮೆಲೆ ಆಗುವ ವಿದ್ಯಮಾನವಲ್ಲ. ಸುಮಾರು ಸಂಪೂರ್ಣ ಬೇಸಿಗೆ ಕಾಲ ಇದು ನಡೆಯುತ್ತದೆ. ಸಾಮಾನ್ಯವಾಗಿ ಮೇ ತಿಂಗಳು ಅತಿ ಹೆಚ್ಚು ಉಷ್ಣಾಂಶದ ತಿಂಗಳು. ಉಷ್ಣಾಂಶದ buildup ಆಗಿ, ದೇಶದ ನೆಲದ ಮೇಲೆ ವಾಯುಭಾರ ಕಡಿಮೆಯಾಗಿರುತ್ತದೆ. ಹೆಚ್ಚು ಎತ್ತರದಿಂದ ಕಡಿಮೆ ಎತ್ತರಕ್ಕೆ ಹರಿಯುವುದು ನೀರಿನ ಗುಣವಾದರೆ, ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಹರಿಯುವುದು ಗಾಳಿಯ ಗುಣ. ತಣ್ಣಗಿನ, ಹೆಚ್ಚು ಭಾರದ ಸಮುದ್ರದ ಮೇಲಿನ ಗಾಳಿ ಭೂಮಿಯ, ಅಂದರೆ ಭಾರತ ಭೂಖಂಡದ ಕಡೆ ನುಗ್ಗಲು ಶುರುವಾಗುತ್ತದೆ. ಇದು ಸಾಮಾನ್ಯವಾಗಿ ಜೂನ್ ಇಂದ ಪ್ರಾರಂಭವಾಗಿ ಒಂದು, ಒಂದೂವರೆ ತಿಂಗಳಲ್ಲಿ ಇಡೀ ದೇಶವನ್ನು ವ್ಯಾಪಿಸುತ್ತದೆ. ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ಈ ನೈಋತ್ಯ ಮಾರುತ, ಅಂದರೆ ಮಾನ್ಸೂನ್, ಆವಿಯಾದ ಸಮುದ್ರ ನೀರನ್ನೂ ಹೊತ್ತು ತಂದು ಭೂಮಿಯ ಮೇಲೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಹೀಗೆ ಸುರಿಯುವ ಮಳೆ ಇನ್ನಷ್ಟು ಶಾಖವನ್ನು (latent heat) ಬಿಡುಗಡೆಗೊಳಿಸುತ್ತದೆ. ಇದರಿಂದ ಬಿಸಿಯಾದ ಗಾಳಿ ಮತ್ತೆ ಮೇಲೆದ್ದು ಸಮುದ್ರದಿಂದ ನೀರಾವಿ ತುಂಬಿದ ಗಾಳಿಯನ್ನು ಸೆಳೆಯುತ್ತದೆ. ಹೀಗೆ ಮುಂಗಾರು ನೆಲದ ಮೇಲೆ ಮಳೆಯನ್ನು ಸುರಿಸುತ್ತ ಮುಂದೆ ಮುಂದೆ ಸಾಗುತ್ತ ಇಡೀ ದೇಶವನ್ನು ವ್ಯಾಪಿಸುತ್ತದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷವೂ ಅದೇ ದಿಕ್ಕಿನಲ್ಲಿ ಸಾಗುತ್ತದೆ.

ಭಾರತದಲ್ಲಿ ನೈಋತ್ಯ ಮುಂಗಾರು (southwest monsoon) ಮತ್ತು ಈಶಾನ್ಯ ಮುಂಗಾರು (northeast monsoon) ಎಂಬ ಎರಡು ರೀತಿಯ ಮುಂಗಾರುಗಳಿವೆ.

ನೈಋತ್ಯ ಮುಂಗಾರು
ನೈಋತ್ಯ ಮುಂಗಾರು ಜೂನ್ ನಿಂದ ಸಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯವನ್ನು ಮಳೆಗಾಲವೆನ್ನುತ್ತಾರೆ. ಇದನ್ನು summer monsoon ಎಂದೂ ಕರೆಯಲಾಗುತ್ತದೆ. ಇದರಲ್ಲಿ ಎರಡು ಭಾಗ ಅಥವಾ ತೋಳುಗಳಿವೆ-ಅರಬ್ಬಿ ಸಮುದ್ರ ತೋಳು, ಮತ್ತು ಬಂಗಾಲ ಕೊಲ್ಲಿ ತೋಳು.
ಅರಬ್ಬಿ ಸಮುದ್ರ ತೋಳು ಸುಮಾರು ಜೂನ್ ಒಂದರಂದು ಭಾರತ ಮುಖ್ಯಭೂಮಿಯನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತ ಮಲೆನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆ ಸುರಿಸುತ್ತ ಸಾಗುತ್ತದೆ. ಈ ಸಮಯದಲ್ಲಿ ಘಟ್ಟದ ಪೂರ್ವಭಾಗದಲ್ಲಿ ಅಷ್ಟೇನು ಮಳೆಯಾಗುವುದಿಲ್ಲ, ಕಾರಣ ಘಟ್ಟಗಳೇ ಹೆಚ್ಚಿನ ಪ್ರಮಾಣದ ಮಳೆಯನ್ನು ತನ್ನಲ್ಲಿ ಸುರಿಸಿಕೊಳ್ಳುವುದರಿಂದ. ಈ rain shadow region ನಲ್ಲಿ ಮಲೆನಾಡಿಗೆ ಹೋಲಿಸಿದರೆ ಮಳೆ ಕಡಿಮೆ.
ಬಂಗಾಲ ಕೊಲ್ಲಿ ತೋಳು ಕೂಡ ಸರಿಸುಮಾರಿಗೆ ಅದೇ ಸಮಯಕ್ಕೆ ಪ್ರಾರಂಭವಾಗಿ ಅಂಡಮಾನ್ ನಲ್ಲಿ ಮಳೆ ಸುರಿಸುತ್ತದೆ. ಇದು ಭಾರತದ ಪೂರ್ವಭಾಗಗಳ ಕಡೆಗೆ ಸಾಗುತ್ತದೆ. ಅಲ್ಲಿ ತಡೆಗೋಡೆಯಾಗಿರುವ ಹಿಮಾಲಯ, ಮುಂಗಾರನ್ನು ಪಶಿಮದ ಕಡೆಗೆ ತಿರುಗಿಸುತ್ತದೆ. ಈ ತೋಳಿನ ಕಾರಣ ಮೇಘಾಲಯದ ಮಾಸಿನ್ರಾಮ್ (Mawsynram) ನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆಯಾಗುತ್ತದೆ. ಇದು ಈಗ ಜಗತ್ತಿನ ಅತಿ ಹೆಚ್ಚು ಒದ್ದೆ ಪ್ರದೇಶ (wettest place on earth) ಎನಿಸಿಕೊಂಡಿದೆ. ಅನೇಕ ವರ್ಷಗಳಿಂದ ಈ ದಾಖಲೆಯನ್ನು ಹೊಂದಿದ್ದ ಅಲ್ಲೇ ಪಕ್ಕದಲ್ಲಿರುವ ಚೆರ್ರಾಪುಂಜಿಯಿಂದ ಕಿತ್ತುಕೊಂಡಿದೆ. (ಎರಡನೆ ಅತಿ ಹೆಚ್ಚು ಮಳೆ ಬೀಳುವ ದಾಖಲೆ ಈಗ ಕರ್ನಾಟಕದ ಆಗುಂಬೆಗಿಲ್ಲ, ಅದು ಪಕ್ಕದಲ್ಲಿರುವ ಹುಲಿಕಲ್ಲಿಗೆ ಸೇರಿದೆ). ಪಶ್ಚಿಮದ ಕಡೆ ತಿರುಗಿದ ಮುಂಗಾರು, ಗಂಗಾ ಬಯಲಿನ ಮೇಲೆ ಮಳೆ ಸುರಿಸುತ್ತ ಮುಂದೆ ಹೋಗುತ್ತದೆ. ಹಿಮಾಲಯದ ಕಾರಣ ಮುಂಗಾರಿನ ಒಂದು ಹನಿಯೂ ಭಾರತವನ್ನು ಬಿಟ್ಟು ಟಿಬೆಟ್, ಚೀನಾ ಕಡೆಗೆ ಹೋಗುವುದಿಲ್ಲ. ಹಿಮಾಲಯ ಪರ್ವತ ಶ್ರೇಣಿ ಮುಂಗಾರು ಮಾರುತಕ್ಕೆ ಒಂದು ರೀತಿಯ ಅಣೆಕಟ್ಟಿನಂತೆ ವರ್ತಿಸಿ, ಭಾರತದಲ್ಲೇ ಎಲ್ಲಾ ಮಳೆಯೂ ಬೀಳುವಂತೆ ಮಾಡುತ್ತದೆ. ಉತ್ತರದಲ್ಲಿ ಈ ಎರಡೂ ತೋಳುಗಳು ಸಂಧಿಸುತ್ತವೆ.
ಈಶಾನ್ಯ ಮುಂಗಾರು (ಹಿಂಗಾರು)
ಇದು ಸಪ್ಟೆಂಬರ್ ನಂತರ ಪ್ರಾರಂಭವಾಗುತ್ತದೆ. ಇದಕ್ಕೆ winter monsoon, retreating monsoon (ಹಿಂಗಾರು) ಎಂದು ಕರೆಯಲಾಗುತ್ತದೆ. ಇದರ ಕಾರಣ ಮತ್ತು ಹರಿಯುವ ದಿಕ್ಕು ನೈಋತ್ಯ ಮುಂಗಾರಿನ ವಿರುದ್ಧವಾದುದು. ಸಪ್ಟೆಂಬರ್ ನಂತರ ಸೂರ್ಯ ದಕ್ಷಿಣದಲ್ಲಿರುವ ಕಾರಣ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ನೆಲವು ಎಷ್ಟು ಬೇಗ ಬಿಸಿಯಾಗುತ್ತದೆಯೋ, ಅಷ್ಟೆ ವೇಗವಾಗಿ ನೀರಿಗಿಂತ ಬೇಗ ತಣ್ಣಗಾಗುತ್ತದೆ. ಅಂದರೆ ಈಗ ನೆಲದ ಮೇಲಿನ ಗಾಳಿ ಹೆಚ್ಚು ತಣ್ಣಗೆ, ಭಾರವಾಗಿರುತ್ತದೆ, ಸಮುದ್ರದ ಮೇಲಿನ ಗಾಳಿಗಿಂತ. ಮುಂಗಾರು ದಕ್ಷಿಣದಿಂದ ಉತ್ತರ ಪ್ರಯಾಣ ಮಾಡಿದರೆ, ಹಿಂಗಾರು ಉತ್ತರದಿಂದ ದಕ್ಷಿಣ, ನೆಲದಿಂದ ಸಮುದ್ರದ ಕಡೆಗೆ ಪ್ರಯಾಣ ಮಾಡುತ್ತದೆ. ಬಂಗಾಲ ಕೊಲ್ಲಿಯ ಮೇಲೆ ಬೀಸುವ ಈ ಹಿಂಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿಸುತ್ತದೆ. ಇದರಿಂದಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕರ್ನಾಟಕದ ಪೂರ್ವ ಭಾಗ, ತಮಿಳುನಾಡಿನ ಹೆಚ್ಚಿನ ಭಾಗದಲ್ಲಿ ಹಿಂಗಾರು ಮಳೆಯಾಗುತ್ತದೆ. ಮುಂಗಾರನ್ನು ಹೋಲಿಸಿದರೆ, ಹಿಂಗಾರಿನ ಮಳೆ ಪ್ರಮಾಣ, ಆರ್ಭಟ ಕಡಿಮೆ.
ಒಟ್ಟಿನಲ್ಲಿ, ನಮ್ಮ ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ಕೊಡುವುದು ಈ ಮುಂಗಾರು ಮಳೆ. ನಮ್ಮ ಕೃಷಿ, ಅದರ ಮೇಲೆ ಸಂಪೂರ್ಣ ಅವಲಂಬನೆ ಹೊಂದಿದ ನಮ್ಮ ಆರ್ಥಿಕ ಸ್ಥಿತಿ, ಇವಕ್ಕೆಲ್ಲ ಈ ಮುಂಗಾರು ಮಳೆಯೇ ದೊಡ್ಡ ಆಧಾರ. ಭಾರತೀಯ ಜೀವ ಶೈಲಿ ಸುತ್ತುವುದೇ ಈ ಮಳೆಯ ಸುತ್ತ. ಅದೆಷ್ಟು ಕಾವ್ಯ, ಸಾಹಿತ್ಯ, ಕಾದಂಬರಿ, ಚಲನಚಿತ್ರಗಳಿಗೆ ಈ ಮಳೆ ಸ್ಫೂರ್ತಿ. ರಾಜಸ್ಥಾನಿ, ಮೊಘಲ್ ಶೈಲಿಯ ತೈಲ ಚಿತ್ರಗಳಲ್ಲಿ ಮಳೆ, ಮೋಡ, ಮಳೆಗಾಲ ಇವೇ ಮುಖ್ಯವಾಗಿವೆ. ಮೊಘಲ್ ಮತ್ತು ರಾಜಸ್ಥಾನದ ರಾಜರು ಮಳೆಯನ್ನು ಅನುಭವಿಸಲೆಂದೇ ಮಳೆ ಮಂಟಪ (monsoon pavilion) ಕಟ್ಟಿಸಿ ಮಳೆ ಬರುವುದನ್ನು ನೋಡುತ್ತ ಆನಂದಿಸುತ್ತಿದ್ದರಂತೆ. ಒಣ, ಮರುಭೂಮಿಯ ತರಹದ ಆ ಪ್ರದೇಶದಲ್ಲಿ ಮಳೆಯೆನ್ನುವುದು ದೊಡ್ಡ ಸಂಭ್ರಮವಾಗುವುದು ಆಶ್ಚರ್ಯವೇನಲ್ಲ.


ಕಾಳಿದಾಸನು ತನ್ನ ಮೇಘದೂತದಲ್ಲಿ ಮೋಡವು ಯಾವ ದಿಕ್ಕಿನಲ್ಲಿ ಚಲಿಸುತ್ತದೆ, ಎಲ್ಲಿ ನಿಲ್ಲುತ್ತದೆ, ಮತ್ತೆ ಯಾವಾಗ ಮುಂದೆ ಹೋಗುತ್ತದೆ ಎಂದು ಸ್ಪಷ್ಟವಾಗಿ ವರ್ಣಿಸಿದ್ದಾನೆ. ಆಧುನಿಕ ಉಪಕರಣಗಳಿಲ್ಲದ ಆ ದಿನಗಳಲ್ಲಿ ಇದು ಹೇಗೆ ಸಾಧ್ಯವಿತ್ತು ಎನ್ನುವುದಕ್ಕೆ ಉತ್ತರವಿಲ್ಲ. ಅನೇಕ ವರ್ಷಗಳಿಂದ ಕರಾರುವಾಕ್ಕಾಗಿ ಅದೇ ದಿನ ಪ್ರಾರಂಭವಾಗಿ, ಅದೇ ದಿಕ್ಕಿನಲ್ಲಿ ಚಲಿಸುತ್ತ, ಸರಿಯಾದ ದಿನಾಂಕದಂದು ಆಯಾ ಪ್ರದೇಶದಲ್ಲಿ ಮಳೆ ಸುರಿಸುತ್ತಿದ್ದ ಮುಂಗಾರು ಈಗೀಗ ಕೈಕೊಡಲು ಶುರುವಾಗಿದೆ. ಇದಕ್ಕೆ ಕಡಿಮೆಯಾದ ಕಾಡು, ವಾಹನ, ಕಾರ್ಖಾನೆಗಳಿಂದ ಉತ್ಪತ್ತಿಯಾದ ಇಂಗಾಲ ಅನಿಲದಿಂದ ಬಿಸಿಯಾಗುತ್ತಿರುವ ಭೂ ವಾತಾವರಣ, ಎಲ್ಲ ದೊಡ್ಡ ರೀತಿಯಲ್ಲಿ ಕಾರಣವಾಗುತ್ತಿವೆ. ಹೀಗೆ ಮುಂದುವರೆದರೆ ಮುಂಗಾರು ಒಂದು ಗತಕಾಲದ ವೈಭವವಾಗುವ ಅಪಾಯ ದೂರವಿಲ್ಲ.

Tuesday 5 February, 2013

"ಮೇಷ್ಟ್ರಾ?? ಆರಾಮ್ ಕೆಲ್ಸ ಬಿಡಿ"


"ಓ, ನೀವು ಕಾಲೇಜಿನಲ್ಲಿ ಕೆಲ್ಸ ಮಾಡೋದಾ? ಆರಾಮ್ ಕೆಲ್ಸ ಬಿಡಿ"

"ಮೇಷ್ಟ್ರಾ?? ನಿಮಗೇನು ಬಿಡಿ, ಬೇಕಾದಷ್ಟು ರಜೆಗಳು, ಎಲ್ಲಾ ಸರಕಾರಿ ರಜೆಗಳೂ ಸಿಗುತ್ತವೆ. ಪರೀಕ್ಷೆ ಮುಗಿದ ಮೇಲೆ ವೆಕೇಶನ್ ಬೇರೆ"

" ಶಾಲೆ, ಕಾಲೇಜ್ ಕೆಲ್ಸ ಅದೇನು ಮಹಾ? ಒಂದೆರಡು ಗಂಟೆ ಹುಡುಗರ ಮುಂದೆ ಒದರಿದರೆ ಮುಗೀತು, ಆಮೇಲೆ ಸ್ಟಾಫ್ ರೂಮಿಗೆ ಬಂದು ಹರಟೆ ಹೊಡೆಯುತ್ತ ಕೂರಬಹುದು"

"ಪಾಠ ಹೇಳೋ ಕೆಲಸಾನ? ಹೇಳಿದ್ದೇ ಹೇಳೋ ಕಿಸಬಾಯಿದಾಸನ ಥರ ಪ್ರತೀ ವರ್ಷ ಅದನ್ನೆ ಹೇಳಿದರಾಯಿತು. ಒಂದು ನೋಟ್ಸ್ ಇಟ್ಟುಕೊಂಡರೆ ಮುಗೀತು, ಅದನ್ನೆ ಓದುತ್ತ ಹೋದರಾಯಿತು. ನಿಮ್ ಕಲ್ಸ ಎಷ್ಟು ಸುಲಭ"

ಇದು ಶಿಕ್ಷಕ ವೃತ್ತಿಯಲ್ಲಿರುವವರು ಸಾಮಾನ್ಯವಾಗಿ ಕೇಳುವ ಮಾತುಗಳು. ನಮ್ಮಲ್ಲಿ ಅನೇಕರಿಗೆ ಈಗಲೂ ಶಿಕ್ಷಕ ವೃತ್ತಿಯ ಬಗ್ಗೆ ಹಗುರ ಭಾವನೆಯಿದೆ. ಅದು ತುಂಬ ಸುಲಭದ ಕೆಲಸ, ಟೆನ್ಶನ್ ಇಲ್ಲದ ಆರಾಮದಾಯಕ ವೃತ್ತಿ, ಬೇಕಾದಷ್ಟು ರಜೆ, ಸೌಲಭ್ಯ ಪಡೆಯುತ್ತ ಕಾಲಹರಣ ಮಾಡುತ್ತ ಇರಬಹುದು, ಇಂಥ ಅನೇಕ ಕಲ್ಪನೆಗಳಿವೆ.

ನಮ್ಮ ದೇಶದಲ್ಲಿ ಮೊದಲಿಂದಲೂ ಬೇರೆ ಬೇರೆ ವೃತ್ತಿಗಳ ಬಗ್ಗೆ ಪೂರ್ವಾಗ್ರಹಗಳಿವೆ. ಇಂಥ ಕೆಲಸ ಹೆಚ್ಚು ಆದಾಯ ತರುವಂಥದ್ದು, ಈ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚು ಪ್ರತಿಷ್ಠೆ, ಆ ಕೆಲಸ ಮಾಡುವವರು ಮಾತ್ರ ಜಗತ್ತನ್ನು ತಲೆಯ ಮೇಲೆ ಹೊತ್ತಿರುವವರು, ಆ ಕೆಲಸಕ್ಕೆ ಬುದ್ಧಿಯೇ ಬೇಕಾಗಿಲ್ಲ, ಈ ಕೆಲಸ ಬಹಳ ಸುಲಭ, ಆ ವೃತ್ತಿಗೆ ಯಾವ ಶ್ರಮವೂ ಬೇಕಿಲ್ಲ, ಹೀಗೆ. ಉದಾಹರಣೆಗೆ ಇಂಜಿನಿಯರ್ ಕೆಲಸ. ಕೆಲ ವರ್ಷಗಳ ಹಿಂದೆ (ಈಗಲೂ) ಇಂಜಿನಿಯರಿಂಗ್ ಮಾಡಿದರೇನೆ ಬದುಕು ಸಾರ್ಥಕ ಎಂಬ ಮನೋಭಾವನೆಯಿತ್ತು (ಇದೆ). ಆ ವೃತ್ತಿ ತರುವ ಪ್ರತಿಷ್ಠೆ, ಹಣ ಮಾತ್ರ ಮುಖ್ಯ. ಸಾಫ್ಟ್ ವೇರ್ ಉದ್ಯೋಗ ಸೃಷ್ಟಿಯಾದ ಮೇಲಂತೂ ಒಂದು ದೊಡ್ಡ ಪ್ರವಾಹವೇ ಶುರುವಾಯಿತು. ಎಸ್.ಎಸ್.ಎಲ್.ಸಿ ಮಾಡಿರಲಿ, ಡಾಕ್ಟರ್ ಆಗಿರಲಿ, ಎಲ್ಲರೂ ಸಾಫ್ಟ್ ವೇರ್ ಕ್ಷೇತ್ರಕ್ಕೆ ಓಡಿದವರೇ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡದವನು ದಂಡಪಿಂಡ ಎಂಬಂತಹ ಮನೋಭಾವ ಎದ್ದು ನಿಂತಿತು. ನಮ್ಮಲ್ಲಿಯ ಕೆಲ ಸಾಫ್ಟ್ ವೇರ್ ಕಂಪನಿ ಮುಖ್ಯಸ್ಥರು ಕೂಡ ಜಗತ್ತು ನಡೆಯುವುದೇ ನಮ್ಮಿಂದ ಎಂಬಂತೆ ವರ್ತಿಸತೊಡಗಿದರು. ನಾವು ಕೇಳಿದ್ದು ಕೊಡದಿದ್ದರೆ ಈ ಊರು ಬಿಟ್ಟು ಬೇರೆ ಕಡೆ ನಮ್ಮ ಕಂಪನಿ ಸ್ಥಾಪಿಸುತ್ತೇವೆ ಎಂದು ಸರಕಾರಕ್ಕೇ ಧಮಕಿ ಹಾಕಿ blackmail ಮಾಡುವಷ್ಟು ದುರಹಂಕಾರ ಬೆಳೆಸಿಕೊಂಡರು. ಇವರಿಗೆಲ್ಲ ಕುಮ್ಮಕ್ಕು ಕೊಡುವ, IT BT ದೊರೆಗಳು ಹೇಳಿದ್ದೆಲ್ಲ ವೇದವಾಕ್ಯ ಎಂದು ನಂಬಿದ, ನಂಬಿಸುವ, ಕೆಲ ಇಂಗ್ಲೀಷ್ ಪತ್ರಿಕೆಗಳು ಈ ದುರಹಂಕಾರಿ IT BT ಮುಖ್ಯಸ್ಥರ ಮುಖವಾಣಿ (mouthpiece) ಆದವು.

ಇದು ಆಧುನಿಕ ವೃತ್ತಿಗಳ ಬಗ್ಗೆ ಆದರೆ ಸಾಂಪ್ರದಾಯಿಕ ವೃತ್ತಿಗಳೇನೂ ಪೂರ್ವಾಗ್ರಹಗಳಿಂದ ಮುಕ್ತವಾಗಿಲ್ಲ. ನಮ್ಮ ಕಥೆ ಕಾದಂಬರಿಗಳು, ಸಾಹಿತ್ಯ, ಕವನ, ಸಿನೆಮಾ, ರಾಜಕೀಯದವರು, ಬುದ್ಧಿಜೀವಿಗಳು, ಎಲ್ಲ ಕೃಷಿಯನ್ನು ವಿಪರೀತ ಎನಿಸುವಷ್ಟು ವರ್ಣನೆ ಮಾಡಿವೆ. ರೈತರು ಮಾತ್ರ ಕಷ್ಟಪಟ್ಟು ದುಡಿಯುವವರು, ಅವರು ಮಾತ್ರ ಶ್ರಮಜೀವಿಗಳು, ಇತರರೆಲ್ಲರೂ ಅವರ ಹೊಟ್ಟೆಮೇಲೆ ಹೊಡೆದು ಶೋಷಣೆ ಮಾಡುವವರು ಎಂಬಂತಹ ಚಿತ್ರಣವನ್ನೇ ಕೊಡುತ್ತಾ ಬಂದಿದ್ದಾರೆ. ರೈತನಿರಲಿ, ಚಪ್ಪಲಿ ಹೊಲಿಯುವವನಿರಲಿ, ಕಾರ್ ಡ್ರೈವರ್ ಇರಲಿ, ದೊಡ್ದ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಇರಲಿ, ಎಲ್ಲರೂ ದೇಶಕ್ಕೆ ದುಡಿದೇ ದುಡಿಯುತ್ತಾರೆ, ಪ್ರತಿಯೊಬ್ಬರ ಶ್ರಮವೂ ಅಗತ್ಯ. ಸೈನಿಕರು ಮಾತ್ರ ದೇಶಪ್ರೇಮಿಗಳಲ್ಲ. ದಾದಿ, ವೈದ್ಯ, ಶಿಕ್ಷಕ ವೃತ್ತಿಗಳು ಮಾತ್ರ noble profession ಆಗಬೇಕಿಲ್ಲ, software ಉದ್ಯೋಗಿಗಳಿಗೆ ಮಾತ್ರ stress ಇರುತ್ತದೆ ಎಂದೇನಿಲ್ಲ. Police ಕೆಲಸದಲ್ಲಿರುವವರಿಗೆ ಕೇಳಿ stress ಎಂದರೇನೆಂದು. ಇತ್ತೀಚೆಗೆ ಕಾನ್ಸ್ಟೇಬಲ್ ಒಬ್ಬ ಹಿರಿಯಧಿಕಾರಿಯನ್ನು ರಜೆ ಕೊಟ್ಟಿಲ್ಲ ಎಂದು ಕೊಂದಿದ್ದು ನೆನಪಿರಬಹುದು. ದಿನಕ್ಕೆ ಕನಿಷ್ಟ 14-15 ಗಂತೆ ಕೆಲಸ ಮಾಡುತ್ತಾರೆ, ಅದೂ ಸಾರ್ವಜನಿಕರಿಂದ, ಹಿರಿಯ ಅಧಿಕಾರಿಗಳಿಂದ, ರಾಜಕಾರಣಿಗಳಿಂದ ನಿರಂತರ ಕಿರಿಕಿರಿ ಅನುಭವಿಸುತ್ತ. ನಾವು ಒಮ್ಮೆಯಾದರೂ ಯೋಚಿಸಿದ್ದೇವೆಯೇ? Corporate ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಇದ್ದರೂ ದೊಡ್ಡ ಸಮಸ್ಯೆ ಎಂಬಂತೆ ವರ್ತಿಸುವ ಕೆಲ ಆಂಗ್ಲ ಪತ್ರಿಕೆಗಳು ಇವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿವೆಯೇ?

ಇರಲಿ, ಶಿಕ್ಷಕ ವೃತ್ತಿಯ ಬಗ್ಗೆ ಮಾತಾಡೋಣ. ನಾನಿಲ್ಲಿ ಹೇಳುತ್ತಿರುವುದು ಕಾಲೇಜ್ ಶಿಕ್ಷಣ, ಅದರಲ್ಲೂ ಇಂಜಿನಿಯರಿಂಗ್ ಶಿಕ್ಷಕ ವೃತ್ತಿಯ ಬಗ್ಗೆ ಆದರೂ, ಡಿಗ್ರಿ ಕಾಲೇಜು, ಶಾಲಾ ಶಿಕ್ಷಕ ವೃತ್ತಿಯಲ್ಲಿಯೂ ಇವುಗಳಲ್ಲಿ ಅನೇಕ ಸಾಮ್ಯತೆಗಳನ್ನು ನೋಡಬಹುದು.

ಇಪ್ಪತ್ತು ಮೂವತ್ತು ವರ್ಷ ಹಿಂದೆ ಹೇಗಿತ್ತೋ ಗೊತ್ತಿಲ್ಲ, ಆದರೆ ಈಗ ಶಿಕ್ಷಕ ವೃತ್ತಿ ತುಂಬಾ competetive ಆಗಿದೆ. ಎರಡು ಮೂರು ಗಂಟೆ ಕ್ಲಾಸ್ ತೆಗೆದುಕೊಂಡು ಆಮೇಲೆ ಸ್ಟಾಫ್ ರೂಮಿನಲ್ಲಿ ಹರಟೆ ಹೊಡೆಯುವ ಕಾಲ ಇದಲ್ಲ. ದಿನಕ್ಕೆ ಎರಡೇ ಗಂಟೆ ಕ್ಲಾಸ್ ಇರಬಹುದು ನಿಜ. ಆದರೆ ಒಬ್ಬ ಶಿಕ್ಷಕನ ಕೆಲಸ ಬರೀ ಪಾಠ ಮಾಡುವುದಕ್ಕೆ ಸೀಮಿತವಾಗಿಲ್ಲ. College management ಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಕೊಡುತ್ತಲೇ ಇರುತ್ತಾರೆ. ನೂರೆಂಟು ಅನೇಕ ಸಣ್ಣ ಸಣ್ಣ ಕೆಲಸಗಳು ಇದ್ದೇ ಇರುತ್ತವೆ. Test, assignment, correction, attendance, mentoring, ಆ ಕಮಿಟಿ, ಈ ಕಮಿಟಿ, ಹೀಗೆ ಪ್ರತೀ ಗಂಟೆಯೂ ಒಂದಲ್ಲ ಒಂದು ಚಟುವಟಿಕೆ ಶಿಕ್ಷಕರನ್ನು ಬಿಸಿಯಾಗಿಟ್ಟಿರುತ್ತವೆ. Engineering semester ಮುಗಿಯುವ ಹೊತ್ತಿಗೆ ಕೆಲಸದೊತ್ತಡ ವಿಪರೀತವಿರುತ್ತದೆ.

ಕ್ಲಾಸ್ ಇದ್ದಾಗ ಒಂದು ದಿನ ರಜೆ ತೆಗೆದುಕೊಳ್ಳುವುದು ಎಷ್ಟು ಕಷ್ಟ ಎಂದು ಅನುಭವಿಸಿದವರಿಗೇ ಗೊತ್ತು. College management ಗಳು ದಿನ ದಿನ ಸೃಷ್ಟಿಸುವ ಹೊಸ ಹೊಸ, ಸ್ವಲ್ಪವೂ ಕೆಲಸಕ್ಕೆ ಬಾರದ ಅರ್ಥಹೀನ rules ಗಳನ್ನು ಪಾಲಿಸುವ ಹಣೆಬರಹ ಅಧ್ಯಾಪಕವರ್ಗಕ್ಕೇ ಯಾವಾಗಲೂ. ಎಷ್ಟೋ ರೂಲ್ ಗಳಿಂದ ಸಂಸ್ಥೆಗಾಗಲೀ, ವಿದ್ಯಾರ್ಥಿಗಳಿಗಾಗಲೀ, ಅಧ್ಯಾಪರಿಗಾಗಲೀ ಪ್ರಯೋಜನವೇ ಇರುವುದಿಲ್ಲ. ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಗಮನ ಕೊಡದ ಆಡಳಿತವರ್ಗ, ಇಂಥ ಅಪ್ರಯೋಜಕ ರೂಲ್ ಗಳನ್ನು ಮಾಡಿ ಸಿಬ್ಬಂದಿ ಮೇಲೆ ಹೇರಲು ಆತುರ ತೋರಿಸುತ್ತವೆ.

ಶಿಕ್ಷಕರಿಗೆ ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವುದೇನೋ ನಿಜ. ಆದರೂ ಇದು management ಕೈಯ್ಯಲ್ಲಿದೆ ಎನ್ನುವುದು ಮರೆಯುವಂತಿಲ್ಲ. ಕೆಲ ಕಾಲೇಜಿನಲ್ಲಿ ರಜೆ ಕೊಟ್ಟಹಾಗೆ ಮಾಡಿ, ಮುಂದಿನ ಎರಡು ಶನಿವಾರಗಳು ಪೂರ್ತಿ ದಿನ ಕೆಲಸಮಾಡಿಸುವುದಿದೆ. ಇನ್ನು ಕೆಲ ಕಾಲೇಜಿನಲ್ಲ ಕೆಲ ರಜೆಗಳನ್ನು ಕೊಡುವುದೇ ಇಲ್ಲ. ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವವರು ಮರೆಯುವ ಒಂದು ವಿಷಯ ಎಂದರೆ software ಕ್ಷೇತ್ರದಲ್ಲಿರುವವರಿಗೆ ಪ್ರತಿ ಶನಿವಾರ ರಜೆ ಸಿಗುವುದರ ಬಗ್ಗೆ. ಸರಕಾರಿ ರಜೆಗಳು ವರ್ಷಕ್ಕೆ ಸುಮಾರು 23 ಇರಬಹುದು, ಅದರಲ್ಲೂ ಕೆಲವು ಭಾನುವಾರ ಬಂದರೆ ಹೋಯಿತು. ಆದರೆ ಸಾಫ್ಟ್ ವೇರ್ ನಲ್ಲಿ 52 ದಿನ ರಜೆ ಹೆಚ್ಚು ಸಿಗುತ್ತದೆ, ಇದರ ಬಗ್ಗೆ ಯಾರೂ ತಕರಾರು ಎತ್ತುವುದಿಲ್ಲ. ಸರಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ರಜೆ ಸಿಕ್ಕಿದರೆ ಹೊಟ್ಟೆ ಉರಿದುಕೊಳ್ಳುವವರೇ ಎಲ್ಲರೂ.

Vacation ಎನ್ನುವುದು ಇನ್ನೊಂದು ಹೊಟ್ಟೆ ಉರಿದುಕೊಳ್ಳುವ ವಿಷಯ. ಅನೇಕರಿಗೆ ಗೊತ್ತಿಲ್ಲ, vacation ಎನ್ನುವುದು ಸಿಗುವುದು ಅಷ್ಟು ಸುಲಭವಲ್ಲ. ಅನೇಕ ಕಾಲೇಜ್ ಗಳಲ್ಲಿ vacation ರಜ ಕೊಡುವುದಿಲ್ಲ, ಕೊಟ್ಟರೂ ಮೂರ್ನಾಲ್ಕು ದಿನ, ಹೆಚ್ಚೆಂದರೆ ಒಂದು ವಾರ. ಈ ದಿನಗಳಲ್ಲಿಯೂ valuation, invigilation, meeting ಎಂದು ಕಾಲೇಜಿಗೆ ಕರೆಸಿಕೊಳ್ಳುತ್ತಾರೆ.

Software ನಲ್ಲಿರುವವರು ಮನೆಗೆ ಬಂದಮೇಲೂ ಕೆಲಸ ಮಾಡುತ್ತಾರೆ ಎನ್ನುವುದು ದೊಡ್ಡ ಸುದ್ದಿ. ಇದು ಅವರಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಅನೇಕ ಕೆಲಸದವರೂ ಮನೆಗೆ ಕೆಲಸ ತರುತ್ತಾರೆ. ಶಿಕ್ಷಕರು notes ಮಾಡುವುದು, ಓದುವುದು, test papers correction ಮಾಡುವುದು ಹೀಗೆ ಅನೇಕರು ಮನೆಗೂ ತರುತ್ತಾರೆ ಕಾಲೇಜ್ ಕೆಲಸವನ್ನು. ಈಗ ಪಾಠ ಮಾಡುವುದಕ್ಕೂ Word, Powerpoint, Flash ಮುಂತಾದ ಆಧುನಿಕ ಸೌಲಭ್ಯಗಳನ್ನು ಬಳಸುವುದು ಸಾಮಾನ್ಯವಾಗಿರುವುದರಿಂದ ಮನೆಯಲ್ಲಿ ಇವುಗಳಲ್ಲಿ ಕೆಲಸಮಾಡುವುದು ಕೂಡ ಸಾಮಾನ್ಯವಾಗಿದೆ.

ಎಲ್ಲಾ ವೃತ್ತಿಗಳಲ್ಲಿರುವಂತೆ ಅಧ್ಯಾಪನ ವೃತ್ತಿಯಲ್ಲಿಯೂ ಏರಿಳಿತ ಸಹಜ. ಒಳ್ಳೆಯದು ಇದೆ, ಕೆಟ್ಟದ್ದೂ ಇದೆ. ತುಂಬ ಕಷ್ಟದ ಕೆಲಸ ಅಲ್ಲ ನಿಜ. ಆದರೆ ಅನೇಕರು ತಿಳಿದಂತೆ ಸುಲಭದ, ಕಾಲಹರಣದ ಕೆಲಸವಂತೂ ಅಲ್ಲ. ಹಿಂದೆ, ಬೇರೆಲ್ಲೂ ಕೆಲಸ ಸಿಗದವರು ಶಿಕ್ಷಕರಾಗುತ್ತಾರೆ ಎಂಬ ನಂಬಿಕೆಯಿತ್ತು. ಈಗ ಹಾಗಲ್ಲ. ಈ ಕ್ಷೇತ್ರದಲ್ಲಿಯೂ ಬೆಳೆಯಬಹುದು, ಸಾಧನೆ ಮಾಡಬಹುದು ಎಂದು ಅನೇಕರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. Corporate ಕೆಲಸ ಬಿಟ್ಟು ಇಂಜಿನಿಯರಿಂಗ್ ಕಾಲೇಜ್ professor ಆಗಿ ಅನೇಕರು ಬಂದಿದ್ದಾರೆ, ಬರುತ್ತಿದ್ದಾರೆ. ಸಂಶೋಧನೆ, ತಾಂತ್ರಿಕ ಲೇಖನ ಪ್ರಕಟನೆ (paper presentation), ತಾಂತ್ರಿಕ ಸಭೆ (conference)ಗೆ ಹೋಗುವುದು, ಹೀಗೆ ಉತ್ಸಾಹದಿಂದ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಆದರೂ ಇದೊಂದು career ಅಲ್ಲ ಎಂಬ ತಪ್ಪು ಕಲ್ಪನೆ ಹೋಗಲು ಇನ್ನೂ ಸಮಯ ಬೇಕು. ಶಿಕ್ಷಕ ವೃತ್ತಿ ಬೋರು, exciting ಅಲ್ಲ ಎಂಬ ಮನೋಭಾವನೆ ಇನ್ನೂ ಹೋಗಬೇಕಿದೆ. ಕೇವಲ corporate, software ಮುಂತಾದ ಕೆಲಸಗಳು exciting ಎಂಬ ಕುರುಡು ನಂಬಿಕೆ ಬಿಡಬೇಕು.

Sunday 27 May, 2012

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...


ಕ್ಷಮಿಸಿ, ಇದು ಮಲ್ಲಿಗೆ ಹೂವಲ್ಲ. ಚಿಕ್ಕಮಗಳೂರಿನ ತೋಟಗಳಲ್ಲಿ ಅರಳಿದ ಕಾಫಿ ಹೂವುಗಳು



Tuesday 14 February, 2012

ಒಡೆದಾಳುವ ನೀತಿ, ಈಗಿನ ರೀತಿ

ರೈತನ ಮಗನಾದ ನಾನು... ಇದು ಎಚ್.ಡಿ.ಕುಮಾರಸ್ವಾಮಿಯವರ ಮಾತಿನ ಒಂದು ತುಣುಕು.

ರೈತರ ಹೆಸರಿನಲ್ಲಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ... ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಂದರ್ಭ.

ಮೈಸೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಕೆಲ ವಿದ್ಯಾರ್ಥಿಗಳು ರಾಹುಲ್ ಗಾಂಧಿಗೆ ಮೀಸಲಾತಿಯ ಬಗ್ಗೆ ಆಕ್ಷೇಪಣೆ ಎತ್ತಿದರು. ಆಗ ರಾಹುಲ್ ಗಾಂಧಿ ಅವರಿಗೆ ಕೆಳಿದರು, "ನೀವು ಹಳ್ಳಿಗಳನ್ನು ಕಂಡಿದ್ದೀರಾ?". ಅವರು ಇಲ್ಲ ಎಂದರು. "ನಾನು ಕಂಡಿದ್ದೇನೆ, ಜನರ ಕಷ್ಟ ಏನೆಂದು ನನಗೆ ಗೊತ್ತು", ಎಂದು ರಾಹುಲ್ ಉತ್ತರಿಸಿದರಂತೆ.

ಯಾವುದೇ ರಾಜಕೀಯ ಮುಖಂಡನ ವರ್ಣನೆಯಲ್ಲಿ "ದೀನ ದಲಿತ, ಅಲ್ಪಸಂಖ್ಯಾತರ, ರೈತರ ನಾಯಕ" ಎಂದಿರಲೇಬೇಕು.
ಮಾಯಾವತಿ ಏನೇ ಮಾಡಲಿ, ಮಾತಾಡಲಿ, ಅಲ್ಲಿ 'ದಲಿತ' ಎಂಬ ಪದ ಬರದಿದ್ದರೆ ಕೇಳಿ.

ಬಂಗಾರಪ್ಪನವರನ್ನು ಎಲ್ಲಾ ರಾಜಕಾರಣಿಗಳೂ, ಪತ್ರಿಕೆಗಳೂ 'ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ' ಎಂದು ಹಾಡಿ ಹೊಗಳಿದರು.

ಮೇಲಿನದು ನಮ್ಮ ದೇಶದ ರಾಜಕೀಯ ನಾಯಕರ ಸಾರ್ವಜನಿಕ ಮುಖದ ಕೆಲ ಸ್ಯಾಂಪಲ್. ಎಷ್ಟು ವಿಚಿತ್ರ ನೋಡಿ. ಯಾವ ನಾಯಕನೂ ತಾನು ದೇಶದ ಇಲ್ಲ ರಾಜ್ಯದ ನಾಯಕ ಎಂದು ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ, ಯಾಕೆ? ಕೇವಲ ಕೆಲ ವರ್ಗ, ಕೋಮು, ಗುಂಪಿನ ಜೊತೆ ಯಾಕೆ ತಮ್ಮನ್ನು ಸೀಮಿತಗೊಳಿಸುತ್ತಾರೆ? ದೇಶ ಎಂದರೆ ದೇಶ, ಅಷ್ಟೇ. ಅಲ್ಲಿರುವವರು ಎಲ್ಲರೂ ಪ್ರಜೆಗಳು. ಅಲ್ಲಿ ಎಲ್ಲರಿಗೂ ಸಮಾನ ಹಕ್ಕು. ಎಲ್ಲರಿಗೂ ಕಷ್ಟ ಸುಖ, ನೋವು ನಲಿವು, ಸಾಧನೆ ವೈಫಲ್ಯ, ಒಳ್ಳೆಯತನ ಕೆಟ್ಟತನ ಇದ್ದೇ ಇರುತ್ತದೆ. ನಮ್ಮ ರಾಜಕೀಯದವರು ಹೀಗೆ ಕೆಲವೇ ಕೆಲ underprivileged ಎನಿಸಿಕೊಂಡ (ಹಾಗಂತ ಪ್ರಚಾರ ಮಾಡಲ್ಪಟ್ಟ) ಗುಂಪಿನ ಜೊತೆ ಮಾತ್ರ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ, ಯಾಕೆ? ಮತ ಬ್ಯಾಂಕ್ ರಾಜಕೀಯವೇ???

ಇದೇ ರೀತಿ ಯೋಚಿಸುತ್ತಾ ಹೋದರೆ, ನಾನು ನಮ್ಮ ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಒಬ್ಬ ಅನಾಮಧೇಯ, non-entity. ಕಾರಣಗಳು ಹೀಗಿವೆ:
* ನಾನು ಧರ್ಮದಲ್ಲಿ 'ಹಿಂದು' ಎನಿಸಿಕೊಂಡ ಧರ್ಮಕ್ಕೆ ಸೇರಿದವನು, ಅಂದರೆ ಅಲ್ಪಸಂಖ್ಯಾತ ಅಲ್ಲ.
* ನಾನು 'ಮೇಲ್ವರ್ಗ' ಎನಿಸಿಕೊಂಡ ಜಾತಿಗೆ ಸೇರಿದವನು. ಹಿಂದುಳಿದ ಅಥವಾ ದಲಿತ ಅಲ್ಲ.
* ನಾನು ಪುರುಷ. ಮಹಿಳೆ ಅಲ್ಲ.
* ನಾನು ನಗರದಲ್ಲಿ ಕೆಲಸದಲ್ಲಿದ್ದೇನೆ. ಅಂದರೆ ಹಳ್ಳಿಯಲ್ಲಿಲ್ಲ.
* ನಾನು ಒಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೇನೆ. ಅಂದರೆ ರೈತನಲ್ಲ.
* ನಾನು ಮಧ್ಯಮವರ್ಗದವನು, ಅಂದರೆ ಬಡವ, ದೀನನಲ್ಲ (ಸಧ್ಯಕ್ಕಂತೂ)
ನೋಡಿ, ರಾಜಕೀಯ ಪಕ್ಷಗಳು ಅಪ್ಪಿ ಮುದ್ದಾಡುವ ಯಾವ ಗುಣಲಕ್ಷಣಗಳೂ ನನ್ನಲ್ಲಿಲ್ಲ. ಅಂದರೆ ಈ ದೇಶದಲ್ಲಿ ನಾನು ಬದುಕಲಿಕ್ಕೇ ನಾಲಾಯಕ್ ಎಂದಾಯಿತು.

- ಕುಮಾರಸ್ವಾಮಿ ತಾನು 'ರೈತನ ಮಗ' ಎಂದು ಒಂದು ಸುದ್ದಿಘೋಷ್ಠಿಯಲ್ಲಿ ಹೇಳಿದ್ದರು. ಅವರು ಹೋಗಲಿ, ಸ್ವಯಂಘೋಷಿತ ಮಣ್ಣಿನ ಮಗ ದೇವೆಗೌಡರೇ ಮಣ್ಣನ್ನು ಕೈಯ್ಯಲ್ಲಿ ಮುಟ್ಟಿ ಎಷ್ಟು ವರ್ಷವಾಯಿತೋ ಏನೋ?

- ಯಡ್ಡಿಯೂರಪ್ಪನವರು ರೈತರ ಹೆಸರಲ್ಲೇ ಪ್ರಮಾಣವಚನ ಯಾಕೆ ಸ್ವೀಕರಿಸಬೇಕು? ಇತರರು ಯಾರೂ ಮನುಷ್ಯರಲ್ಲವೇ? ಅವರಿಗೆ ಸರಕಾರದ, ಮುಖ್ಯಮಂತ್ರಿಯ ನೆರವು ಅಗತ್ಯವಿಲ್ಲವೇ?

- ತಮಾಷೆ ನೋಡಿ. ಹುಟ್ಟಿದಾಗಿನಿಂದಲೂ ಸದಾ ಕಾಲ ರಕ್ಷಣಾದಳದವರ ಭದ್ರಕೋಟೆಯಲ್ಲೇ ಜೀವಿಸುತ್ತಿರುವ, ಹೊರ ಜಗತ್ತನ್ನು ಸಣ್ಣ ಕಿಂಡಿಯ ಮೂಲಕ ನೋಡುವ ರಾಹುಲ್ ಗಾಂಧಿಯಿಂದ ನಮ್ಮ ಮಧ್ಯಮವರ್ಗದ ಸಾಮಾನ್ಯ ಜನರಿಗೆ ಹಳ್ಳಿಜನರ ಬಗ್ಗೆ ಪಾಠ!!! ಒಂದಷ್ಟು ದಿನ ಕೆಲ ದಲಿತ, ರೈತರ ಮನೆಯಲ್ಲಿ ರೋಟಿ, ದಾಲ್, ಚಹಾ ಸೇವಿಸಿದ ಮಾತ್ರಕ್ಕೆ ಅವರ ಜೀವನಶೈಲಿ ಇವರಿಗೆ ಎಲ್ಲಾ ಗೊತ್ತಾಗಿಬಿಟ್ಟಿತೆ? ಇದು ಹೇಗೆಂದರೆ, ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡಿನ ಬಗ್ಗೆ, ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳುವಷ್ಟೇ ಹಾಸ್ಯಾಸ್ಪದ ಈ ಉಪದೇಶ.

- ಬಂಗಾರಪ್ಪನವರು ಯಾಕೆ ಕೇವಲ ದಲಿತ, ಹಿಂದುಳಿದವರ ನಾಯಕ ಆಗಬೇಕು? ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅಂದರೆ ಇಡೀ ರಾಜ್ಯಕ್ಕೆ ನಾಯಕರಾಗಬೇಕಾದವರು. ನಾನು ಹಿಂದುಳಿದ ವರ್ಗದವನು ಅಲ್ಲ ಎಂದಮಾತ್ರಕ್ಕೆ ನನಗೆ ಅವರ ನೆರವು ಅಗತ್ಯವಿರಲಿಲ್ಲವೆಂದೆ?

- ಮಾಯಾವತಿಯ ಮುಂದೆ ನೀವು ಸೂರ್ಯ, ಚಂದ್ರ, ನಕ್ಷತ್ರ, ಮುಂತಾದ ಯಾವುದೇ ವಿಷಯ ಮಾತಾಡಿ. ಅದರಲ್ಲೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಇಂಥ ಪದಗಳನ್ನು ತರದಿದ್ದರೆ ಅವರು ಮಾಯಾವತಿಯೇ ಅಲ್ಲ.

- ಇದೇ ರೀತಿ ಕುಮಾರಸ್ವಾಮಿಯ ಮುಂದೆ ಯಾವುದೇ ವಿಷಯ ಮಾತಾಡಿ. ಹಳ್ಳಿ, ರೈತ, ಮುಂತಾದ ಪದಗಳನ್ನು ಉದುರಿಸುತ್ತ, ಹಳ್ಳಿ ಪಟ್ಟಣದ ಮಧ್ಯೆ ಭೇದಭಾವ ತರದಿದ್ದರೆ ಕೇಳಿ.

- ಉತ್ತರ ಪ್ರದೇಶ ಚುನಾವಣೆ ಗಲಾಟೆಯನ್ನೇ ನೋಡಿ, ಮುಸ್ಲಿಮರನ್ನು ಓಲೈಸಲು ಏನೆಲ್ಲ ಕಸರತ್ತು ನಡೆಯುತ್ತಿದೆ. ಯಾಕೆ, ಬೇರೆ ಯಾರೂ ದೇಶದ ಪ್ರಜೆಗಳಲ್ಲವೆ?

- ದಿಗ್ವಿಜಯ್ ಸಿಂಗ್ ಗೆ ಎಲ್ಲಿ ಬಾಂಬ್ ಸ್ಫೋಟ ಆಗಲಿ, ಅದು ಹಿಂದುಗಳ ಕೈವಾಡವಾಗಿಯೇ ಕಾಣುತ್ತದೆ. ಹಿಂದುಗಳು ವೋಟ್ ಬ್ಯಾಂಕ್ ಅಲ್ಲವಲ್ಲ.

ಯಾಕೆ ಎಲ್ಲರೂ ಒಂದು ವರ್ಗ, ಗುಂಪು, ಜಾತಿ, ಧರ್ಮಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ? ಈ ಗುಂಪುಗಳು ಆರ್ಥಿಕವಾಗಿ ದುರ್ಬಲವಾದ, ಶೋಷಿತವೆನಿಸಿದ, ಸಂಖ್ಯೆಯಲ್ಲಿ ಕಡಿಮೆಯೆನಿಸಿದ, ಒಟ್ಟಿನಲ್ಲಿ underpriviliged ಎನಿಸಿದ ವರ್ಗಗಳು, ಸಾಮಾನ್ಯ ದೃಷ್ಟಿಯಲ್ಲಿ. ಇದು ಕೆಲಮಟ್ಟಿಗೆ ನಿಜವೂ ಹೌದು. ಇವರಿಗೆಲ್ಲ ಸಹಾಯ ಮಾಡುವುದು ಬೇರೆ, ತಾವು ಅವರನ್ನು ಮಾತ್ರ ಪ್ರತಿನಿಧಿಸುತ್ತೇವೆ ಎಂದು ಬಿಂಬಿಸಿಕೊಳ್ಳುವುದು ಬೇರೆ. ಎರಡಕ್ಕೂ ವ್ಯತ್ಯಾಸವಿದೆ. ಈ underpriviliged ಎನಿಸಿಕೊಳ್ಳುವ ವರ್ಗ, ಗುಂಪುಗಳಿಗೆ ಎಷ್ಟು ಬೇಕಾದರೂ ಸಹಾಯಮಾಡಲಿ, ತಪ್ಪಿಲ್ಲ. ಆದರೆ ತಾವು ಅವರ ಪ್ರತಿನಿಧಿ ಮಾತ್ರ ಎಂಬಂತೆ ವರ್ತಿಸುವುದು ಕಿರಿಕಿರಿಯೆನಿಸುತ್ತದೆ. ಹೋಗಲಿ ಅದನ್ನೂ ಸರಿಯಾಗಿ ಮಾಡುತ್ತಾರೆಯೇ ನಮ್ಮ ಪುಢಾರಿಗಳು? ಅದೂ ಇಲ್ಲ. ಹೊರಜಗತ್ತಿಗೆ, ಮಾಧ್ಯಮದ ಮುಂದೆ ದೀನ ದಲಿತ, ಅಲ್ಪಸಂಖ್ಯಾತ, ರೈತ, ಬಡವರ ಬಂಧು ಎಂದು ಪ್ರಚಾರ ಪಡೆಯುವ ಅವರು, ತೆರೆಯ ಹಿಂದೆ ಶ್ರೀಮಂತರ, ಬಂಡವಾಳಶಾಹಿಗಳ ಸಹವಾಸ ಮಾತ್ರ ಮಾಡುತ್ತಾರೆ. ಆಗ, ಯಾವ ದೀನ ದಲಿತ ಬಂದರೂ ಮನೆಯ ಹತ್ತಿರವೂ ಸುಳಿಯಬಿಡುವುದಿಲ್ಲ. ಏನಿದ್ದರೂ ಪ್ರಚಾರ ಮುಖ್ಯ, ನಿಜವಾದ ಕಳಕಳಿಯಲ್ಲ.

ಬೇರೆ ಕಡೆ ಈ ಥರದ ಪಕ್ಷಪಾತ ಧೋರಣೆ ಅತೀ ಕಡಿಮೆ ಎನ್ನಬಹುದು. ಬರಾಕ್ ಒಬಾಮ ಕಪ್ಪು ವರ್ಣೀಯ ವ್ಯಕ್ತಿ. ಇಡೀ ಅಮೆರಿಕಾ ದೇಶದ ಇತಿಹಾಸದಲ್ಲಿಯೇ ಕಪ್ಪು ವ್ಯಕ್ತಿ ಅಷ್ಟು ದೊಡ್ಡ ಹುದ್ದೆಗೆ ಬಂದಿದ್ದು ಇದೇ ಮೊದಲು. ಅವರ ಅಧ್ಯಕ್ಷ ಚುನಾವಣೆಯ ಭಾಷಣ ಕೇಳಿದ್ದೀರಾ? ಅಥವಾ ಈಗಿನ ಅವರ ಭಾಷಣಗಳು, ಹೇಳಿಕೆಗಳು? ಎಲ್ಲಿಯಾದರೂ ತಮ್ಮ ಜನರ ಕಷ್ಟ ನಷ್ಟಗಳ ವರ್ಣನೆ ಮಾಡಿದ್ದು, ಅದೆಲ್ಲವೂ ಬಿಳಿ ಜನರ ದಬ್ಬಾಳಿಕೆಯಿಂದ ನಮ್ಮ ಜನ ಎಷ್ಟು ನೋವಿನಲ್ಲಿ ಇದ್ದೇವೆ ಎಂದು ಎಲ್ಲಿಯೂ ಗೋಳಾಡಿಲ್ಲ, ಮತ್ತು ಇದೇ ನೆಪದಲ್ಲಿ ಬಿಳಿಯರ ತೆಗಳಿಕೆ, ನಮ್ಮ ಜನರ ಹಿಂದುಳಿದಿರುವುಕೆಗೆ ಅವರೇ ಕಾರಣ ಎಂದು ಎದೆ ಬಡಿದುಕೊಂಡು ಬೊಬ್ಬೆ ಹೊಡೆದಿಲ್ಲ. ಯಾವುದರಲ್ಲೂ ಅವರು ತಮ್ಮ ಜನಾಂಗದ (ಕಪ್ಪು ಜನ) ಉದ್ಧಾರದ ಬಗ್ಗೆ ಮಾತ್ರ ಮಾತಾಡುವುದಿಲ್ಲ. ಏನೇ ಹೇಳಿದರೂ ಇಡೀ ದೇಶದ ಬಗ್ಗೆ ಮಾತಾಡುತ್ತಾರೆ. ಏನೇ ಸಮಸ್ಯೆ ಬಂದರೂ, ಸರಕಾರದ ಏನೇ ಯೋಜನೆ ಇದ್ದರೂ ಅದು ದೇಶದ ಎಲ್ಲರಿಗೂ ತಟ್ಟುತ್ತದೆ. ಯಾವುದೋ ಒಂದು ವರ್ಗ ಯಾವುದೋ ಕಾರಣಕ್ಕೆ ಹಿಂದುಳಿದಿದೆ ಎಂದ ಮಾತ್ರಕ್ಕೆ ಸಮಸ್ಯೆಗಳು ಅವರಿಗೆ ಮಾತ್ರ ಬರುತ್ತದೆ ಎಂದಲ್ಲ. 

ಹಾಗೆ ನೋಡಿದರೆ ಅಲ್ಲಿ ಈಗಲೂ ಕರಿಜನರ ಬಗ್ಗೆ ಅಸಡ್ಡೆ ಭಾವನೆ ಇದೆ, ಹೊರಗಲ್ಲದಿದ್ದರೂ ಒಳೊಗೊಳಗೆ ಅವರ ಬಗ್ಗೆ ಕೀಳು ಭಾವನೆ ಇದೆ ಬಿಳಿಯರಲ್ಲಿ. ದೈಹಿಕ ಶ್ರಮದಾಯಕ, ಕೊಳಕು ಎನಿಸುವ ಕೆಲಸ ಮಾಡುವುದು ಹೆಚ್ಚಿನವರು ಈ ಕಪ್ಪುಜನರೇ. ಬಡತನ ಅವರಲ್ಲೇ ಹೆಚ್ಚಿದೆ, ಅಪರಾಧಿಗಳೂ ಕೂಡಾ. ಬಿಳಿ ಜನರ ಸರಕಾರೀ ಶೋಷಣೆ ಮಾಡಲು ಒಬಾಮ, ಅಥವಾ ಅಲ್ಲಿಯ ಯಾವ ರಾಜಕಾರಣಿಯೂ ಇದು ಯಾವುದನ್ನೂ ನೆಪ ಮಾಡಿಕೊಂಡಿಲ್ಲ

ನಮ್ಮ ಅಬ್ದುಲ್ ಕಲಾಮ್ ಅವರನ್ನೇ ನೋಡಿ. ರಾಮೇಶ್ವರದ ಹತ್ತಿರದ ಸಣ್ಣ ಹಳ್ಳಿಯಲ್ಲಿ, ದೊಡ್ಡ ಸಂಸಾರದ ಬಡ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ, ಅನೇಕ ದೊಡ್ಡ ಹುದ್ದೆ ಹೊಂದಿ, ರಾಷ್ಟ್ರಪತಿ ಕೂಡಾ ಆದವರು. ಈಗಲೂ ಕ್ರಿಯಾಶೀಲ. ಎಂದಾದರೂ ಅವರು ತಮ್ಮ ಮುಸ್ಲಿಮ್ identity ಪ್ರದರ್ಶನ ಮಾಡಿದ್ದಾರಾ? ತಮ್ಮ ಜನರ ಅಲ್ಪಸಂಖ್ಯಾತತನವನ್ನೇ ಬಂಡವಾಳ ಮಾಡಿಕೊಂಡಿದ್ದಾರಾ? ಎಲ್ಲೆಲ್ಲಿಯೂ ಅವರು ಬರೀ ಮುಸ್ಲಿಮರ ವಿಷಯ ಮಾತ್ರ ಮಾತಾಡುವುದಿಲ್ಲ. ಅವರ ಮಾತೇನಿದ್ದರೂ ದೇಶದ ಬಗ್ಗೆ, ವಿಜ್ನಾನದ ಬಗ್ಗೆ, ಶಿಕ್ಷಣದ ಬಗ್ಗೆ. ಒಟ್ಟಿನಲ್ಲಿ, ಇಡೀ ದೇಶದ ಏಳಿಗೆ ಬಗ್ಗೆ. ಈ ಜನಾಂಗ ಶತಮಾನಗಳಿಂದ ಕಷ್ಟದಲ್ಲಿತ್ತು, ಆ ವರ್ಗ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಇವರು ಹಳ್ಳಿಯವರು...ಆದ್ದರಿಂದ ಅವರಿಗೆ ಮಾತ್ರ ಕಷ್ಟವಿರುತ್ತದೆ, ಅವರನ್ನು ಮಾತ್ರ ಉದ್ಧಾರ ಮಾಡಬೇಕು, ಇವರೆಲ್ಲರ ಸಮಸ್ಯೆಗಳಿಗೆ ಇತರ ವರ್ಗ, ಧರ್ಮ, ಜಾತಿಯವರೇ ಕಾರಣ ಎಂಬಂತಹ ಸಂಕುಚಿತ ನಡವಳಿಕೆ ಒಮ್ಮೆಯಾದರೂ ತೋರಿಸಿದ್ದಾರೆಯೆ? ಅದಕ್ಕೇ ಏನೋ, ಅಬ್ದುಲ್ ಕಲಾಮ್ ಹೆಚ್ಚು ಕಡಿಮೆ ಎಲ್ಲರೂ, ಅಂದರೆ, ಜಾತಿ, ಧರ್ಮ, ವರ್ಗ ಬೇದ ಇಲ್ಲದೆ ಎಲ್ಲರೂ ಇಷ್ಟಪಡುವುದು. ಇನ್ನೊಮ್ಮೆ ರಾಷ್ಟ್ರಪತಿಯಾಗಲಿ ಎಂದು ಅನೇಕರ ಆಸೆ. ವಿಪ್ರೋದ ಅಜೀಮ್ ಪ್ರೇಮ್ ಜಿ ಎಂದೂ ತಮ್ಮ ಅಲ್ಪಸಂಖ್ಯಾತತನವನ್ನು ಬಂಡವಾಳ ಮಾಡಿಕೊಳ್ಳಲಿಲ್ಲ.

ಪಾರ್ಸಿಗಳು ನಿಜಕ್ಕೂ ಅಲ್ಪಸಂಖ್ಯಾತರು, ಅವರ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಕಡಿಮೆಯಾಗುತ್ತಿದೆ. ಜೈನರು, ಸಿಖ್ಖರು, ಬೌದ್ಧರು ಅಲ್ಪಸಂಖ್ಯಾತರೇ. ಯಾವ ರಾಜಕಾರಣಿಯೂ ತಲೆಕೆಡಿಸಿಕೊಂಡಹಾಗಿಲ್ಲ. ಅವರು ಮತ ಬ್ಯಾಂಕ್ ಅಲ್ಲವಲ್ಲ. ನಮ್ಮ ದಲಿತ ಹಿಂದುಳಿದ ಸಂಘಗಳಿಗೆ ಬುದ್ಧ ತುಂಬಾ ಆಪ್ತ. ಹೆಚ್ಚು ಕಡಿಮೆ ಅದೇ ರೀತಿಯ ಜೀವನ, ಸಂದೇಶ ಸಾರಿದ ಮಹಾವೀರನ ಪರಿಚಯವೇ ಇವರಿಗಿಲ್ಲ. ಕಾರಣ ಸುಸ್ಪಷ್ಟ. ಬುದ್ಧನನ್ನು ಹಾಡಿ ಹೊಗಳುವುದು ಒಂದೇ ಕಾರಣಕ್ಕೆ, ಅವರ ಆರಾಧ್ಯ ದೈವ ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂಬುದಕ್ಕೆ. ಅವರೇನಾದರು ಜೈನರಾಗಿದ್ದರೆ ಆಗ ಇವರೆಲ್ಲ ಜೈನ ಧರ್ಮವನ್ನು ಅಟ್ಟಕ್ಕೇರಿಸುತ್ತಿದ್ದರು. ಇಲ್ಲಿ ಬುದ್ಧನ ಸಂದೇಶ ಮುಖ್ಯವಲ್ಲ, ಅಂಬೇಡ್ಕರ್ ಏನು ಮಾಡಿದರು ಎಂಬುದು ಮಾತ್ರ. ಒಬ್ಬರಿಗಾದರೂ ಬುದ್ಧನ ಜೀವನ, ಸಂದೇಶ ಗೊತ್ತಿದ್ದರೆ ಕೇಳಿ.

ರಾಜಕಾರಣಿಗಳಾದರೋ ಕುರ್ಚಿಗಾಗಿ ಹೀಗೆ ಮಾಡುತ್ತಾರೆನ್ನಬಹುದು. ಆದರೆ ಬುದ್ಧಿಜೀವಿಗಳೆನ್ನಿಸಿಕೊಂಡವರು ಕೂಡ ಭೇದಭಾವ ಮಾಡಿ ಜಿಗುಪ್ಸೆ ಹುಟ್ಟಿಸುತ್ತಾರೆ. ಕೆಲ ರಾವಣ, ಕೀಚಕ, ಹಾಯ್, ಹಲೋ ವಾರಪತ್ರಿಕೆಗಳಿಗೆ ಹಿಂದುಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ಟೀಕಿಸುವುದೇ ಪರಮ ಗುರಿ. ಇತರ ಧರ್ಮಗಳಲ್ಲಿ ಏನೇ ಹುಳುಕಿದ್ದರೂ ಕಣ್ಣುಮುಚ್ಚಿ, ಹಿಂದೂ ಧರ್ಮದ ಕೆಲ ಕೆಟ್ಟ ಆಚರಣೆಗಳನ್ನೇ ವೈಭವೀಕರಿಸಿ ತೆಗಳುವುದೇ ಸಾಧನೆಯಾಗಿದೆ. ತಮ್ಮ ಬಡತನ, ಅನಕ್ಷರತೆ, ಅಲ್ಪಸಂಖ್ಯಾತತನ, ಹಿಂದುಳಿದಿರುವಿಕೆ, ಇಂಥ ನಕಾರಾತ್ಮಕಗಳನ್ನೇ ಬಂಡವಾಳ ಮಾಡಿಕೊಳ್ಳುವ, ಅದನ್ನು ಒಂದು badge of honour ಎಂಬಂತೆ ಹೆಮ್ಮೆಯಿಂದ ಹೊತ್ತು ತಿರುಗುವುದು ನಮ್ಮ ದೇಶದಲ್ಲಿ ಮಾತ್ರ ಎಂದು ನನ್ನ ಅನಿಸಿಕೆ. ತಾವು ಹಿಂದುಳಿದವರು, ಬಡತನದಲ್ಲಿ ಬೆಳೆದವರು/ಬಡವರು, ಹೆಚ್ಚು ಓದಿಲ್ಲದವರು, ಹಳ್ಳಿಯಲ್ಲಿ ಹುಟ್ಟಿಬೆಳೆದವರು ಎಂದು ಹೇಳಿಕೊಳ್ಳುವುದೇ ಒಂದು ಫ್ಯಾಶನ್ ಆಗಿಹೋಗಿದೆ. ನಮ್ಮ ಹುಟ್ಟು ನಮ್ಮ ಕೈಯಲ್ಲಿಲ್ಲ. ಅದಕ್ಕಾಗಿ ಬೇಸರ ಪಡಬೇಕಿಲ್ಲ, ಕೀಳರಿಮೆ ಬೇಕಿಲ್ಲ. ಅದೇ ರೀತಿ ಅದನ್ನು ಒಂದು ಅಸ್ತ್ರವಾಗಿ ಬಳಸುವುದೂ ಕೂಡ ತಪ್ಪು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವುದನ್ನು ಬಿಟ್ಟು ತಮ್ಮ ಕಷ್ಟಕ್ಕೆ ಇತರ ಎಲ್ಲರ ಮೇಲೆ ಹರಿ ಹಾಯುವುದನ್ನು ನಮ್ಮ ರಾಜಕೀಯದವರು, ಬುದ್ಧಿ(ಲದ್ದಿ)ಜೀವಿಗಳು, ಮಾಧ್ಯಮಗಳು ಪ್ರಚೋದಿಸುತ್ತಿವೆ.

ಶ್ರೀಮಂತರೆಲ್ಲ ಕೆಟ್ಟವರಲ್ಲ. ಬಡವ, ದೀನ ಎನಿಸಿಕೊಂಡವರೆಲ್ಲ ಮುಗ್ಧರು, ಒಳ್ಳೆಯವರೂ ಆಗಬೇಕಿಲ್ಲ. ನಮ್ಮ ಈಗಿನ ಹೆಚ್ಚಿನ ಮಧ್ಯಮ ವರ್ಗ, ಶ್ರೀಮಂತವರ್ಗದವರು ಕಷ್ಟಪಟ್ಟು ಮೇಲೆ ಬಂದು, ಗಂಟೆಗಟ್ಟಲೆ ದುಡಿಯುವವರಾಗಿದ್ದಾರೆ. ದುಡಿಯುವುದು ಎಂದರೆ ಕೇವಲ ಹೊಲಗದ್ದೆಗಳಲ್ಲಿ ಬೆವರು ಸುರಿಸುವುದು ಮಾತ್ರವಲ್ಲ. ಏರ್ ಕಂಡೀಶನ್ ಕ್ಯಾಬಿನ್ ನಲ್ಲಿ ಕೂತವರೂ ಕಷ್ಟಪಟ್ಟೇ ದುಡಿಯುತ್ತಾರೆ.

ಗ್ರಾಮೀಣ ಜನರೆಲ್ಲ ಮುಗ್ಧರು, ನಗರದ ಬಣ್ಣದ ಮಾತಿನ ಜನರಿಂದ ಮೋಸಹೋಗುವವರು ಎಂಬಂತೆ ಈಗಲೂ ಕಥೆ, ಕಾದಂಬರಿ, ಸಿನೆಮಾಗಳಲ್ಲಿ ಚಿತ್ರಿತವಾಗುತ್ತದೆ. ನಮ್ಮ ರಾಜಕಾರಣಿಗಳಿಗೆ, ಸಾಹಿತಿಗಳಿಗೆ, ಸಿನೆಮಾದವರಿಗೆ ಹಳ್ಳಿ ಎಂದ ಕೂಡಲೆ ನೆನಪಾಗುವುದು ರೈತರು ಮಾತ್ರ. 'ಅನ್ನದಾತ', 'ನೇಗಿಲ ಯೋಗಿ' ಮುಂತಾದ ಸುಂದರ ವರ್ಣನೆ ಬೇರೆ. ಹಳ್ಳಿ ಎಂದ ಮಾತ್ರಕ್ಕೆ ರೈತ ಮಾತ್ರ ಅಲ್ಲಿರುತ್ತಾನೆಯೇ? ಯಾಕೆ ಹಳ್ಳಿಯಿಲ್ಲಿ ಇತರ ವೃತ್ತಿಯವರು ಇಲ್ಲವೇನು? ಹಳ್ಳಿಯಲ್ಲಿ ವೈದ್ಯರು, ಶಿಕ್ಷಕರು, ಚಮ್ಮಾರರು, ಬ್ಯಾಂಕ್ ನೌಕರರು, ಅಂಗಡಿ ಇಟ್ಟಿರುವವರು, LIC ಏಜೆಂಟರು, ಹೀಗೆ ಎಲ್ಲ ವೃತ್ತಿಯವರೂ ಇದ್ದಾರೆ. ನಮ್ಮ ಕುಟುಂಬ ಹಳ್ಳಿಯದ್ದಾದರೂ ನಮಗೆ ಹೊಲಗಳಿಲ್ಲ, ಗದ್ದೆಯಲ್ಲಿ ಯಾರೂ ಕೆಲಸ ಮಾಡಿಯೇ ಇಲ್ಲ.

ಶೋಷಣೆ ಈಗಲೂ ಇದೆ ನಿಜ. ದೌರ್ಜನ್ಯದ ಸುದ್ದಿ ಈಗಲೂ ಪತ್ರಿಕೆಯಲ್ಲಿ ಇರುತ್ತದೆ. ಅದಕ್ಕೆ ಬೇಕಾದ "ಸರಿಯಾದ, ನಿಜವಾದ" ಸಹಾಯ ಯಾವ ಒಂದು ಸೇನೆ, ಸಮಿತಿ, ಪಕ್ಷವೂ ಮಾಡುವುದಿಲ್ಲ. ಹೋರಾಟ, ಹಾರಾಟ, ಇವರ ಕಷ್ಟಕ್ಕೆಲ್ಲ ಅವರು ಕಾರಣ, ಅವರನ್ನೆಲ್ಲ ತುಳಿಯುವುದು ಇವರು ಎಂಬ ಚೀರಾಟ, ಘೋಷಣೆ ಕೂಗುವುದು ಬಿಟ್ಟು ಬೇರೇನು ಮಾಡಿವೆ ಈ ಸಂಘ, ಸೇನೆ, ಸಮಿತಿ, ಪತ್ರಿಕೆಗಳು?

ನನ್ನ ಪ್ರಶ್ನೆ ಇಷ್ಟೆ. ಒಂದು ದೇಶ ಎಂದರೆ ಎಲ್ಲಾ ಥರದ ಜನರಿರುತ್ತಾರೆ. ಒಳ್ಳೆಯವರು, ಕೆಟ್ಟವರು, ಬುದ್ಧಿವಂತರು, ಮೂರ್ಖರು, ಸಾಧಕರು, ವಿಫಲಿಗಳು ಎಲ್ಲಾ ಜನಾಂಗ, ಜಾತಿ, ಧರ್ಮ, ದೇಶದಲ್ಲಿರುತ್ತಾರೆ. ಮೇಲ್ವರ್ಗದವರೆಲ್ಲ ಬುದ್ಧಿವಂತರಲ್ಲ. ಮೀಸಲಾತಿಯಿಂದ ಬಂದವರೆಲ್ಲ ದಡ್ದರಲ್ಲ. ಅದೇ ರೀತಿ, 'ಈ' ವರ್ಗದವರೆಲ್ಲ ಪರಮ ಸುಖಿಗಳು, ಅವರಿಗೆ ಸರಕಾರದ ನೆರವು ಅಗತ್ಯವಿಲ್ಲ, 'ಆ' ವರ್ಗದವರು ನೂರಾರು ವರ್ಷದಿಂದ ತುಳಿತಕ್ಕೊಳಗಾದವರು, ಅದಕ್ಕೆ ಈಗಲೂ ಅವರಿಗೆ ಮಾತ್ರ ಸಹಾಯ ಮಾಡಬೇಕು ಎಂದೋ, ಆ ಜಾತಿಯವರು ಅಲ್ಪಸಂಖ್ಯಾತರು, ಈ ಬಹುಸಂಖ್ಯಾತರು ಅವರನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತಾರೆ ಎಂದು ಭಯಾನಕ ವರ್ಣನೆ ಮಾಡುತ್ತ ಭೀತಿ ವಾತಾವರಣ ಸೃಷ್ಟಿಸುತ್ತ ಹೋಗುವುದೇ ರಾಜಕಾರಣವೇ, ಅದೇ ಬುದ್ಧಿಜೀವಿತನವೇ? ಕೆಲ ಜನಾಂಗವನ್ನು ಮಾತ್ರ ಯಾಕೆ ಪ್ರತಿನಿಧಿಸಬೇಕು? ಇದು ಬ್ರಿಟಿಶರ divide and rule ಗಿಂತ ಹೇಗೆ ಭಿನ್ನವಾಗುತ್ತದೆ?

Monday 12 September, 2011

ಉಭಯ ಕುಶಲೋಪರಿ

"ಮಹಾರಾಜರು ಯುದ್ಧದಿಂದ ವಿಜಯಿಯಾಗಿ ಬರುತ್ತಿದ್ದಾರಂತೆ. ಸ್ವಾಗತಕೆ ಸಿದ್ಧತೆ ಮಾಡಬೇಕು"

Friday 1 July, 2011

ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ...

ಸೂರ್ಯ. ಕಣ್ಣಿಗೆ ಕಾಣುವ ದೇವರು. ಭಾರತೀಯ ಮತ್ತು ಜಗತ್ತಿನ ಅನೇಕ ಸಂಸೃತಿಯಲ್ಲಿ ತುಂಬಾ ಮಹತ್ವ ಪಡೆದ ಆಕಾಶಕಾಯ. ಸೂರ್ಯ, ರವಿ, ಭಾಸ್ಕರ, ದಿನಕರ, ದಿವಾಕರ, ಮಿತ್ರ, ಅರ್ಕ, ಸವಿತಾ(ಸವಿತೃ), ಭಾನು, ಆದಿತ್ಯ, ಹಿರಣ್ಯಗರ್ಭ, ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಗ್ರಹಗಳ ಅಧಿಪತಿ ಸೂರ್ಯ.

ಈಜಿಪ್ತ್ ನಾಗರೀಕತೆಯಲ್ಲಿ ರಾ ಹೆಸರಿನಲ್ಲಿ ಅತಿ ಮುಖ್ಯ ದೇವತೆ ಸೂರ್ಯ.
ದಕ್ಷಿಣ ಅಮೇರಿಕಾ ನಾಗರಿಕತೆಗಳಾದ ಮಾಯಾ ಮತ್ತು ಅಜ್ಟೆಕ್ ಜನಾಂಗಗಳು ಸೂರ್ಯಾರಾಧನೆ ಮಾಡುತ್ತಿದ್ದವು. ಸೂರ್ಯನಿಗೆ ನರಬಲಿ ಕೊಟ್ಟು ತೃಪ್ತಿಪಡಿಸುತ್ತಿದ್ದರು.
ಗ್ರೀಕ್, ರೋಮನ್ನರಿಗೆ ಹೀಲಿಯೋಸ್ ಅಥವಾ ಅಪೋಲೋ ಆಗಿ ಸೂರ್ಯ ಕಾಣಿಸಿಕೊಂಡ.
ಪರ್ಷ್ಯನ್ನರು ಕೂಡ ಸೂರ್ಯನನ್ನು ಮಿತ್ರ ಎಂದು ಕರೆದರು.

ಭಾರತೀಯ ಪುರಾಣಗಳ ಪ್ರಕಾರ ಸೂರ್ಯ ಅದಿತಿಯ ಮಗ. ಅವನ ಪತ್ನಿಯರು ಸಂಧ್ಯಾ(ಸಂಜನಾ, ಸಂಜ್ಞ) ಮತ್ತು ಛಾಯಾ. ಮನು, ಶನಿ, ಯಮ ಮತ್ತು ಯಮಿ ಅವನ ಮಕ್ಕಳು. ಯಮಿಯು ತನ್ನ ಸಹೋದರ ಯಮನನ್ನೇ ಮೋಹಿಸಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕರಗಿ ನೀರಾಗಿ ಯಮುನಾ ನದಿಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ.
ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಕೂಡ ಸೂರ್ಯನ ಮಕ್ಕಳು.

ಒಡಿಶಾ ರಾಜ್ಯದ ಕೋನಾರ್ಕ ಸೂರ್ಯ ದೇವಾಲಯದ ಅತಿ ಪ್ರಸಿದ್ಧ ತಾಣ. ಗಂಗದೊರೆಯಾದ ನರಸಿಂಹದೇವ ಇದನ್ನು ಹದಿಮೂರನೆ ಶತಮಾನದಲ್ಲಿ ಕಟ್ಟಿಸಿದನು. ಇದು ಈಗ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ಒಳಗೆ ಪ್ರವೇಶ ಮುಚ್ಚಿದ್ದು, ಹೊರಗಿನಿಂದ ಮಾತ್ರ ನೋಡಲು ಸಾಧ್ಯ. ಹೊರಗೋಡೆಯ ಮೇಲೆ ಉತ್ಕೃಷ್ಟವಾದ ಕೆತ್ತನೆ ಇವೆ. ಇದನ್ನು ರಥದ ಮಾದರಿಯಲ್ಲಿ ಕಟ್ಟಲಾಗಿದೆ. ಇಪ್ಪತ್ತುನಾಲ್ಕು ಗಾಲಿಗಳಿವೆ (ಇಪ್ಪತ್ತುನಾಲ್ಕು ಗಂಟೆಗಳನ್ನು ಸೂಚಿಸಲು). ರಥದ ಕೀಲಿನ ನೆರಳು ದಿನದ ಸಮಯವನ್ನು ಸೂಚಿಸುತ್ತದೆ. ಏಳು ಕುದುರೆಗಳಿದ್ದವಂತೆ (ಏಳು ವಾರ, ಏಳು ಕಿರಣ) ಮೊದಲು. ಈಗ ಅವು ಸಂಪೂರ್ಣ ನಾಶವಾಗಿವೆ, ಒಂದನ್ನು ಬಿಟ್ಟು.


 ಕೋನಾರ್ಕದ ಸೂರ್ಯ ದೇವಾಲಯದ ಸೂರ್ಯ ರಥದ ಚಕ್ರ
  
ಕೋನಾರ್ಕದ ಸೂರ್ಯ

ಸೂರ್ಯೋದಯ, ಸೂರ್ಯಾಸ್ತ ಯಾವಾಗಲೂ ಸುಂದರ ದೃಶ್ಯಗಳೇ. ಅವುಗಳಲ್ಲಿ ಕೆಲವು ಇಲ್ಲಿ...

ಸೂರ್ಯ ಸಮುದ್ರ, ಗುಡ್ಡ ಬೆಟ್ಟದಿಂದ ಮಾತ್ರ ಮೇಲೇಳುವುದಿಲ್ಲ, ಕಾರ್ಖಾನೆ ಹೊಗೆ ಕೊಳವೆಯಿಂದ ಕೂಡಾ ಮೇಲೇಳುತ್ತಾನೆ ನೋಡಿ

Thursday 28 April, 2011

ಏನಿದರ ಹೆಸರು? ನೀವೇ ಇಟ್ಟುಕೊಳ್ಳಿ...

ಏಪ್ರಿಲ್ 24, ಪ್ರಕಾಶಣ್ಣನ 'ಇದೇ ಇದರ ಹೆಸರು' ಬಿಡುಗಡೆ ಸಮಾರಂಭದ ಕೆಲ ದೃಶ್ಯಗಳು

ಉಪ್ಪಿಟ್ಟು ಶಿರಾ, ಇನ್ನೂ ಸಲ್ಪ ಹಾಕ್ಸ್ಕಳಿ

ಕಾಫಿ ಬಗ್ಗೆ ನನಗೊಂದು ಹನಿಗವನ ನೆನಪಾಗ್ತಿದೆ ಮಾರಾಯ್ರೆ

ಪಂಚಮ್ ಹಳಿಬಂಡಿ, ಉಪಾಸನಾ ಮೋಹನ್

ನಿಮ್ಮೊಳಗೊಬ್ಬ, ಅಲ್ಲಲ್ಲ, ನಮ್ಮೊಳಗೊಬ್ಬ ಬಾಲು ಛಾಯಾಗ್ರಹಣ

ದಿಗ್ವಾಸ್ ಹೆಗಡೆ ತಲ್ಲೀನತೆ ನೋಡಿದರೆ ಸಾಕು ಅವರ 'ಚಿತ್ರಪಟ'ದ ಗುಣಮಟ್ಟ ತಿಳಿಯಲು

ಸಣ್ಣವನಾಗಿದ್ದಾಗ ತುಂಬಾ ತುಂಟ.....ಪ್ರಕಾಶಣ್ಣ ಮತ್ತವರ ಅಕ್ಕ

ಹನಿಗವನ punಡಿತ ಡುಂಡಿರಾಜ್ ಮತ್ತು 'ಕಳ್‍ಮಂಜ' ಕೋಮಲ್

ನೋಡಿ ಸ್ವಾಮಿ, ಇದೇ ಇದರ ಹೆಸರು

'ಶುಭಂ'ಗಿಂತ ಮುಂಚೆ ಗ್ರೂಪ್ ಫೋಟೋ

Sunday 27 February, 2011

ಪುರಾಣಗಳ ಬಗ್ಗೆ ಪುರಾಣ

ಮೊದಲೇ ಹೇಳಿಬಿಡುತ್ತೇನೆ. ಇಲ್ಲಿ ಬರೆದಿರುವ ವಿಷಯಗಳು ನಾನು ಓದಿ, ಕೇಳಿದ್ದರ ಬಗ್ಗೆ ಬಂದ ಕೆಲ ಆಲೋಚನೆಗಳು ಅಷ್ಟೆ ಹೊರತು ಯಾವುದೇ ಗಂಭೀರ ಸಂಶೋಧನೆ ಅಲ್ಲ. ಆದ್ದರಿಂದ ಕೆಲವು ತಪ್ಪು ಬರಹಗಳಿರುವ ಸಾಧ್ಯತೆ ಇದೆ.


ಯುದ್ಧ, ಆಡಳಿತದಲ್ಲಿ ಮಹಿಳೆ
ಈಗ ಸೈನ್ಯದಲ್ಲಿ, ವಾಯುಪಡೆಯಲ್ಲಿ ಸ್ತ್ರೀಯರು ದೊಡ್ಡ ಹುದ್ದೆಯಲ್ಲಿದ್ದರೆ ಅದೇ ದೊಡ್ಡ ಸುದ್ದಿ. ಆದರೆ ನಮ್ಮ ಪುರಾಣಗಳನ್ನು ಸ್ವಲ್ಪ ಅವಲೋಕಿಸಿದಾಗ ಮಹಿಳೆಯರು ಯುದ್ಧದಲ್ಲಿ ನೇರ ಇಲ್ಲ ಪರೋಕ್ಷವಾಗಿ ಭಾಗವಹಿಸಿದ್ದ ಹೇರಳ ಉದಾಹರಣೆಗಳು ಸಿಗುತ್ತವೆ. ಮಹಿಶಾಸುರ, ಶುಂಭ, ನಿಶುಂಭ, ರಕ್ತಬೀಜಾಸುರ ಮುಂತಾದ ಅಂದಿನ ಭಯೋತ್ಪಾದರಾದ ರಾಕ್ಷಸರನ್ನು ಬಗ್ಗುಬಡಿಯಲು ಮಹಿಳೆಯೇ ಬೇಕಾಯಿತು. ಸ್ವಲ್ಪಕಾಲ ದುರ್ಗೆ/ಚಾಮುಂಡಿ/ಮಹಿಶಾಸುರಮರ್ದಿನಿಯನ್ನು ದೇವರು ಎಂಬುದು ಮರೆತು ಒಬ್ಬ ಸ್ತ್ರೀ ಎಂದು ಮಾತ್ರ ನೋಡಿದಾಗ ನಮ್ಮ ಆಗಿನ ಜನ ಮಹಿಳೆಗೂ ಎಂಥ ಸ್ಥಾನ ಕೊಟ್ಟಿದ್ದರು ಎಂದು ತಿಳಿಯುತ್ತದೆ. ಮಹಿಶಾಸುರನನ್ನು ಯಾವ ದೇವತೆ, ತ್ರಿಮೂರ್ತಿಗಳಿಗೂ ಕೊಲ್ಲಲು ಸಾಧ್ಯವಾಗದೇ ಇದ್ದಾಗ ತಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸೃಷ್ಟಿಸಿದ ಶಕ್ತಿಯೇ ದುರ್ಗೆ. ಅಷ್ಟೆ ಅಲ್ಲ, ತಮ್ಮೆಲ್ಲ ಆಯುಧವನ್ನು ಧಾರೆ ಎರೆದರು. ಅದು ಯುದ್ಧ ತಂತ್ರದಲ್ಲಿ concentration of forces at a single point ನ ಅತಿ ಪುರಾತನ ಉದಾಹರಣೆ.

ತ್ರೇತಾಯುಗದಲ್ಲಿ ದಶರಥನು ಸಂಹಾಸುರನ ಜೊತೆ ಯುದ್ಧಕ್ಕೆ ಹೋದಾಗ ಅವನ ಮುದ್ದಿನ ಮಡದಿ ಕೈಕೇಯಿ ಕೂಡ ಅವನ ಜೊತೆ ಯುದ್ಧಕ್ಕೆ ಹೋಗುತ್ತಾಳೆ. ದಶರಥನು ಮೂರ್ಛೆಹೋದಾಗ ಅವನ ಶುಶ್ರೂಶೆ ಮಾಡಿ ಅವನ ಜೀವ ಉಳಿಸುತ್ತಾಳೆ. ಇದರಿಂದ ಸುಪ್ರೀತನಾದ ದಶರಥ ಬೇಕಾದ ವರ ಕೇಳು ಎನ್ನುತ್ತಾನೆ. ಆಗ ಕೇಳದೆ, ಮುಂದೆ ಮಕ್ಕಳು ಹುಟ್ಟಿ ದೊಡ್ಡವರಾದ ಮೇಲೆ ತನ್ನನ್ನು ಚಿಕ್ಕಂದಿನಿಂದ ನೋಡಿಕೊಂಡು ಬೆಳೆಸಿದ್ದ ಮಂಥರೆಯ ಮಾತು ಕೇಳಿ ವರಗಳ ದುರ್ಬಳಕೆ ಮಾಡಿಕೊಳ್ಳುತ್ತಾಳೆ. ಮುಂದೆ ಆಗುವುದೆಲ್ಲ ದೊಡ್ಡ ರಾಮಾಯಣವೇ ಬಿಡಿ.

ದ್ವಾಪರಯುಗದಲ್ಲಿ ಸತ್ಯಭಾಮೆ ಕೂಡ ಯುದ್ಧದಲ್ಲಿ ಭಾಗವಹಿಸಿದ್ದು ಕಾಣಬಹುದು. ಪ್ರಾಗ್ಜ್ಯೋತಿಷಪುರ (ಇಂದಿನ ಅಸ್ಸಾಂ) ನರಕಾಸುರನ ರಾಜಧಾನಿ. ಅವನು ಭೂದೇವಿಯ ಮಗ. ಅವನು ಮರಣ ಅವನ ತಾಯಿಯ ಕೈಯ್ಯಲ್ಲೇ ಎಂದು ವರವಿರುತ್ತದೆ. ಅವನ ಉಪಟಳವನ್ನು ತಾಳಲಾರದೆ ವಿಷ್ಣುವಿನ ಅವತಾರವಾದ ಕೃಷ್ಣ ಮತ್ತು ಅವನ ಪತ್ನಿ, ಭೂದೇವಿಯ ಅವತಾರವಾದ ಸತ್ಯಭಾಮೆ ಗರುಡನ ಮೇಲೆ ಕುಳಿತು ನರಕಾಸುರನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಆಗ ಕೂಡ ಒಳ್ಳೆಯ ತಂದೆ ತಾಯಿಗಳಿಗೆ ಪುಂಡ ಮಕ್ಕಳು ಇರುತ್ತಿದ್ದರು ಎಂದಾಯಿತು. ಯುದ್ಧದಲ್ಲಿ ಕೃಷ್ಣನು ಮೂರ್ಛೆ ಹೋಗಿದ್ದಾಗ ಸತ್ಯಭಾಮೆ ಯುದ್ಧವನ್ನು ಮುಂದುವರೆಸಿ ನರಕಾಸುರನ ವಧೆ ಮಾಡುತ್ತಾಳೆ. ಹೀಗೆ ಇಲ್ಲೂ ಕೂಡ ಮಹಿಳೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಣಬಹುದು.

ದ್ರೌಪದಿ ಕೂಡ ತನ್ನ ಗಂಡಂದಿರ ಮುಖ್ಯ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಳು ಎಂದು ಮಹಾಭಾರತದಲ್ಲಿ ಬರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ, ಅದರ ಮುಖ್ಯ ಕಾರಣಕರ್ತರಲ್ಲಿ ದ್ರೌಪದಿಯೂ ಒಬ್ಬಳು.

ಇವೆಲ್ಲ ಪುರಾಣ ಆಯಿತು. ಅದಕ್ಕೆಲ್ಲ ಯಾವುದೇ ಆಧಾರವಿಲ್ಲ, ಯುಗಯುಗಳಿಂದ ಹರಿದು ಬಂದ ಕತೆಗಳು, ಶ್ಲೋಕಗಳು, ತಾಳೆಗರಿ ದಾಖಲೆಗಳನ್ನು ಬಿಟ್ಟರೆ. ಇತಿಹಾಸವನ್ನು ನೋಡಿದರೆ ಅನೇಕ ಮಹಿಳಾ ಆಡಳಿತಗಾರರು, ಶತ್ರುಗಳೊಡನೆ ಹೋರಾಡಿದ ವೀರ ಮಹಿಳೆಯರು ಸಿಗುತ್ತಾರೆ. ದೆಹಲಿಯನ್ನು ಆಳಿದ ಏಕೈಕ ಮುಸ್ಲಿಮ್ ಮಹಿಳೆ ರಜಿಯಾ ಸುಲ್ತಾನ (1236-1240), ಅಕ್ಬರನ ಸೈನ್ಯದ ಜೊತೆ ಯುದ್ಧ ಮಾಡಿದ ರಾಣಿ ದುರ್ಗಾವತಿ, ಔರಂಗಜೇಬನ ವಿರುದ್ಧ ಹೋರಾಡಿದ ಕೆಳದಿಯ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕಿತ್ತೂರು ಚೆನ್ನಮ್ಮ, ಝಾನ್ಸಿಯ ಲಕ್ಷ್ಮಿಬಾಯಿ (ಮೂಲ ಹೆಸರು ಮಣಿಕರ್ಣಿಕಾ), ಪೋರ್ತುಗೀಸರನೊಡನೆ ಹೋರಾಡಿದ ತುಳುನಾಡಿನ ರಾಣಿ ಅಬ್ಬಕ್ಕ, ಅಬ್ಬಬ್ಬಾ! ದೆಹಲಿಯ ಇಂದಿನ "ರಾಣಿ"ಯ ಬಗ್ಗೆ ಮುಂದೆ ಯಾರಾದರೂ ಹೀಗೆ ಬರೆಯಬಹುದೇನೋ???

ಅಂಗವಿಕಲರ ಸ್ಥಾನ
ಈಗ ವಿಕಲಚೇತನರಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ. ಹಿಂದಿನ ಕಾಲದಲ್ಲಿ ಹೇಗಿತ್ತು? ಒಬ್ಬ ಅಂಧ ವ್ಯಕ್ತಿ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದು ದ್ವಾಪರಯುಗದಲ್ಲಿ ಕಾಣುತ್ತದೆ. ಹಸ್ತಿನಾಪುರದ ರಾಜ ಮೊದಲು ಕಿರಿಯವನಾದ ಪಾಂಡು. ಅವನ ಸಾವಿನ ನಂತರ ದೊಡ್ಡವನಾದ ಧೃತರಾಷ್ಟ್ರ ಅಂಧನಾಗಿದ್ದರೂ ಸಿಂಹಾಸನವೇರಬೇಕಾಗುತ್ತದೆ. ಮೊದಲೆಲ್ಲ ಭೀಷ್ಮ, ನಂತರ ದುರ್ಯೋಧನರ ಕೈಗೊಂಬೆ ರಾಜನಾಗಿದ್ದರೂ, official ಆಗಿ ರಾಜನಾಗಿದ್ದು ಧೃತರಾಷ್ಟ್ರ ತಾನೆ? ಒಬ್ಬ ದೃಷ್ಟಿಹೀನ ವ್ಯಕ್ತಿ ಒಂದು ದೊಡ್ಡ ದೇಶದ ರಾಜನಾಗಿದ್ದು ಸಾಮಾನ್ಯ ವಿಷಯವೇನಲ್ಲ.

ಉದ್ದಿಮೆ, ವೃತ್ತಿಗಳು
ಒಬ್ಬ ವ್ಯಕ್ತಿ ಮಾಡುವ ಕೆಲಸದಿಂದ ಅವನ ಜಾತಿಯನ್ನು ನಿರ್ಧರಿಸಿದ್ದು ಎಲ್ಲರಿಗೂ ಗೊತ್ತಿರುವುದೇ. ರಾಜ, ಮಂತ್ರಿ, ಪುರೋಹಿತ, ಗುರು (ದ್ರೋಣಾಚಾರ್ಯ, ಬೃಹನ್ನಳೆ, ಗರ್ಗ, ವಿಶ್ವಾಮಿತ್ರ), ಋಷಿ, ಸೂತ (ರಥ ನಡೆಸುವವನು, ಸಂಜಯ, ಕರ್ಣನ ತಂದೆ), ವೈದ್ಯ (ಧನ್ವಂತರಿ, ಅಶ್ವಿನಿ ಸಹೋದರರು, ಚ್ಯವನ), ಶಿಲ್ಪಿ (ಮಯ), ಅಡುಗೆಯವರು (ಭೀಮ, ನಳ) ಹೀಗೆ ಕೆಲ ವೃತ್ತಿಗಳ ಉಲ್ಲೇಖ ನಮ್ಮ ಪುರಾಣ, ಮಹದ್ಗ್ರಂಥಗಳಲ್ಲಿವೆ. ಆಗ ಇದ್ದ ಉದ್ದಿಮೆಗಳೇನು? ಆಭರಣಗಳಿಗೆ ಬೇಕಾಗುವ ಚಿನ್ನ, ರತ್ನಗಳ ಗಣಿಗಾರಿಕೆ ಹೇಗಿತ್ತು? ಯುದ್ಧ ಸಲಕರಣೆಗಳನ್ನು ಹೇಗೆ ತಯಾರಿಸುತ್ತಿದ್ದರು? ಆಹಾರ ತಯಾರಿಕೆ, ಸರಬರಾಜು ಹೇಗಿತ್ತು? ಒಂದು ರಾಜ್ಯದಿಂದ ದೂರದ ಇನ್ನೊಂದು ರಾಜ್ಯಕ್ಕೆ ಸುದ್ದಿ ಹೇಗೆ ತಲುಪಿಸುತ್ತಿದ್ದರು? ಅರಮನೆ, ಕೋಟೆ, ದೇವಾಲಯಗಳನ್ನು ಹೇಗೆ, ಯಾರು ಕಟ್ಟುತ್ತಿದ್ದರು? ಯಾವುದರ ಬಗ್ಗೆಯೂ ದಾಖಲೆಗಳಿಲ್ಲ. ಆದರೆ ಹೈನುಗಾರಿಕೆ ಒಂದು ಉದ್ದಿಮೆಯಾಗಿತ್ತು ಎಂದು ದ್ವಾಪರಯುಗದಲ್ಲಿ ಕಾಣಬಹುದು. ವೃಂದಾವನದ ಜನ ಹಾಲು, ಮತ್ತದರ ಉತ್ಪನ್ನಗಳನ್ನು ಮಥುರಾ ಮುಂತಾದ ದೊಡ್ಡ ಪಟ್ಟಣಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಮಹಾಭಾರತದಲ್ಲಿ ಕಾಣಬಹುದು.

ಪುರಾ ಮತ್ತು ಇತಿಹಾಸ
ಅದೆಲ್ಲ ಸರಿ, ಪುರಾಣ (mythology) ಮತ್ತು ಇತಿಹಾಸ (history), ಇವೆರಡರ ಮಧ್ಯೆ ಇರುವ ಸರಹದ್ದು ಯಾವುದು? ಪುರಾಣದಲ್ಲಿ ಬರುವ ಇಂದ್ರ, ಅಗ್ನಿ, ವಾಯು, ದೇವತೆಗಳು, ರಾಕ್ಷಸರು, ದೇವ ದಾನವ ಯುದ್ಧಗಳು ಈಗೆಲ್ಲಿ? ಅವರೆಲ್ಲ ಈಗೇನು ಮಾಡುತ್ತಿದ್ದಾರೆ? ಕಲಿಯುಗದಲ್ಲಿ ದೇವತೆಗಳು ಮತ್ತು ರಾಕ್ಷಸರು ಮನುಷ್ಯರಾಗಿ ಭೂಲೋಕದಲ್ಲಿ ಹುಟ್ಟುತ್ತಾರೆ ಎಂಬ ಪ್ರಸ್ತಾಪ ಮಹಾಭಾರತದಲ್ಲಿ ಬರುತ್ತದೆ. ಈಗಿನ ಭಯೋತ್ಪಾದರನ್ನು ರಾಕ್ಷಸರ ಪುನರ್ಜನ್ಮವೆನ್ನಬಹುದೇನೋ.

ದಶಾವತಾರದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಪರಶುರಾಮನ ಕಾಲದವರೆಗೆ ಪುರಾಣ ಕಾಲವೆನ್ನಬಹುದು. ತ್ರೇತಾಯುಗದಿಂದ ಪುರಾಣ ಮತ್ತು ಇತಿಹಾಸ ಇವೆರಡರ ಕಲಸುಮೇಲೋಗರ (intermixing) ಕಾಣಬಹುದು. ಹತ್ತು ತಲೆ, ಇಪ್ಪತ್ತು ಕೈಗಳು ಇರುವ ರಾವಣ, ಭೂಮಿ ಆಕಾಶ ಸಂಚರಿಸುವ ನಾರದ, ಸಮುದ್ರ ದಾಟುವ, ಪರ್ವತ ಎತ್ತುವ ಹನುಮಂತ, ಬೆಂಕಿ ಮೂಲಕ ಹೋದರೂ ಸಾಯದ ಸೀತೆ ಮುಂತಾದ ಅತಿಮಾನುಷ ವ್ಯಕ್ತಿತ್ವಗಳು ಕಾಣಬಹುದು. ಅದೇ ರೀತಿ ಅಯೋಧ್ಯ, ಹಂಪೆ, ಲಂಕೆ ಮುಂತಾದ "ಐತಿಹಾಸಿಕ" ಅಂದರೆ ಭೂಮಿಯ ಮೇಲೆ ಇಂಥದ್ದೇ ಜಾಗ ಎಂದು ತೋರಿಸಬಹುದಾದ ಪ್ರದೇಶಗಳೂ ಕಾಣಬಹುದು. ಅಂದರೆ ಈ ಕಾಲದಿಂದ ಸ್ವಲ್ಪ ಸ್ವಲ್ಪವಾಗಿ ಪುರಾಣ ಕಡಿಮೆಯಾಗುತ್ತ, ಇತಿಹಾಸ ಪ್ರಾರಂಭವಾಗುತ್ತದೆ.

ದ್ವಾಪರಯುಗದಲ್ಲೂ ಇದನ್ನು ಕಾಣಬಹುದು. ಹಸ್ತಿನಾಪುರ (ಮೀರಟ್ ಬಳಿ ಈಗ ಚಿಕ್ಕ ಗ್ರಾಮವಾಗಿದೆ), ಮಥುರಾ, ಇಂದ್ರಪ್ರಸ್ಥ (ಇಂದಿನ ದೆಹಲಿ), ದ್ವಾರಕೆ (ಇಂದಿನ ಗುಜರಾತಿನಲ್ಲಿದೆ, ಸಮುದ್ರದಲ್ಲಿ ಮುಳುಗಿದೆ), ಮುಂತಾದ ಜಾಗಗಳನ್ನು ತೋರಿಸಬಹುದು. ಹಾಗೆ ರಾಕ್ಷಸರನ್ನು ಕೊಲ್ಲುವ, ವಿಶ್ವರೂಪ ತೋರಿಸುವ ಕೃಷ್ಣ, ಪಾಂಡವರ ಜನನಕ್ಕೆ ಕಾರಣವಾಗುವ ಇಂದ್ರ, ಯಮ, ವಾಯು ಮುಂತಾದ "ಸ್ವರ್ಗ"ದಲ್ಲಿರುವ ದೇವತೆಗಳು, ಸ್ವರ್ಗಕ್ಕೆ ಹೋಗಿ ಬರುವ ಅರ್ಜುನ, ಶಿವನೆಂಬ ದೇವರೊಡನೆ ಹೋರಾಡಿ ಪಾಶುಪತಾಸ್ತ್ರ ಹೊಂದುವ ಅರ್ಜುನ, ಈ ಕಾಲಘಟ್ಟದಲ್ಲೂ ಮುಖ ತೋರಿಸುವ "ಚಿರಂಜೀವಿ" ಹನುಮಂತ, ಜಾಂಬವಂತ, ಇವೆಲ್ಲ ಪೌರಾಣಿಕತೆಯನ್ನು ತೋರಿಸುತ್ತದೆ.

ಈ ಕಾಲದಿಂದ ಇಂದ್ರ ಮುಂತಾದ ದೇವತೆಗಳ ಸ್ಥಾನಮಾನ ಕಡಿಮೆಯಾಗುತ್ತ ಬರುತ್ತದೆ. ಇಂದ್ರನ ಪೂಜೆಯನ್ನು ಸ್ವತಹ ಕೃಷ್ಣನೇ ತಡೆಹಿಡಿದು, ಪ್ರಕೃತಿಯ (ಗೋವರ್ಧನಗಿರಿ) ಪೂಜೆಯ ಮಹತ್ವ ಸಾರುತ್ತಾನೆ. ಸ್ವಲ್ಪ ಯೋಚಿಸಿ ನೋಡಿ. ಈ ಕಾಲಘಟ್ಟದ ನಂತರ ಅತಿಮಾನುಷ ವ್ಯಕ್ತಿ, ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಪವಾಡಗಳು, ಅಲ್ಲಿ ಇಲ್ಲಿ ಸ್ವಲ್ಪ ಕಂಡುಬಂದರೂ ಪುರಾಣದಲ್ಲಿ ಬರುವ ಹಾಗೆ ಸಾಮಾನ್ಯ ಘಟನೆಗಳಾಗಿರುವುದಿಲ್ಲ.

ಹಿಂದು ಧರ್ಮ ಪುರಾಣಗಳಂತೆ ಬೈಬಲ್ ನಲ್ಲಿ ಕೂಡ ಪವಾಡ, ಅತಿಮಾನುಷ ಘಟನೆಗಳ ವರ್ಣನೆಯಿದೆ. ಸಮುದ್ರ ಸೀಳುವ ಮೋಸಸ್, ಜಗತ್ತಿನ ಎಲ್ಲ ಜೀವರಾಶಿಯ ಗಂಡು ಹೆಣ್ಣು ಪ್ರಾಣಿಗಳನ್ನು ದೋಣಿಯಲ್ಲಿ ಸಾಗಿಸಿ ರಕ್ಷಿಸುವ ನೊವಾ (Noah's Ark), ದೇವರಿಂದ ನೇರ ಜನಿಸುವ ಆಡಮ್ (ಆದಿಮ??), ಈವ್, ಅವರನ್ನು ಪಾಪಿಗಳನ್ನಾಗಿಸುವ ಸೈತಾನ, ಸತ್ತವರನ್ನು ಬದುಕಿಸುವ, ಸ್ವತಃ ತಾನೇ ಪುನರ್ಜನ್ಮ ಎತ್ತುವ ಕ್ರಿಸ್ತ, ಹೀಗೆ ಹೇರಳ ಅದ್ಭುತ ಎನಿಸುವ ಕಾರ್ಯ, ಘಟನೆಗಳು ಬೈಬಲ್ ನಲ್ಲಿವೆ. ಇಲ್ಲೂ ಕೂಡ ಗಮನಿಸಿದರೆ, ಕ್ರಿಸ್ತನ ಕಾಲದ ನಂತರ ಇಂತಹ ಅದ್ಭುತ ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ಹಾಗೆ ಕ್ರೈಸ್ತರೂ ಪವಾಡಗಳನ್ನು ನಂಬುತ್ತಾರೆ. ಕ್ರೈಸ್ತರು ಸಂತ ಪದವಿ (saint) ಪಡೆಯಬೇಕಾದರೆ ಅವರು ಪವಾಡ ಮಾಡಿರಲೇಬೇಕು ಎನ್ನುವ ನಿಯಮವಿದೆ.

ಬೈಬಲ್ ಕಥೆಗಳಿಗೂ ನಮ್ಮ ಪುರಾಣ ಕಥೆಗಳಿಗೂ ಕೆಲ ಸಾಮ್ಯತೆ ಇವೆ. ನಮ್ಮಲ್ಲಿ ಹೇಗೆ ದೇವರು (ವಿಷ್ಣು) ಒಂಭತ್ತು ಸಲ ಅವತಾರ ಎತ್ತಿದ್ದನು, ಹತ್ತನೆಯ ಅವತಾರದ ವೇಳೆ ಪ್ರಳಯವಾಗುತದೆ ಎನ್ನುವ ನಂಬಿಕೆ ಇದೆಯೋ, ಹಾಗೆ ಬೈಬಲ್ ನಲ್ಲಿ ಕೂಡ ದೇವರು ಭೂಮಿಗೆ ಒಂಭತ್ತು ಸಲ ಭೇಟಿ ಇತ್ತಿದ್ದಾನೆ, ಹತ್ತನೆ ಸಲ ಬಂದಾಗ ಪ್ರಳಯವಾಗುತ್ತದೆ ಎನ್ನುವ ಪ್ರಸ್ತಾಪವಿದೆ. ನಮ್ಮಲ್ಲಿ ಕೂರ್ಮಾವತಾರದ ವೇಳೆ ಮನುವು ಜೀವರಾಶಿಯನ್ನು, ಗಿಡಮೂಲಿಕೆಗಳನ್ನು ದೋಣಿಯಲ್ಲಿ ಜಲಪ್ರಳಯದಿಂದ ರಕ್ಷಿಸಿದ್ದನು ಎಂದು ಇದೆಯೋ ಹಾಗೆ ಕ್ರೈಸ್ತರಲ್ಲಿ ನೋವಾನು ಜಲಪ್ರಳಯದಿಂದ (The Great Flood) ಜೀವರಾಶಿಯನ್ನು ರಕ್ಷಿಸಿದ್ದನು ಎನ್ನುವ ನಂಬಿಕೆ ಇದೆ.

ಇದಿಷ್ಟು ಸದ್ಯಕ್ಕೆ ನನಗೆ ಬಂದ ಆಲೋಚನೆಗಳು. ಹೀಗೆ ಯೋಚಿಸುತ್ತಾ ಹೋದರೆ ಇನ್ನೂ ಅದ್ಭುತ ಸಂಗತಿಗಳು ಕಾಣಬಹುದೇನೋ.

Tuesday 23 November, 2010

ಚಹಾ ಲೋಟದಲ್ಲಿ ಬಿರುಗಾಳಿ

ಚಹಾ ಲೋಟದಲ್ಲಿ ಬಿರುಗಾಳಿ - Storm in a teacup. ಇದು ಅತಿ ಸಣ್ಣ ಸಮಸ್ಯೆಯನ್ನು ತುಂಬ ದೊಡ್ಡದಾಗಿ ವೈಭವೀಕರಿಸುವುದರ ಬಗ್ಗೆ ಆಂಗ್ಲದಲ್ಲಿರುವ ಒಂದು ನಾಣ್ನುಡಿ. ಚಹಾಲೋಟದಲ್ಲಿ ಬಿರುಗಾಳಿ ಏಳುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸುಂದರಿಯರು, ಪ್ರಾಣಿ ಪಕ್ಷಿಗಳು, ಪ್ರೇಮಿಗಳು, ದೆವ್ವ ಭೂತ ಮೋಹಿನಿಯರು ಏಳುತ್ತಾರೆ. ನೀವೇ ನೋಡಿ.

 ಪ್ರಿಯತಮೆಯನ್ನು ಬಿಗಿದಪ್ಪಿರುವ ಪ್ರಿಯಕರ

 ಪ್ರೇಮಿಗಳು

 ಚಹಾ ಲೋಟದಲ್ಲಿ ಮಾರ್ಜಾಲ ನಡಿಗೆ (cat walk)





 ಭೂತ? ಮೋಹಿನಿ? ತಲೆಬುರುಡೆ?

 ರಾತ್ರಿಸಂಚಾರಕ್ಕೆ ಹೊರಟ ಮೋಹಿನಿ

 ನೀರು, ಅಲ್ಲಲ್ಲ ಚಹಾದಲ್ಲಿ ಹಂಸಯಾನ

 ಸಂಗೀತಗಾರ್ತಿ

ಅಮ್ಮ ಮಗು