Sunday, 27 May 2012

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...


ಕ್ಷಮಿಸಿ, ಇದು ಮಲ್ಲಿಗೆ ಹೂವಲ್ಲ. ಚಿಕ್ಕಮಗಳೂರಿನ ತೋಟಗಳಲ್ಲಿ ಅರಳಿದ ಕಾಫಿ ಹೂವುಗಳು



Tuesday, 14 February 2012

ಒಡೆದಾಳುವ ನೀತಿ, ಈಗಿನ ರೀತಿ

ರೈತನ ಮಗನಾದ ನಾನು... ಇದು ಎಚ್.ಡಿ.ಕುಮಾರಸ್ವಾಮಿಯವರ ಮಾತಿನ ಒಂದು ತುಣುಕು.

ರೈತರ ಹೆಸರಿನಲ್ಲಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ... ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಂದರ್ಭ.

ಮೈಸೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಕೆಲ ವಿದ್ಯಾರ್ಥಿಗಳು ರಾಹುಲ್ ಗಾಂಧಿಗೆ ಮೀಸಲಾತಿಯ ಬಗ್ಗೆ ಆಕ್ಷೇಪಣೆ ಎತ್ತಿದರು. ಆಗ ರಾಹುಲ್ ಗಾಂಧಿ ಅವರಿಗೆ ಕೆಳಿದರು, "ನೀವು ಹಳ್ಳಿಗಳನ್ನು ಕಂಡಿದ್ದೀರಾ?". ಅವರು ಇಲ್ಲ ಎಂದರು. "ನಾನು ಕಂಡಿದ್ದೇನೆ, ಜನರ ಕಷ್ಟ ಏನೆಂದು ನನಗೆ ಗೊತ್ತು", ಎಂದು ರಾಹುಲ್ ಉತ್ತರಿಸಿದರಂತೆ.

ಯಾವುದೇ ರಾಜಕೀಯ ಮುಖಂಡನ ವರ್ಣನೆಯಲ್ಲಿ "ದೀನ ದಲಿತ, ಅಲ್ಪಸಂಖ್ಯಾತರ, ರೈತರ ನಾಯಕ" ಎಂದಿರಲೇಬೇಕು.
ಮಾಯಾವತಿ ಏನೇ ಮಾಡಲಿ, ಮಾತಾಡಲಿ, ಅಲ್ಲಿ 'ದಲಿತ' ಎಂಬ ಪದ ಬರದಿದ್ದರೆ ಕೇಳಿ.

ಬಂಗಾರಪ್ಪನವರನ್ನು ಎಲ್ಲಾ ರಾಜಕಾರಣಿಗಳೂ, ಪತ್ರಿಕೆಗಳೂ 'ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ' ಎಂದು ಹಾಡಿ ಹೊಗಳಿದರು.

ಮೇಲಿನದು ನಮ್ಮ ದೇಶದ ರಾಜಕೀಯ ನಾಯಕರ ಸಾರ್ವಜನಿಕ ಮುಖದ ಕೆಲ ಸ್ಯಾಂಪಲ್. ಎಷ್ಟು ವಿಚಿತ್ರ ನೋಡಿ. ಯಾವ ನಾಯಕನೂ ತಾನು ದೇಶದ ಇಲ್ಲ ರಾಜ್ಯದ ನಾಯಕ ಎಂದು ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ, ಯಾಕೆ? ಕೇವಲ ಕೆಲ ವರ್ಗ, ಕೋಮು, ಗುಂಪಿನ ಜೊತೆ ಯಾಕೆ ತಮ್ಮನ್ನು ಸೀಮಿತಗೊಳಿಸುತ್ತಾರೆ? ದೇಶ ಎಂದರೆ ದೇಶ, ಅಷ್ಟೇ. ಅಲ್ಲಿರುವವರು ಎಲ್ಲರೂ ಪ್ರಜೆಗಳು. ಅಲ್ಲಿ ಎಲ್ಲರಿಗೂ ಸಮಾನ ಹಕ್ಕು. ಎಲ್ಲರಿಗೂ ಕಷ್ಟ ಸುಖ, ನೋವು ನಲಿವು, ಸಾಧನೆ ವೈಫಲ್ಯ, ಒಳ್ಳೆಯತನ ಕೆಟ್ಟತನ ಇದ್ದೇ ಇರುತ್ತದೆ. ನಮ್ಮ ರಾಜಕೀಯದವರು ಹೀಗೆ ಕೆಲವೇ ಕೆಲ underprivileged ಎನಿಸಿಕೊಂಡ (ಹಾಗಂತ ಪ್ರಚಾರ ಮಾಡಲ್ಪಟ್ಟ) ಗುಂಪಿನ ಜೊತೆ ಮಾತ್ರ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ, ಯಾಕೆ? ಮತ ಬ್ಯಾಂಕ್ ರಾಜಕೀಯವೇ???

ಇದೇ ರೀತಿ ಯೋಚಿಸುತ್ತಾ ಹೋದರೆ, ನಾನು ನಮ್ಮ ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಒಬ್ಬ ಅನಾಮಧೇಯ, non-entity. ಕಾರಣಗಳು ಹೀಗಿವೆ:
* ನಾನು ಧರ್ಮದಲ್ಲಿ 'ಹಿಂದು' ಎನಿಸಿಕೊಂಡ ಧರ್ಮಕ್ಕೆ ಸೇರಿದವನು, ಅಂದರೆ ಅಲ್ಪಸಂಖ್ಯಾತ ಅಲ್ಲ.
* ನಾನು 'ಮೇಲ್ವರ್ಗ' ಎನಿಸಿಕೊಂಡ ಜಾತಿಗೆ ಸೇರಿದವನು. ಹಿಂದುಳಿದ ಅಥವಾ ದಲಿತ ಅಲ್ಲ.
* ನಾನು ಪುರುಷ. ಮಹಿಳೆ ಅಲ್ಲ.
* ನಾನು ನಗರದಲ್ಲಿ ಕೆಲಸದಲ್ಲಿದ್ದೇನೆ. ಅಂದರೆ ಹಳ್ಳಿಯಲ್ಲಿಲ್ಲ.
* ನಾನು ಒಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೇನೆ. ಅಂದರೆ ರೈತನಲ್ಲ.
* ನಾನು ಮಧ್ಯಮವರ್ಗದವನು, ಅಂದರೆ ಬಡವ, ದೀನನಲ್ಲ (ಸಧ್ಯಕ್ಕಂತೂ)
ನೋಡಿ, ರಾಜಕೀಯ ಪಕ್ಷಗಳು ಅಪ್ಪಿ ಮುದ್ದಾಡುವ ಯಾವ ಗುಣಲಕ್ಷಣಗಳೂ ನನ್ನಲ್ಲಿಲ್ಲ. ಅಂದರೆ ಈ ದೇಶದಲ್ಲಿ ನಾನು ಬದುಕಲಿಕ್ಕೇ ನಾಲಾಯಕ್ ಎಂದಾಯಿತು.

- ಕುಮಾರಸ್ವಾಮಿ ತಾನು 'ರೈತನ ಮಗ' ಎಂದು ಒಂದು ಸುದ್ದಿಘೋಷ್ಠಿಯಲ್ಲಿ ಹೇಳಿದ್ದರು. ಅವರು ಹೋಗಲಿ, ಸ್ವಯಂಘೋಷಿತ ಮಣ್ಣಿನ ಮಗ ದೇವೆಗೌಡರೇ ಮಣ್ಣನ್ನು ಕೈಯ್ಯಲ್ಲಿ ಮುಟ್ಟಿ ಎಷ್ಟು ವರ್ಷವಾಯಿತೋ ಏನೋ?

- ಯಡ್ಡಿಯೂರಪ್ಪನವರು ರೈತರ ಹೆಸರಲ್ಲೇ ಪ್ರಮಾಣವಚನ ಯಾಕೆ ಸ್ವೀಕರಿಸಬೇಕು? ಇತರರು ಯಾರೂ ಮನುಷ್ಯರಲ್ಲವೇ? ಅವರಿಗೆ ಸರಕಾರದ, ಮುಖ್ಯಮಂತ್ರಿಯ ನೆರವು ಅಗತ್ಯವಿಲ್ಲವೇ?

- ತಮಾಷೆ ನೋಡಿ. ಹುಟ್ಟಿದಾಗಿನಿಂದಲೂ ಸದಾ ಕಾಲ ರಕ್ಷಣಾದಳದವರ ಭದ್ರಕೋಟೆಯಲ್ಲೇ ಜೀವಿಸುತ್ತಿರುವ, ಹೊರ ಜಗತ್ತನ್ನು ಸಣ್ಣ ಕಿಂಡಿಯ ಮೂಲಕ ನೋಡುವ ರಾಹುಲ್ ಗಾಂಧಿಯಿಂದ ನಮ್ಮ ಮಧ್ಯಮವರ್ಗದ ಸಾಮಾನ್ಯ ಜನರಿಗೆ ಹಳ್ಳಿಜನರ ಬಗ್ಗೆ ಪಾಠ!!! ಒಂದಷ್ಟು ದಿನ ಕೆಲ ದಲಿತ, ರೈತರ ಮನೆಯಲ್ಲಿ ರೋಟಿ, ದಾಲ್, ಚಹಾ ಸೇವಿಸಿದ ಮಾತ್ರಕ್ಕೆ ಅವರ ಜೀವನಶೈಲಿ ಇವರಿಗೆ ಎಲ್ಲಾ ಗೊತ್ತಾಗಿಬಿಟ್ಟಿತೆ? ಇದು ಹೇಗೆಂದರೆ, ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡಿನ ಬಗ್ಗೆ, ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳುವಷ್ಟೇ ಹಾಸ್ಯಾಸ್ಪದ ಈ ಉಪದೇಶ.

- ಬಂಗಾರಪ್ಪನವರು ಯಾಕೆ ಕೇವಲ ದಲಿತ, ಹಿಂದುಳಿದವರ ನಾಯಕ ಆಗಬೇಕು? ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅಂದರೆ ಇಡೀ ರಾಜ್ಯಕ್ಕೆ ನಾಯಕರಾಗಬೇಕಾದವರು. ನಾನು ಹಿಂದುಳಿದ ವರ್ಗದವನು ಅಲ್ಲ ಎಂದಮಾತ್ರಕ್ಕೆ ನನಗೆ ಅವರ ನೆರವು ಅಗತ್ಯವಿರಲಿಲ್ಲವೆಂದೆ?

- ಮಾಯಾವತಿಯ ಮುಂದೆ ನೀವು ಸೂರ್ಯ, ಚಂದ್ರ, ನಕ್ಷತ್ರ, ಮುಂತಾದ ಯಾವುದೇ ವಿಷಯ ಮಾತಾಡಿ. ಅದರಲ್ಲೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಇಂಥ ಪದಗಳನ್ನು ತರದಿದ್ದರೆ ಅವರು ಮಾಯಾವತಿಯೇ ಅಲ್ಲ.

- ಇದೇ ರೀತಿ ಕುಮಾರಸ್ವಾಮಿಯ ಮುಂದೆ ಯಾವುದೇ ವಿಷಯ ಮಾತಾಡಿ. ಹಳ್ಳಿ, ರೈತ, ಮುಂತಾದ ಪದಗಳನ್ನು ಉದುರಿಸುತ್ತ, ಹಳ್ಳಿ ಪಟ್ಟಣದ ಮಧ್ಯೆ ಭೇದಭಾವ ತರದಿದ್ದರೆ ಕೇಳಿ.

- ಉತ್ತರ ಪ್ರದೇಶ ಚುನಾವಣೆ ಗಲಾಟೆಯನ್ನೇ ನೋಡಿ, ಮುಸ್ಲಿಮರನ್ನು ಓಲೈಸಲು ಏನೆಲ್ಲ ಕಸರತ್ತು ನಡೆಯುತ್ತಿದೆ. ಯಾಕೆ, ಬೇರೆ ಯಾರೂ ದೇಶದ ಪ್ರಜೆಗಳಲ್ಲವೆ?

- ದಿಗ್ವಿಜಯ್ ಸಿಂಗ್ ಗೆ ಎಲ್ಲಿ ಬಾಂಬ್ ಸ್ಫೋಟ ಆಗಲಿ, ಅದು ಹಿಂದುಗಳ ಕೈವಾಡವಾಗಿಯೇ ಕಾಣುತ್ತದೆ. ಹಿಂದುಗಳು ವೋಟ್ ಬ್ಯಾಂಕ್ ಅಲ್ಲವಲ್ಲ.

ಯಾಕೆ ಎಲ್ಲರೂ ಒಂದು ವರ್ಗ, ಗುಂಪು, ಜಾತಿ, ಧರ್ಮಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ? ಈ ಗುಂಪುಗಳು ಆರ್ಥಿಕವಾಗಿ ದುರ್ಬಲವಾದ, ಶೋಷಿತವೆನಿಸಿದ, ಸಂಖ್ಯೆಯಲ್ಲಿ ಕಡಿಮೆಯೆನಿಸಿದ, ಒಟ್ಟಿನಲ್ಲಿ underpriviliged ಎನಿಸಿದ ವರ್ಗಗಳು, ಸಾಮಾನ್ಯ ದೃಷ್ಟಿಯಲ್ಲಿ. ಇದು ಕೆಲಮಟ್ಟಿಗೆ ನಿಜವೂ ಹೌದು. ಇವರಿಗೆಲ್ಲ ಸಹಾಯ ಮಾಡುವುದು ಬೇರೆ, ತಾವು ಅವರನ್ನು ಮಾತ್ರ ಪ್ರತಿನಿಧಿಸುತ್ತೇವೆ ಎಂದು ಬಿಂಬಿಸಿಕೊಳ್ಳುವುದು ಬೇರೆ. ಎರಡಕ್ಕೂ ವ್ಯತ್ಯಾಸವಿದೆ. ಈ underpriviliged ಎನಿಸಿಕೊಳ್ಳುವ ವರ್ಗ, ಗುಂಪುಗಳಿಗೆ ಎಷ್ಟು ಬೇಕಾದರೂ ಸಹಾಯಮಾಡಲಿ, ತಪ್ಪಿಲ್ಲ. ಆದರೆ ತಾವು ಅವರ ಪ್ರತಿನಿಧಿ ಮಾತ್ರ ಎಂಬಂತೆ ವರ್ತಿಸುವುದು ಕಿರಿಕಿರಿಯೆನಿಸುತ್ತದೆ. ಹೋಗಲಿ ಅದನ್ನೂ ಸರಿಯಾಗಿ ಮಾಡುತ್ತಾರೆಯೇ ನಮ್ಮ ಪುಢಾರಿಗಳು? ಅದೂ ಇಲ್ಲ. ಹೊರಜಗತ್ತಿಗೆ, ಮಾಧ್ಯಮದ ಮುಂದೆ ದೀನ ದಲಿತ, ಅಲ್ಪಸಂಖ್ಯಾತ, ರೈತ, ಬಡವರ ಬಂಧು ಎಂದು ಪ್ರಚಾರ ಪಡೆಯುವ ಅವರು, ತೆರೆಯ ಹಿಂದೆ ಶ್ರೀಮಂತರ, ಬಂಡವಾಳಶಾಹಿಗಳ ಸಹವಾಸ ಮಾತ್ರ ಮಾಡುತ್ತಾರೆ. ಆಗ, ಯಾವ ದೀನ ದಲಿತ ಬಂದರೂ ಮನೆಯ ಹತ್ತಿರವೂ ಸುಳಿಯಬಿಡುವುದಿಲ್ಲ. ಏನಿದ್ದರೂ ಪ್ರಚಾರ ಮುಖ್ಯ, ನಿಜವಾದ ಕಳಕಳಿಯಲ್ಲ.

ಬೇರೆ ಕಡೆ ಈ ಥರದ ಪಕ್ಷಪಾತ ಧೋರಣೆ ಅತೀ ಕಡಿಮೆ ಎನ್ನಬಹುದು. ಬರಾಕ್ ಒಬಾಮ ಕಪ್ಪು ವರ್ಣೀಯ ವ್ಯಕ್ತಿ. ಇಡೀ ಅಮೆರಿಕಾ ದೇಶದ ಇತಿಹಾಸದಲ್ಲಿಯೇ ಕಪ್ಪು ವ್ಯಕ್ತಿ ಅಷ್ಟು ದೊಡ್ಡ ಹುದ್ದೆಗೆ ಬಂದಿದ್ದು ಇದೇ ಮೊದಲು. ಅವರ ಅಧ್ಯಕ್ಷ ಚುನಾವಣೆಯ ಭಾಷಣ ಕೇಳಿದ್ದೀರಾ? ಅಥವಾ ಈಗಿನ ಅವರ ಭಾಷಣಗಳು, ಹೇಳಿಕೆಗಳು? ಎಲ್ಲಿಯಾದರೂ ತಮ್ಮ ಜನರ ಕಷ್ಟ ನಷ್ಟಗಳ ವರ್ಣನೆ ಮಾಡಿದ್ದು, ಅದೆಲ್ಲವೂ ಬಿಳಿ ಜನರ ದಬ್ಬಾಳಿಕೆಯಿಂದ ನಮ್ಮ ಜನ ಎಷ್ಟು ನೋವಿನಲ್ಲಿ ಇದ್ದೇವೆ ಎಂದು ಎಲ್ಲಿಯೂ ಗೋಳಾಡಿಲ್ಲ, ಮತ್ತು ಇದೇ ನೆಪದಲ್ಲಿ ಬಿಳಿಯರ ತೆಗಳಿಕೆ, ನಮ್ಮ ಜನರ ಹಿಂದುಳಿದಿರುವುಕೆಗೆ ಅವರೇ ಕಾರಣ ಎಂದು ಎದೆ ಬಡಿದುಕೊಂಡು ಬೊಬ್ಬೆ ಹೊಡೆದಿಲ್ಲ. ಯಾವುದರಲ್ಲೂ ಅವರು ತಮ್ಮ ಜನಾಂಗದ (ಕಪ್ಪು ಜನ) ಉದ್ಧಾರದ ಬಗ್ಗೆ ಮಾತ್ರ ಮಾತಾಡುವುದಿಲ್ಲ. ಏನೇ ಹೇಳಿದರೂ ಇಡೀ ದೇಶದ ಬಗ್ಗೆ ಮಾತಾಡುತ್ತಾರೆ. ಏನೇ ಸಮಸ್ಯೆ ಬಂದರೂ, ಸರಕಾರದ ಏನೇ ಯೋಜನೆ ಇದ್ದರೂ ಅದು ದೇಶದ ಎಲ್ಲರಿಗೂ ತಟ್ಟುತ್ತದೆ. ಯಾವುದೋ ಒಂದು ವರ್ಗ ಯಾವುದೋ ಕಾರಣಕ್ಕೆ ಹಿಂದುಳಿದಿದೆ ಎಂದ ಮಾತ್ರಕ್ಕೆ ಸಮಸ್ಯೆಗಳು ಅವರಿಗೆ ಮಾತ್ರ ಬರುತ್ತದೆ ಎಂದಲ್ಲ. 

ಹಾಗೆ ನೋಡಿದರೆ ಅಲ್ಲಿ ಈಗಲೂ ಕರಿಜನರ ಬಗ್ಗೆ ಅಸಡ್ಡೆ ಭಾವನೆ ಇದೆ, ಹೊರಗಲ್ಲದಿದ್ದರೂ ಒಳೊಗೊಳಗೆ ಅವರ ಬಗ್ಗೆ ಕೀಳು ಭಾವನೆ ಇದೆ ಬಿಳಿಯರಲ್ಲಿ. ದೈಹಿಕ ಶ್ರಮದಾಯಕ, ಕೊಳಕು ಎನಿಸುವ ಕೆಲಸ ಮಾಡುವುದು ಹೆಚ್ಚಿನವರು ಈ ಕಪ್ಪುಜನರೇ. ಬಡತನ ಅವರಲ್ಲೇ ಹೆಚ್ಚಿದೆ, ಅಪರಾಧಿಗಳೂ ಕೂಡಾ. ಬಿಳಿ ಜನರ ಸರಕಾರೀ ಶೋಷಣೆ ಮಾಡಲು ಒಬಾಮ, ಅಥವಾ ಅಲ್ಲಿಯ ಯಾವ ರಾಜಕಾರಣಿಯೂ ಇದು ಯಾವುದನ್ನೂ ನೆಪ ಮಾಡಿಕೊಂಡಿಲ್ಲ

ನಮ್ಮ ಅಬ್ದುಲ್ ಕಲಾಮ್ ಅವರನ್ನೇ ನೋಡಿ. ರಾಮೇಶ್ವರದ ಹತ್ತಿರದ ಸಣ್ಣ ಹಳ್ಳಿಯಲ್ಲಿ, ದೊಡ್ಡ ಸಂಸಾರದ ಬಡ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ, ಅನೇಕ ದೊಡ್ಡ ಹುದ್ದೆ ಹೊಂದಿ, ರಾಷ್ಟ್ರಪತಿ ಕೂಡಾ ಆದವರು. ಈಗಲೂ ಕ್ರಿಯಾಶೀಲ. ಎಂದಾದರೂ ಅವರು ತಮ್ಮ ಮುಸ್ಲಿಮ್ identity ಪ್ರದರ್ಶನ ಮಾಡಿದ್ದಾರಾ? ತಮ್ಮ ಜನರ ಅಲ್ಪಸಂಖ್ಯಾತತನವನ್ನೇ ಬಂಡವಾಳ ಮಾಡಿಕೊಂಡಿದ್ದಾರಾ? ಎಲ್ಲೆಲ್ಲಿಯೂ ಅವರು ಬರೀ ಮುಸ್ಲಿಮರ ವಿಷಯ ಮಾತ್ರ ಮಾತಾಡುವುದಿಲ್ಲ. ಅವರ ಮಾತೇನಿದ್ದರೂ ದೇಶದ ಬಗ್ಗೆ, ವಿಜ್ನಾನದ ಬಗ್ಗೆ, ಶಿಕ್ಷಣದ ಬಗ್ಗೆ. ಒಟ್ಟಿನಲ್ಲಿ, ಇಡೀ ದೇಶದ ಏಳಿಗೆ ಬಗ್ಗೆ. ಈ ಜನಾಂಗ ಶತಮಾನಗಳಿಂದ ಕಷ್ಟದಲ್ಲಿತ್ತು, ಆ ವರ್ಗ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಇವರು ಹಳ್ಳಿಯವರು...ಆದ್ದರಿಂದ ಅವರಿಗೆ ಮಾತ್ರ ಕಷ್ಟವಿರುತ್ತದೆ, ಅವರನ್ನು ಮಾತ್ರ ಉದ್ಧಾರ ಮಾಡಬೇಕು, ಇವರೆಲ್ಲರ ಸಮಸ್ಯೆಗಳಿಗೆ ಇತರ ವರ್ಗ, ಧರ್ಮ, ಜಾತಿಯವರೇ ಕಾರಣ ಎಂಬಂತಹ ಸಂಕುಚಿತ ನಡವಳಿಕೆ ಒಮ್ಮೆಯಾದರೂ ತೋರಿಸಿದ್ದಾರೆಯೆ? ಅದಕ್ಕೇ ಏನೋ, ಅಬ್ದುಲ್ ಕಲಾಮ್ ಹೆಚ್ಚು ಕಡಿಮೆ ಎಲ್ಲರೂ, ಅಂದರೆ, ಜಾತಿ, ಧರ್ಮ, ವರ್ಗ ಬೇದ ಇಲ್ಲದೆ ಎಲ್ಲರೂ ಇಷ್ಟಪಡುವುದು. ಇನ್ನೊಮ್ಮೆ ರಾಷ್ಟ್ರಪತಿಯಾಗಲಿ ಎಂದು ಅನೇಕರ ಆಸೆ. ವಿಪ್ರೋದ ಅಜೀಮ್ ಪ್ರೇಮ್ ಜಿ ಎಂದೂ ತಮ್ಮ ಅಲ್ಪಸಂಖ್ಯಾತತನವನ್ನು ಬಂಡವಾಳ ಮಾಡಿಕೊಳ್ಳಲಿಲ್ಲ.

ಪಾರ್ಸಿಗಳು ನಿಜಕ್ಕೂ ಅಲ್ಪಸಂಖ್ಯಾತರು, ಅವರ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಕಡಿಮೆಯಾಗುತ್ತಿದೆ. ಜೈನರು, ಸಿಖ್ಖರು, ಬೌದ್ಧರು ಅಲ್ಪಸಂಖ್ಯಾತರೇ. ಯಾವ ರಾಜಕಾರಣಿಯೂ ತಲೆಕೆಡಿಸಿಕೊಂಡಹಾಗಿಲ್ಲ. ಅವರು ಮತ ಬ್ಯಾಂಕ್ ಅಲ್ಲವಲ್ಲ. ನಮ್ಮ ದಲಿತ ಹಿಂದುಳಿದ ಸಂಘಗಳಿಗೆ ಬುದ್ಧ ತುಂಬಾ ಆಪ್ತ. ಹೆಚ್ಚು ಕಡಿಮೆ ಅದೇ ರೀತಿಯ ಜೀವನ, ಸಂದೇಶ ಸಾರಿದ ಮಹಾವೀರನ ಪರಿಚಯವೇ ಇವರಿಗಿಲ್ಲ. ಕಾರಣ ಸುಸ್ಪಷ್ಟ. ಬುದ್ಧನನ್ನು ಹಾಡಿ ಹೊಗಳುವುದು ಒಂದೇ ಕಾರಣಕ್ಕೆ, ಅವರ ಆರಾಧ್ಯ ದೈವ ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂಬುದಕ್ಕೆ. ಅವರೇನಾದರು ಜೈನರಾಗಿದ್ದರೆ ಆಗ ಇವರೆಲ್ಲ ಜೈನ ಧರ್ಮವನ್ನು ಅಟ್ಟಕ್ಕೇರಿಸುತ್ತಿದ್ದರು. ಇಲ್ಲಿ ಬುದ್ಧನ ಸಂದೇಶ ಮುಖ್ಯವಲ್ಲ, ಅಂಬೇಡ್ಕರ್ ಏನು ಮಾಡಿದರು ಎಂಬುದು ಮಾತ್ರ. ಒಬ್ಬರಿಗಾದರೂ ಬುದ್ಧನ ಜೀವನ, ಸಂದೇಶ ಗೊತ್ತಿದ್ದರೆ ಕೇಳಿ.

ರಾಜಕಾರಣಿಗಳಾದರೋ ಕುರ್ಚಿಗಾಗಿ ಹೀಗೆ ಮಾಡುತ್ತಾರೆನ್ನಬಹುದು. ಆದರೆ ಬುದ್ಧಿಜೀವಿಗಳೆನ್ನಿಸಿಕೊಂಡವರು ಕೂಡ ಭೇದಭಾವ ಮಾಡಿ ಜಿಗುಪ್ಸೆ ಹುಟ್ಟಿಸುತ್ತಾರೆ. ಕೆಲ ರಾವಣ, ಕೀಚಕ, ಹಾಯ್, ಹಲೋ ವಾರಪತ್ರಿಕೆಗಳಿಗೆ ಹಿಂದುಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ಟೀಕಿಸುವುದೇ ಪರಮ ಗುರಿ. ಇತರ ಧರ್ಮಗಳಲ್ಲಿ ಏನೇ ಹುಳುಕಿದ್ದರೂ ಕಣ್ಣುಮುಚ್ಚಿ, ಹಿಂದೂ ಧರ್ಮದ ಕೆಲ ಕೆಟ್ಟ ಆಚರಣೆಗಳನ್ನೇ ವೈಭವೀಕರಿಸಿ ತೆಗಳುವುದೇ ಸಾಧನೆಯಾಗಿದೆ. ತಮ್ಮ ಬಡತನ, ಅನಕ್ಷರತೆ, ಅಲ್ಪಸಂಖ್ಯಾತತನ, ಹಿಂದುಳಿದಿರುವಿಕೆ, ಇಂಥ ನಕಾರಾತ್ಮಕಗಳನ್ನೇ ಬಂಡವಾಳ ಮಾಡಿಕೊಳ್ಳುವ, ಅದನ್ನು ಒಂದು badge of honour ಎಂಬಂತೆ ಹೆಮ್ಮೆಯಿಂದ ಹೊತ್ತು ತಿರುಗುವುದು ನಮ್ಮ ದೇಶದಲ್ಲಿ ಮಾತ್ರ ಎಂದು ನನ್ನ ಅನಿಸಿಕೆ. ತಾವು ಹಿಂದುಳಿದವರು, ಬಡತನದಲ್ಲಿ ಬೆಳೆದವರು/ಬಡವರು, ಹೆಚ್ಚು ಓದಿಲ್ಲದವರು, ಹಳ್ಳಿಯಲ್ಲಿ ಹುಟ್ಟಿಬೆಳೆದವರು ಎಂದು ಹೇಳಿಕೊಳ್ಳುವುದೇ ಒಂದು ಫ್ಯಾಶನ್ ಆಗಿಹೋಗಿದೆ. ನಮ್ಮ ಹುಟ್ಟು ನಮ್ಮ ಕೈಯಲ್ಲಿಲ್ಲ. ಅದಕ್ಕಾಗಿ ಬೇಸರ ಪಡಬೇಕಿಲ್ಲ, ಕೀಳರಿಮೆ ಬೇಕಿಲ್ಲ. ಅದೇ ರೀತಿ ಅದನ್ನು ಒಂದು ಅಸ್ತ್ರವಾಗಿ ಬಳಸುವುದೂ ಕೂಡ ತಪ್ಪು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವುದನ್ನು ಬಿಟ್ಟು ತಮ್ಮ ಕಷ್ಟಕ್ಕೆ ಇತರ ಎಲ್ಲರ ಮೇಲೆ ಹರಿ ಹಾಯುವುದನ್ನು ನಮ್ಮ ರಾಜಕೀಯದವರು, ಬುದ್ಧಿ(ಲದ್ದಿ)ಜೀವಿಗಳು, ಮಾಧ್ಯಮಗಳು ಪ್ರಚೋದಿಸುತ್ತಿವೆ.

ಶ್ರೀಮಂತರೆಲ್ಲ ಕೆಟ್ಟವರಲ್ಲ. ಬಡವ, ದೀನ ಎನಿಸಿಕೊಂಡವರೆಲ್ಲ ಮುಗ್ಧರು, ಒಳ್ಳೆಯವರೂ ಆಗಬೇಕಿಲ್ಲ. ನಮ್ಮ ಈಗಿನ ಹೆಚ್ಚಿನ ಮಧ್ಯಮ ವರ್ಗ, ಶ್ರೀಮಂತವರ್ಗದವರು ಕಷ್ಟಪಟ್ಟು ಮೇಲೆ ಬಂದು, ಗಂಟೆಗಟ್ಟಲೆ ದುಡಿಯುವವರಾಗಿದ್ದಾರೆ. ದುಡಿಯುವುದು ಎಂದರೆ ಕೇವಲ ಹೊಲಗದ್ದೆಗಳಲ್ಲಿ ಬೆವರು ಸುರಿಸುವುದು ಮಾತ್ರವಲ್ಲ. ಏರ್ ಕಂಡೀಶನ್ ಕ್ಯಾಬಿನ್ ನಲ್ಲಿ ಕೂತವರೂ ಕಷ್ಟಪಟ್ಟೇ ದುಡಿಯುತ್ತಾರೆ.

ಗ್ರಾಮೀಣ ಜನರೆಲ್ಲ ಮುಗ್ಧರು, ನಗರದ ಬಣ್ಣದ ಮಾತಿನ ಜನರಿಂದ ಮೋಸಹೋಗುವವರು ಎಂಬಂತೆ ಈಗಲೂ ಕಥೆ, ಕಾದಂಬರಿ, ಸಿನೆಮಾಗಳಲ್ಲಿ ಚಿತ್ರಿತವಾಗುತ್ತದೆ. ನಮ್ಮ ರಾಜಕಾರಣಿಗಳಿಗೆ, ಸಾಹಿತಿಗಳಿಗೆ, ಸಿನೆಮಾದವರಿಗೆ ಹಳ್ಳಿ ಎಂದ ಕೂಡಲೆ ನೆನಪಾಗುವುದು ರೈತರು ಮಾತ್ರ. 'ಅನ್ನದಾತ', 'ನೇಗಿಲ ಯೋಗಿ' ಮುಂತಾದ ಸುಂದರ ವರ್ಣನೆ ಬೇರೆ. ಹಳ್ಳಿ ಎಂದ ಮಾತ್ರಕ್ಕೆ ರೈತ ಮಾತ್ರ ಅಲ್ಲಿರುತ್ತಾನೆಯೇ? ಯಾಕೆ ಹಳ್ಳಿಯಿಲ್ಲಿ ಇತರ ವೃತ್ತಿಯವರು ಇಲ್ಲವೇನು? ಹಳ್ಳಿಯಲ್ಲಿ ವೈದ್ಯರು, ಶಿಕ್ಷಕರು, ಚಮ್ಮಾರರು, ಬ್ಯಾಂಕ್ ನೌಕರರು, ಅಂಗಡಿ ಇಟ್ಟಿರುವವರು, LIC ಏಜೆಂಟರು, ಹೀಗೆ ಎಲ್ಲ ವೃತ್ತಿಯವರೂ ಇದ್ದಾರೆ. ನಮ್ಮ ಕುಟುಂಬ ಹಳ್ಳಿಯದ್ದಾದರೂ ನಮಗೆ ಹೊಲಗಳಿಲ್ಲ, ಗದ್ದೆಯಲ್ಲಿ ಯಾರೂ ಕೆಲಸ ಮಾಡಿಯೇ ಇಲ್ಲ.

ಶೋಷಣೆ ಈಗಲೂ ಇದೆ ನಿಜ. ದೌರ್ಜನ್ಯದ ಸುದ್ದಿ ಈಗಲೂ ಪತ್ರಿಕೆಯಲ್ಲಿ ಇರುತ್ತದೆ. ಅದಕ್ಕೆ ಬೇಕಾದ "ಸರಿಯಾದ, ನಿಜವಾದ" ಸಹಾಯ ಯಾವ ಒಂದು ಸೇನೆ, ಸಮಿತಿ, ಪಕ್ಷವೂ ಮಾಡುವುದಿಲ್ಲ. ಹೋರಾಟ, ಹಾರಾಟ, ಇವರ ಕಷ್ಟಕ್ಕೆಲ್ಲ ಅವರು ಕಾರಣ, ಅವರನ್ನೆಲ್ಲ ತುಳಿಯುವುದು ಇವರು ಎಂಬ ಚೀರಾಟ, ಘೋಷಣೆ ಕೂಗುವುದು ಬಿಟ್ಟು ಬೇರೇನು ಮಾಡಿವೆ ಈ ಸಂಘ, ಸೇನೆ, ಸಮಿತಿ, ಪತ್ರಿಕೆಗಳು?

ನನ್ನ ಪ್ರಶ್ನೆ ಇಷ್ಟೆ. ಒಂದು ದೇಶ ಎಂದರೆ ಎಲ್ಲಾ ಥರದ ಜನರಿರುತ್ತಾರೆ. ಒಳ್ಳೆಯವರು, ಕೆಟ್ಟವರು, ಬುದ್ಧಿವಂತರು, ಮೂರ್ಖರು, ಸಾಧಕರು, ವಿಫಲಿಗಳು ಎಲ್ಲಾ ಜನಾಂಗ, ಜಾತಿ, ಧರ್ಮ, ದೇಶದಲ್ಲಿರುತ್ತಾರೆ. ಮೇಲ್ವರ್ಗದವರೆಲ್ಲ ಬುದ್ಧಿವಂತರಲ್ಲ. ಮೀಸಲಾತಿಯಿಂದ ಬಂದವರೆಲ್ಲ ದಡ್ದರಲ್ಲ. ಅದೇ ರೀತಿ, 'ಈ' ವರ್ಗದವರೆಲ್ಲ ಪರಮ ಸುಖಿಗಳು, ಅವರಿಗೆ ಸರಕಾರದ ನೆರವು ಅಗತ್ಯವಿಲ್ಲ, 'ಆ' ವರ್ಗದವರು ನೂರಾರು ವರ್ಷದಿಂದ ತುಳಿತಕ್ಕೊಳಗಾದವರು, ಅದಕ್ಕೆ ಈಗಲೂ ಅವರಿಗೆ ಮಾತ್ರ ಸಹಾಯ ಮಾಡಬೇಕು ಎಂದೋ, ಆ ಜಾತಿಯವರು ಅಲ್ಪಸಂಖ್ಯಾತರು, ಈ ಬಹುಸಂಖ್ಯಾತರು ಅವರನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತಾರೆ ಎಂದು ಭಯಾನಕ ವರ್ಣನೆ ಮಾಡುತ್ತ ಭೀತಿ ವಾತಾವರಣ ಸೃಷ್ಟಿಸುತ್ತ ಹೋಗುವುದೇ ರಾಜಕಾರಣವೇ, ಅದೇ ಬುದ್ಧಿಜೀವಿತನವೇ? ಕೆಲ ಜನಾಂಗವನ್ನು ಮಾತ್ರ ಯಾಕೆ ಪ್ರತಿನಿಧಿಸಬೇಕು? ಇದು ಬ್ರಿಟಿಶರ divide and rule ಗಿಂತ ಹೇಗೆ ಭಿನ್ನವಾಗುತ್ತದೆ?

Monday, 12 September 2011

ಉಭಯ ಕುಶಲೋಪರಿ

"ಮಹಾರಾಜರು ಯುದ್ಧದಿಂದ ವಿಜಯಿಯಾಗಿ ಬರುತ್ತಿದ್ದಾರಂತೆ. ಸ್ವಾಗತಕೆ ಸಿದ್ಧತೆ ಮಾಡಬೇಕು"

Friday, 1 July 2011

ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ...

ಸೂರ್ಯ. ಕಣ್ಣಿಗೆ ಕಾಣುವ ದೇವರು. ಭಾರತೀಯ ಮತ್ತು ಜಗತ್ತಿನ ಅನೇಕ ಸಂಸೃತಿಯಲ್ಲಿ ತುಂಬಾ ಮಹತ್ವ ಪಡೆದ ಆಕಾಶಕಾಯ. ಸೂರ್ಯ, ರವಿ, ಭಾಸ್ಕರ, ದಿನಕರ, ದಿವಾಕರ, ಮಿತ್ರ, ಅರ್ಕ, ಸವಿತಾ(ಸವಿತೃ), ಭಾನು, ಆದಿತ್ಯ, ಹಿರಣ್ಯಗರ್ಭ, ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಗ್ರಹಗಳ ಅಧಿಪತಿ ಸೂರ್ಯ.

ಈಜಿಪ್ತ್ ನಾಗರೀಕತೆಯಲ್ಲಿ ರಾ ಹೆಸರಿನಲ್ಲಿ ಅತಿ ಮುಖ್ಯ ದೇವತೆ ಸೂರ್ಯ.
ದಕ್ಷಿಣ ಅಮೇರಿಕಾ ನಾಗರಿಕತೆಗಳಾದ ಮಾಯಾ ಮತ್ತು ಅಜ್ಟೆಕ್ ಜನಾಂಗಗಳು ಸೂರ್ಯಾರಾಧನೆ ಮಾಡುತ್ತಿದ್ದವು. ಸೂರ್ಯನಿಗೆ ನರಬಲಿ ಕೊಟ್ಟು ತೃಪ್ತಿಪಡಿಸುತ್ತಿದ್ದರು.
ಗ್ರೀಕ್, ರೋಮನ್ನರಿಗೆ ಹೀಲಿಯೋಸ್ ಅಥವಾ ಅಪೋಲೋ ಆಗಿ ಸೂರ್ಯ ಕಾಣಿಸಿಕೊಂಡ.
ಪರ್ಷ್ಯನ್ನರು ಕೂಡ ಸೂರ್ಯನನ್ನು ಮಿತ್ರ ಎಂದು ಕರೆದರು.

ಭಾರತೀಯ ಪುರಾಣಗಳ ಪ್ರಕಾರ ಸೂರ್ಯ ಅದಿತಿಯ ಮಗ. ಅವನ ಪತ್ನಿಯರು ಸಂಧ್ಯಾ(ಸಂಜನಾ, ಸಂಜ್ಞ) ಮತ್ತು ಛಾಯಾ. ಮನು, ಶನಿ, ಯಮ ಮತ್ತು ಯಮಿ ಅವನ ಮಕ್ಕಳು. ಯಮಿಯು ತನ್ನ ಸಹೋದರ ಯಮನನ್ನೇ ಮೋಹಿಸಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕರಗಿ ನೀರಾಗಿ ಯಮುನಾ ನದಿಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ.
ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಕೂಡ ಸೂರ್ಯನ ಮಕ್ಕಳು.

ಒಡಿಶಾ ರಾಜ್ಯದ ಕೋನಾರ್ಕ ಸೂರ್ಯ ದೇವಾಲಯದ ಅತಿ ಪ್ರಸಿದ್ಧ ತಾಣ. ಗಂಗದೊರೆಯಾದ ನರಸಿಂಹದೇವ ಇದನ್ನು ಹದಿಮೂರನೆ ಶತಮಾನದಲ್ಲಿ ಕಟ್ಟಿಸಿದನು. ಇದು ಈಗ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ಒಳಗೆ ಪ್ರವೇಶ ಮುಚ್ಚಿದ್ದು, ಹೊರಗಿನಿಂದ ಮಾತ್ರ ನೋಡಲು ಸಾಧ್ಯ. ಹೊರಗೋಡೆಯ ಮೇಲೆ ಉತ್ಕೃಷ್ಟವಾದ ಕೆತ್ತನೆ ಇವೆ. ಇದನ್ನು ರಥದ ಮಾದರಿಯಲ್ಲಿ ಕಟ್ಟಲಾಗಿದೆ. ಇಪ್ಪತ್ತುನಾಲ್ಕು ಗಾಲಿಗಳಿವೆ (ಇಪ್ಪತ್ತುನಾಲ್ಕು ಗಂಟೆಗಳನ್ನು ಸೂಚಿಸಲು). ರಥದ ಕೀಲಿನ ನೆರಳು ದಿನದ ಸಮಯವನ್ನು ಸೂಚಿಸುತ್ತದೆ. ಏಳು ಕುದುರೆಗಳಿದ್ದವಂತೆ (ಏಳು ವಾರ, ಏಳು ಕಿರಣ) ಮೊದಲು. ಈಗ ಅವು ಸಂಪೂರ್ಣ ನಾಶವಾಗಿವೆ, ಒಂದನ್ನು ಬಿಟ್ಟು.


 ಕೋನಾರ್ಕದ ಸೂರ್ಯ ದೇವಾಲಯದ ಸೂರ್ಯ ರಥದ ಚಕ್ರ
  
ಕೋನಾರ್ಕದ ಸೂರ್ಯ

ಸೂರ್ಯೋದಯ, ಸೂರ್ಯಾಸ್ತ ಯಾವಾಗಲೂ ಸುಂದರ ದೃಶ್ಯಗಳೇ. ಅವುಗಳಲ್ಲಿ ಕೆಲವು ಇಲ್ಲಿ...

ಸೂರ್ಯ ಸಮುದ್ರ, ಗುಡ್ಡ ಬೆಟ್ಟದಿಂದ ಮಾತ್ರ ಮೇಲೇಳುವುದಿಲ್ಲ, ಕಾರ್ಖಾನೆ ಹೊಗೆ ಕೊಳವೆಯಿಂದ ಕೂಡಾ ಮೇಲೇಳುತ್ತಾನೆ ನೋಡಿ

Thursday, 28 April 2011

ಏನಿದರ ಹೆಸರು? ನೀವೇ ಇಟ್ಟುಕೊಳ್ಳಿ...

ಏಪ್ರಿಲ್ 24, ಪ್ರಕಾಶಣ್ಣನ 'ಇದೇ ಇದರ ಹೆಸರು' ಬಿಡುಗಡೆ ಸಮಾರಂಭದ ಕೆಲ ದೃಶ್ಯಗಳು

ಉಪ್ಪಿಟ್ಟು ಶಿರಾ, ಇನ್ನೂ ಸಲ್ಪ ಹಾಕ್ಸ್ಕಳಿ

ಕಾಫಿ ಬಗ್ಗೆ ನನಗೊಂದು ಹನಿಗವನ ನೆನಪಾಗ್ತಿದೆ ಮಾರಾಯ್ರೆ

ಪಂಚಮ್ ಹಳಿಬಂಡಿ, ಉಪಾಸನಾ ಮೋಹನ್

ನಿಮ್ಮೊಳಗೊಬ್ಬ, ಅಲ್ಲಲ್ಲ, ನಮ್ಮೊಳಗೊಬ್ಬ ಬಾಲು ಛಾಯಾಗ್ರಹಣ

ದಿಗ್ವಾಸ್ ಹೆಗಡೆ ತಲ್ಲೀನತೆ ನೋಡಿದರೆ ಸಾಕು ಅವರ 'ಚಿತ್ರಪಟ'ದ ಗುಣಮಟ್ಟ ತಿಳಿಯಲು

ಸಣ್ಣವನಾಗಿದ್ದಾಗ ತುಂಬಾ ತುಂಟ.....ಪ್ರಕಾಶಣ್ಣ ಮತ್ತವರ ಅಕ್ಕ

ಹನಿಗವನ punಡಿತ ಡುಂಡಿರಾಜ್ ಮತ್ತು 'ಕಳ್‍ಮಂಜ' ಕೋಮಲ್

ನೋಡಿ ಸ್ವಾಮಿ, ಇದೇ ಇದರ ಹೆಸರು

'ಶುಭಂ'ಗಿಂತ ಮುಂಚೆ ಗ್ರೂಪ್ ಫೋಟೋ

Sunday, 27 February 2011

ಪುರಾಣಗಳ ಬಗ್ಗೆ ಪುರಾಣ

ಮೊದಲೇ ಹೇಳಿಬಿಡುತ್ತೇನೆ. ಇಲ್ಲಿ ಬರೆದಿರುವ ವಿಷಯಗಳು ನಾನು ಓದಿ, ಕೇಳಿದ್ದರ ಬಗ್ಗೆ ಬಂದ ಕೆಲ ಆಲೋಚನೆಗಳು ಅಷ್ಟೆ ಹೊರತು ಯಾವುದೇ ಗಂಭೀರ ಸಂಶೋಧನೆ ಅಲ್ಲ. ಆದ್ದರಿಂದ ಕೆಲವು ತಪ್ಪು ಬರಹಗಳಿರುವ ಸಾಧ್ಯತೆ ಇದೆ.


ಯುದ್ಧ, ಆಡಳಿತದಲ್ಲಿ ಮಹಿಳೆ
ಈಗ ಸೈನ್ಯದಲ್ಲಿ, ವಾಯುಪಡೆಯಲ್ಲಿ ಸ್ತ್ರೀಯರು ದೊಡ್ಡ ಹುದ್ದೆಯಲ್ಲಿದ್ದರೆ ಅದೇ ದೊಡ್ಡ ಸುದ್ದಿ. ಆದರೆ ನಮ್ಮ ಪುರಾಣಗಳನ್ನು ಸ್ವಲ್ಪ ಅವಲೋಕಿಸಿದಾಗ ಮಹಿಳೆಯರು ಯುದ್ಧದಲ್ಲಿ ನೇರ ಇಲ್ಲ ಪರೋಕ್ಷವಾಗಿ ಭಾಗವಹಿಸಿದ್ದ ಹೇರಳ ಉದಾಹರಣೆಗಳು ಸಿಗುತ್ತವೆ. ಮಹಿಶಾಸುರ, ಶುಂಭ, ನಿಶುಂಭ, ರಕ್ತಬೀಜಾಸುರ ಮುಂತಾದ ಅಂದಿನ ಭಯೋತ್ಪಾದರಾದ ರಾಕ್ಷಸರನ್ನು ಬಗ್ಗುಬಡಿಯಲು ಮಹಿಳೆಯೇ ಬೇಕಾಯಿತು. ಸ್ವಲ್ಪಕಾಲ ದುರ್ಗೆ/ಚಾಮುಂಡಿ/ಮಹಿಶಾಸುರಮರ್ದಿನಿಯನ್ನು ದೇವರು ಎಂಬುದು ಮರೆತು ಒಬ್ಬ ಸ್ತ್ರೀ ಎಂದು ಮಾತ್ರ ನೋಡಿದಾಗ ನಮ್ಮ ಆಗಿನ ಜನ ಮಹಿಳೆಗೂ ಎಂಥ ಸ್ಥಾನ ಕೊಟ್ಟಿದ್ದರು ಎಂದು ತಿಳಿಯುತ್ತದೆ. ಮಹಿಶಾಸುರನನ್ನು ಯಾವ ದೇವತೆ, ತ್ರಿಮೂರ್ತಿಗಳಿಗೂ ಕೊಲ್ಲಲು ಸಾಧ್ಯವಾಗದೇ ಇದ್ದಾಗ ತಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸೃಷ್ಟಿಸಿದ ಶಕ್ತಿಯೇ ದುರ್ಗೆ. ಅಷ್ಟೆ ಅಲ್ಲ, ತಮ್ಮೆಲ್ಲ ಆಯುಧವನ್ನು ಧಾರೆ ಎರೆದರು. ಅದು ಯುದ್ಧ ತಂತ್ರದಲ್ಲಿ concentration of forces at a single point ನ ಅತಿ ಪುರಾತನ ಉದಾಹರಣೆ.

ತ್ರೇತಾಯುಗದಲ್ಲಿ ದಶರಥನು ಸಂಹಾಸುರನ ಜೊತೆ ಯುದ್ಧಕ್ಕೆ ಹೋದಾಗ ಅವನ ಮುದ್ದಿನ ಮಡದಿ ಕೈಕೇಯಿ ಕೂಡ ಅವನ ಜೊತೆ ಯುದ್ಧಕ್ಕೆ ಹೋಗುತ್ತಾಳೆ. ದಶರಥನು ಮೂರ್ಛೆಹೋದಾಗ ಅವನ ಶುಶ್ರೂಶೆ ಮಾಡಿ ಅವನ ಜೀವ ಉಳಿಸುತ್ತಾಳೆ. ಇದರಿಂದ ಸುಪ್ರೀತನಾದ ದಶರಥ ಬೇಕಾದ ವರ ಕೇಳು ಎನ್ನುತ್ತಾನೆ. ಆಗ ಕೇಳದೆ, ಮುಂದೆ ಮಕ್ಕಳು ಹುಟ್ಟಿ ದೊಡ್ಡವರಾದ ಮೇಲೆ ತನ್ನನ್ನು ಚಿಕ್ಕಂದಿನಿಂದ ನೋಡಿಕೊಂಡು ಬೆಳೆಸಿದ್ದ ಮಂಥರೆಯ ಮಾತು ಕೇಳಿ ವರಗಳ ದುರ್ಬಳಕೆ ಮಾಡಿಕೊಳ್ಳುತ್ತಾಳೆ. ಮುಂದೆ ಆಗುವುದೆಲ್ಲ ದೊಡ್ಡ ರಾಮಾಯಣವೇ ಬಿಡಿ.

ದ್ವಾಪರಯುಗದಲ್ಲಿ ಸತ್ಯಭಾಮೆ ಕೂಡ ಯುದ್ಧದಲ್ಲಿ ಭಾಗವಹಿಸಿದ್ದು ಕಾಣಬಹುದು. ಪ್ರಾಗ್ಜ್ಯೋತಿಷಪುರ (ಇಂದಿನ ಅಸ್ಸಾಂ) ನರಕಾಸುರನ ರಾಜಧಾನಿ. ಅವನು ಭೂದೇವಿಯ ಮಗ. ಅವನು ಮರಣ ಅವನ ತಾಯಿಯ ಕೈಯ್ಯಲ್ಲೇ ಎಂದು ವರವಿರುತ್ತದೆ. ಅವನ ಉಪಟಳವನ್ನು ತಾಳಲಾರದೆ ವಿಷ್ಣುವಿನ ಅವತಾರವಾದ ಕೃಷ್ಣ ಮತ್ತು ಅವನ ಪತ್ನಿ, ಭೂದೇವಿಯ ಅವತಾರವಾದ ಸತ್ಯಭಾಮೆ ಗರುಡನ ಮೇಲೆ ಕುಳಿತು ನರಕಾಸುರನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಆಗ ಕೂಡ ಒಳ್ಳೆಯ ತಂದೆ ತಾಯಿಗಳಿಗೆ ಪುಂಡ ಮಕ್ಕಳು ಇರುತ್ತಿದ್ದರು ಎಂದಾಯಿತು. ಯುದ್ಧದಲ್ಲಿ ಕೃಷ್ಣನು ಮೂರ್ಛೆ ಹೋಗಿದ್ದಾಗ ಸತ್ಯಭಾಮೆ ಯುದ್ಧವನ್ನು ಮುಂದುವರೆಸಿ ನರಕಾಸುರನ ವಧೆ ಮಾಡುತ್ತಾಳೆ. ಹೀಗೆ ಇಲ್ಲೂ ಕೂಡ ಮಹಿಳೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಣಬಹುದು.

ದ್ರೌಪದಿ ಕೂಡ ತನ್ನ ಗಂಡಂದಿರ ಮುಖ್ಯ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಳು ಎಂದು ಮಹಾಭಾರತದಲ್ಲಿ ಬರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ, ಅದರ ಮುಖ್ಯ ಕಾರಣಕರ್ತರಲ್ಲಿ ದ್ರೌಪದಿಯೂ ಒಬ್ಬಳು.

ಇವೆಲ್ಲ ಪುರಾಣ ಆಯಿತು. ಅದಕ್ಕೆಲ್ಲ ಯಾವುದೇ ಆಧಾರವಿಲ್ಲ, ಯುಗಯುಗಳಿಂದ ಹರಿದು ಬಂದ ಕತೆಗಳು, ಶ್ಲೋಕಗಳು, ತಾಳೆಗರಿ ದಾಖಲೆಗಳನ್ನು ಬಿಟ್ಟರೆ. ಇತಿಹಾಸವನ್ನು ನೋಡಿದರೆ ಅನೇಕ ಮಹಿಳಾ ಆಡಳಿತಗಾರರು, ಶತ್ರುಗಳೊಡನೆ ಹೋರಾಡಿದ ವೀರ ಮಹಿಳೆಯರು ಸಿಗುತ್ತಾರೆ. ದೆಹಲಿಯನ್ನು ಆಳಿದ ಏಕೈಕ ಮುಸ್ಲಿಮ್ ಮಹಿಳೆ ರಜಿಯಾ ಸುಲ್ತಾನ (1236-1240), ಅಕ್ಬರನ ಸೈನ್ಯದ ಜೊತೆ ಯುದ್ಧ ಮಾಡಿದ ರಾಣಿ ದುರ್ಗಾವತಿ, ಔರಂಗಜೇಬನ ವಿರುದ್ಧ ಹೋರಾಡಿದ ಕೆಳದಿಯ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕಿತ್ತೂರು ಚೆನ್ನಮ್ಮ, ಝಾನ್ಸಿಯ ಲಕ್ಷ್ಮಿಬಾಯಿ (ಮೂಲ ಹೆಸರು ಮಣಿಕರ್ಣಿಕಾ), ಪೋರ್ತುಗೀಸರನೊಡನೆ ಹೋರಾಡಿದ ತುಳುನಾಡಿನ ರಾಣಿ ಅಬ್ಬಕ್ಕ, ಅಬ್ಬಬ್ಬಾ! ದೆಹಲಿಯ ಇಂದಿನ "ರಾಣಿ"ಯ ಬಗ್ಗೆ ಮುಂದೆ ಯಾರಾದರೂ ಹೀಗೆ ಬರೆಯಬಹುದೇನೋ???

ಅಂಗವಿಕಲರ ಸ್ಥಾನ
ಈಗ ವಿಕಲಚೇತನರಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ. ಹಿಂದಿನ ಕಾಲದಲ್ಲಿ ಹೇಗಿತ್ತು? ಒಬ್ಬ ಅಂಧ ವ್ಯಕ್ತಿ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದು ದ್ವಾಪರಯುಗದಲ್ಲಿ ಕಾಣುತ್ತದೆ. ಹಸ್ತಿನಾಪುರದ ರಾಜ ಮೊದಲು ಕಿರಿಯವನಾದ ಪಾಂಡು. ಅವನ ಸಾವಿನ ನಂತರ ದೊಡ್ಡವನಾದ ಧೃತರಾಷ್ಟ್ರ ಅಂಧನಾಗಿದ್ದರೂ ಸಿಂಹಾಸನವೇರಬೇಕಾಗುತ್ತದೆ. ಮೊದಲೆಲ್ಲ ಭೀಷ್ಮ, ನಂತರ ದುರ್ಯೋಧನರ ಕೈಗೊಂಬೆ ರಾಜನಾಗಿದ್ದರೂ, official ಆಗಿ ರಾಜನಾಗಿದ್ದು ಧೃತರಾಷ್ಟ್ರ ತಾನೆ? ಒಬ್ಬ ದೃಷ್ಟಿಹೀನ ವ್ಯಕ್ತಿ ಒಂದು ದೊಡ್ಡ ದೇಶದ ರಾಜನಾಗಿದ್ದು ಸಾಮಾನ್ಯ ವಿಷಯವೇನಲ್ಲ.

ಉದ್ದಿಮೆ, ವೃತ್ತಿಗಳು
ಒಬ್ಬ ವ್ಯಕ್ತಿ ಮಾಡುವ ಕೆಲಸದಿಂದ ಅವನ ಜಾತಿಯನ್ನು ನಿರ್ಧರಿಸಿದ್ದು ಎಲ್ಲರಿಗೂ ಗೊತ್ತಿರುವುದೇ. ರಾಜ, ಮಂತ್ರಿ, ಪುರೋಹಿತ, ಗುರು (ದ್ರೋಣಾಚಾರ್ಯ, ಬೃಹನ್ನಳೆ, ಗರ್ಗ, ವಿಶ್ವಾಮಿತ್ರ), ಋಷಿ, ಸೂತ (ರಥ ನಡೆಸುವವನು, ಸಂಜಯ, ಕರ್ಣನ ತಂದೆ), ವೈದ್ಯ (ಧನ್ವಂತರಿ, ಅಶ್ವಿನಿ ಸಹೋದರರು, ಚ್ಯವನ), ಶಿಲ್ಪಿ (ಮಯ), ಅಡುಗೆಯವರು (ಭೀಮ, ನಳ) ಹೀಗೆ ಕೆಲ ವೃತ್ತಿಗಳ ಉಲ್ಲೇಖ ನಮ್ಮ ಪುರಾಣ, ಮಹದ್ಗ್ರಂಥಗಳಲ್ಲಿವೆ. ಆಗ ಇದ್ದ ಉದ್ದಿಮೆಗಳೇನು? ಆಭರಣಗಳಿಗೆ ಬೇಕಾಗುವ ಚಿನ್ನ, ರತ್ನಗಳ ಗಣಿಗಾರಿಕೆ ಹೇಗಿತ್ತು? ಯುದ್ಧ ಸಲಕರಣೆಗಳನ್ನು ಹೇಗೆ ತಯಾರಿಸುತ್ತಿದ್ದರು? ಆಹಾರ ತಯಾರಿಕೆ, ಸರಬರಾಜು ಹೇಗಿತ್ತು? ಒಂದು ರಾಜ್ಯದಿಂದ ದೂರದ ಇನ್ನೊಂದು ರಾಜ್ಯಕ್ಕೆ ಸುದ್ದಿ ಹೇಗೆ ತಲುಪಿಸುತ್ತಿದ್ದರು? ಅರಮನೆ, ಕೋಟೆ, ದೇವಾಲಯಗಳನ್ನು ಹೇಗೆ, ಯಾರು ಕಟ್ಟುತ್ತಿದ್ದರು? ಯಾವುದರ ಬಗ್ಗೆಯೂ ದಾಖಲೆಗಳಿಲ್ಲ. ಆದರೆ ಹೈನುಗಾರಿಕೆ ಒಂದು ಉದ್ದಿಮೆಯಾಗಿತ್ತು ಎಂದು ದ್ವಾಪರಯುಗದಲ್ಲಿ ಕಾಣಬಹುದು. ವೃಂದಾವನದ ಜನ ಹಾಲು, ಮತ್ತದರ ಉತ್ಪನ್ನಗಳನ್ನು ಮಥುರಾ ಮುಂತಾದ ದೊಡ್ಡ ಪಟ್ಟಣಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಮಹಾಭಾರತದಲ್ಲಿ ಕಾಣಬಹುದು.

ಪುರಾ ಮತ್ತು ಇತಿಹಾಸ
ಅದೆಲ್ಲ ಸರಿ, ಪುರಾಣ (mythology) ಮತ್ತು ಇತಿಹಾಸ (history), ಇವೆರಡರ ಮಧ್ಯೆ ಇರುವ ಸರಹದ್ದು ಯಾವುದು? ಪುರಾಣದಲ್ಲಿ ಬರುವ ಇಂದ್ರ, ಅಗ್ನಿ, ವಾಯು, ದೇವತೆಗಳು, ರಾಕ್ಷಸರು, ದೇವ ದಾನವ ಯುದ್ಧಗಳು ಈಗೆಲ್ಲಿ? ಅವರೆಲ್ಲ ಈಗೇನು ಮಾಡುತ್ತಿದ್ದಾರೆ? ಕಲಿಯುಗದಲ್ಲಿ ದೇವತೆಗಳು ಮತ್ತು ರಾಕ್ಷಸರು ಮನುಷ್ಯರಾಗಿ ಭೂಲೋಕದಲ್ಲಿ ಹುಟ್ಟುತ್ತಾರೆ ಎಂಬ ಪ್ರಸ್ತಾಪ ಮಹಾಭಾರತದಲ್ಲಿ ಬರುತ್ತದೆ. ಈಗಿನ ಭಯೋತ್ಪಾದರನ್ನು ರಾಕ್ಷಸರ ಪುನರ್ಜನ್ಮವೆನ್ನಬಹುದೇನೋ.

ದಶಾವತಾರದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಪರಶುರಾಮನ ಕಾಲದವರೆಗೆ ಪುರಾಣ ಕಾಲವೆನ್ನಬಹುದು. ತ್ರೇತಾಯುಗದಿಂದ ಪುರಾಣ ಮತ್ತು ಇತಿಹಾಸ ಇವೆರಡರ ಕಲಸುಮೇಲೋಗರ (intermixing) ಕಾಣಬಹುದು. ಹತ್ತು ತಲೆ, ಇಪ್ಪತ್ತು ಕೈಗಳು ಇರುವ ರಾವಣ, ಭೂಮಿ ಆಕಾಶ ಸಂಚರಿಸುವ ನಾರದ, ಸಮುದ್ರ ದಾಟುವ, ಪರ್ವತ ಎತ್ತುವ ಹನುಮಂತ, ಬೆಂಕಿ ಮೂಲಕ ಹೋದರೂ ಸಾಯದ ಸೀತೆ ಮುಂತಾದ ಅತಿಮಾನುಷ ವ್ಯಕ್ತಿತ್ವಗಳು ಕಾಣಬಹುದು. ಅದೇ ರೀತಿ ಅಯೋಧ್ಯ, ಹಂಪೆ, ಲಂಕೆ ಮುಂತಾದ "ಐತಿಹಾಸಿಕ" ಅಂದರೆ ಭೂಮಿಯ ಮೇಲೆ ಇಂಥದ್ದೇ ಜಾಗ ಎಂದು ತೋರಿಸಬಹುದಾದ ಪ್ರದೇಶಗಳೂ ಕಾಣಬಹುದು. ಅಂದರೆ ಈ ಕಾಲದಿಂದ ಸ್ವಲ್ಪ ಸ್ವಲ್ಪವಾಗಿ ಪುರಾಣ ಕಡಿಮೆಯಾಗುತ್ತ, ಇತಿಹಾಸ ಪ್ರಾರಂಭವಾಗುತ್ತದೆ.

ದ್ವಾಪರಯುಗದಲ್ಲೂ ಇದನ್ನು ಕಾಣಬಹುದು. ಹಸ್ತಿನಾಪುರ (ಮೀರಟ್ ಬಳಿ ಈಗ ಚಿಕ್ಕ ಗ್ರಾಮವಾಗಿದೆ), ಮಥುರಾ, ಇಂದ್ರಪ್ರಸ್ಥ (ಇಂದಿನ ದೆಹಲಿ), ದ್ವಾರಕೆ (ಇಂದಿನ ಗುಜರಾತಿನಲ್ಲಿದೆ, ಸಮುದ್ರದಲ್ಲಿ ಮುಳುಗಿದೆ), ಮುಂತಾದ ಜಾಗಗಳನ್ನು ತೋರಿಸಬಹುದು. ಹಾಗೆ ರಾಕ್ಷಸರನ್ನು ಕೊಲ್ಲುವ, ವಿಶ್ವರೂಪ ತೋರಿಸುವ ಕೃಷ್ಣ, ಪಾಂಡವರ ಜನನಕ್ಕೆ ಕಾರಣವಾಗುವ ಇಂದ್ರ, ಯಮ, ವಾಯು ಮುಂತಾದ "ಸ್ವರ್ಗ"ದಲ್ಲಿರುವ ದೇವತೆಗಳು, ಸ್ವರ್ಗಕ್ಕೆ ಹೋಗಿ ಬರುವ ಅರ್ಜುನ, ಶಿವನೆಂಬ ದೇವರೊಡನೆ ಹೋರಾಡಿ ಪಾಶುಪತಾಸ್ತ್ರ ಹೊಂದುವ ಅರ್ಜುನ, ಈ ಕಾಲಘಟ್ಟದಲ್ಲೂ ಮುಖ ತೋರಿಸುವ "ಚಿರಂಜೀವಿ" ಹನುಮಂತ, ಜಾಂಬವಂತ, ಇವೆಲ್ಲ ಪೌರಾಣಿಕತೆಯನ್ನು ತೋರಿಸುತ್ತದೆ.

ಈ ಕಾಲದಿಂದ ಇಂದ್ರ ಮುಂತಾದ ದೇವತೆಗಳ ಸ್ಥಾನಮಾನ ಕಡಿಮೆಯಾಗುತ್ತ ಬರುತ್ತದೆ. ಇಂದ್ರನ ಪೂಜೆಯನ್ನು ಸ್ವತಹ ಕೃಷ್ಣನೇ ತಡೆಹಿಡಿದು, ಪ್ರಕೃತಿಯ (ಗೋವರ್ಧನಗಿರಿ) ಪೂಜೆಯ ಮಹತ್ವ ಸಾರುತ್ತಾನೆ. ಸ್ವಲ್ಪ ಯೋಚಿಸಿ ನೋಡಿ. ಈ ಕಾಲಘಟ್ಟದ ನಂತರ ಅತಿಮಾನುಷ ವ್ಯಕ್ತಿ, ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಪವಾಡಗಳು, ಅಲ್ಲಿ ಇಲ್ಲಿ ಸ್ವಲ್ಪ ಕಂಡುಬಂದರೂ ಪುರಾಣದಲ್ಲಿ ಬರುವ ಹಾಗೆ ಸಾಮಾನ್ಯ ಘಟನೆಗಳಾಗಿರುವುದಿಲ್ಲ.

ಹಿಂದು ಧರ್ಮ ಪುರಾಣಗಳಂತೆ ಬೈಬಲ್ ನಲ್ಲಿ ಕೂಡ ಪವಾಡ, ಅತಿಮಾನುಷ ಘಟನೆಗಳ ವರ್ಣನೆಯಿದೆ. ಸಮುದ್ರ ಸೀಳುವ ಮೋಸಸ್, ಜಗತ್ತಿನ ಎಲ್ಲ ಜೀವರಾಶಿಯ ಗಂಡು ಹೆಣ್ಣು ಪ್ರಾಣಿಗಳನ್ನು ದೋಣಿಯಲ್ಲಿ ಸಾಗಿಸಿ ರಕ್ಷಿಸುವ ನೊವಾ (Noah's Ark), ದೇವರಿಂದ ನೇರ ಜನಿಸುವ ಆಡಮ್ (ಆದಿಮ??), ಈವ್, ಅವರನ್ನು ಪಾಪಿಗಳನ್ನಾಗಿಸುವ ಸೈತಾನ, ಸತ್ತವರನ್ನು ಬದುಕಿಸುವ, ಸ್ವತಃ ತಾನೇ ಪುನರ್ಜನ್ಮ ಎತ್ತುವ ಕ್ರಿಸ್ತ, ಹೀಗೆ ಹೇರಳ ಅದ್ಭುತ ಎನಿಸುವ ಕಾರ್ಯ, ಘಟನೆಗಳು ಬೈಬಲ್ ನಲ್ಲಿವೆ. ಇಲ್ಲೂ ಕೂಡ ಗಮನಿಸಿದರೆ, ಕ್ರಿಸ್ತನ ಕಾಲದ ನಂತರ ಇಂತಹ ಅದ್ಭುತ ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ಹಾಗೆ ಕ್ರೈಸ್ತರೂ ಪವಾಡಗಳನ್ನು ನಂಬುತ್ತಾರೆ. ಕ್ರೈಸ್ತರು ಸಂತ ಪದವಿ (saint) ಪಡೆಯಬೇಕಾದರೆ ಅವರು ಪವಾಡ ಮಾಡಿರಲೇಬೇಕು ಎನ್ನುವ ನಿಯಮವಿದೆ.

ಬೈಬಲ್ ಕಥೆಗಳಿಗೂ ನಮ್ಮ ಪುರಾಣ ಕಥೆಗಳಿಗೂ ಕೆಲ ಸಾಮ್ಯತೆ ಇವೆ. ನಮ್ಮಲ್ಲಿ ಹೇಗೆ ದೇವರು (ವಿಷ್ಣು) ಒಂಭತ್ತು ಸಲ ಅವತಾರ ಎತ್ತಿದ್ದನು, ಹತ್ತನೆಯ ಅವತಾರದ ವೇಳೆ ಪ್ರಳಯವಾಗುತದೆ ಎನ್ನುವ ನಂಬಿಕೆ ಇದೆಯೋ, ಹಾಗೆ ಬೈಬಲ್ ನಲ್ಲಿ ಕೂಡ ದೇವರು ಭೂಮಿಗೆ ಒಂಭತ್ತು ಸಲ ಭೇಟಿ ಇತ್ತಿದ್ದಾನೆ, ಹತ್ತನೆ ಸಲ ಬಂದಾಗ ಪ್ರಳಯವಾಗುತ್ತದೆ ಎನ್ನುವ ಪ್ರಸ್ತಾಪವಿದೆ. ನಮ್ಮಲ್ಲಿ ಕೂರ್ಮಾವತಾರದ ವೇಳೆ ಮನುವು ಜೀವರಾಶಿಯನ್ನು, ಗಿಡಮೂಲಿಕೆಗಳನ್ನು ದೋಣಿಯಲ್ಲಿ ಜಲಪ್ರಳಯದಿಂದ ರಕ್ಷಿಸಿದ್ದನು ಎಂದು ಇದೆಯೋ ಹಾಗೆ ಕ್ರೈಸ್ತರಲ್ಲಿ ನೋವಾನು ಜಲಪ್ರಳಯದಿಂದ (The Great Flood) ಜೀವರಾಶಿಯನ್ನು ರಕ್ಷಿಸಿದ್ದನು ಎನ್ನುವ ನಂಬಿಕೆ ಇದೆ.

ಇದಿಷ್ಟು ಸದ್ಯಕ್ಕೆ ನನಗೆ ಬಂದ ಆಲೋಚನೆಗಳು. ಹೀಗೆ ಯೋಚಿಸುತ್ತಾ ಹೋದರೆ ಇನ್ನೂ ಅದ್ಭುತ ಸಂಗತಿಗಳು ಕಾಣಬಹುದೇನೋ.

Tuesday, 23 November 2010

ಚಹಾ ಲೋಟದಲ್ಲಿ ಬಿರುಗಾಳಿ

ಚಹಾ ಲೋಟದಲ್ಲಿ ಬಿರುಗಾಳಿ - Storm in a teacup. ಇದು ಅತಿ ಸಣ್ಣ ಸಮಸ್ಯೆಯನ್ನು ತುಂಬ ದೊಡ್ಡದಾಗಿ ವೈಭವೀಕರಿಸುವುದರ ಬಗ್ಗೆ ಆಂಗ್ಲದಲ್ಲಿರುವ ಒಂದು ನಾಣ್ನುಡಿ. ಚಹಾಲೋಟದಲ್ಲಿ ಬಿರುಗಾಳಿ ಏಳುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸುಂದರಿಯರು, ಪ್ರಾಣಿ ಪಕ್ಷಿಗಳು, ಪ್ರೇಮಿಗಳು, ದೆವ್ವ ಭೂತ ಮೋಹಿನಿಯರು ಏಳುತ್ತಾರೆ. ನೀವೇ ನೋಡಿ.

 ಪ್ರಿಯತಮೆಯನ್ನು ಬಿಗಿದಪ್ಪಿರುವ ಪ್ರಿಯಕರ

 ಪ್ರೇಮಿಗಳು

 ಚಹಾ ಲೋಟದಲ್ಲಿ ಮಾರ್ಜಾಲ ನಡಿಗೆ (cat walk)





 ಭೂತ? ಮೋಹಿನಿ? ತಲೆಬುರುಡೆ?

 ರಾತ್ರಿಸಂಚಾರಕ್ಕೆ ಹೊರಟ ಮೋಹಿನಿ

 ನೀರು, ಅಲ್ಲಲ್ಲ ಚಹಾದಲ್ಲಿ ಹಂಸಯಾನ

 ಸಂಗೀತಗಾರ್ತಿ

ಅಮ್ಮ ಮಗು

Thursday, 7 October 2010

ಒಂದು ತ್ರಿಕೋನ ಪ್ರೇಮದ ಕತೆ...

ನನಗೆ ಅಸೂಯೆ ತಾಳಲಾಗುತ್ತಿಲ್ಲ. ಅಲ್ಲ, ನೀವೆ ಹೇಳಿ, ಇಷ್ಟು ವರ್ಷ ನನ್ನ ಜೊತೆ ನಗುನಗುತ್ತ ಮುದ್ದು ಮಾಡುತ್ತ ಲಲ್ಲೆಗರೆಯುತ್ತಿದ್ದ ನನ್ನ ಹೆಂಡತಿ ಈಗ ನನಗೆ ಅಪರಿಚಿತಳಂತೆ ತೋರುತ್ತಿದ್ದಾಳೆ. ಎಲ್ಲ ಅವನು ಬಂದ ಮೇಲೆ. ಹೌದು, ಅವನೇ. ಅವನೇ ನಮ್ಮಿಬ್ಬರ ಮಧ್ಯೆ ಬಂದು ನನ್ನ ನೆಮ್ಮದಿಯನ್ನು ಹಾಳುಮಾಡುತ್ತಿರುವವನು. ನಿಮ್ಮ ಮತ್ತು ನಿಮ್ಮ ಪ್ರೇಮಿ ಅಥವಾ ಹೆಂಡತಿಯ ಮಧ್ಯೆ ಮತ್ತೊಬ್ಬರು ಬಂದರೆ ಹೇಗನಿಸುತ್ತದೆ ನಿಮಗೆ?

ಕೈಹಿಡಿದ ಗಂಡನ ಹೊಟ್ಟೆ ಉರಿಸಲೆಂದೇ ಹೀಗೆ ಮಾಡುತ್ತಿದ್ದಾಳೆಯೆ? ನೋಡಿ, ನೀವೇ ನೋಡಿ, ಅವನನ್ನು ಮಾತಾಡಿಸುವುದೇನು, ಮುದ್ದು ಮಾಡುವುದೇನು, ಛೇ, ಛೇ!!! ನನ್ನ ಇರುವನ್ನೇ ಮರೆತಿದ್ದಾಳಲ್ಲ!

ಹೋಗಲಿ, ಅವನಿಗಾದರೂ ಸ್ವಲ್ಪ ಮಾನ ಮರ್ಯಾದೆ ಬೇಡವೇ? ಗಂಡ ಎನಿಸಿಕೊಂಡಿರುವ ಪ್ರಾಣಿ ಎದುರಿನಲ್ಲಿಯೇ ಅವಳ ಜೊತೆ ನಗುವುದೇನು, ಕೈ ಆಡಿಸುವುದೇನು... ನನ್ನ ಹೆಂಡತಿ ಒಬ್ಬ ಹೆಣ್ಣು, ಅದೂ ಮದುವೆ ಆದವಳು ಎಂದು ಗೊತ್ತಿಲ್ಲವೇ ಅವನಿಗೆ? ಅವಳ ಎದುರೇ ಬೆತ್ತಲೆ ಆಗುತ್ತಾನಲ್ಲ, ಇವನಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ, ನೀವೇ ಹೇಳಿ??

ನನಗೆ ಮೈ ಉರಿಯುವುದು ಬರೀ ಇಷ್ಟಕ್ಕೆ ಅಲ್ಲ. ಅವಳು ಅವನನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ನನಗೂ ಅವನ ಸೇವೆ ಮಾಡಲು ಹೇಳುತ್ತಾಳಲ್ಲ ಅದಕ್ಕೇನನ್ನಲಿ ನಾನು? ಎಷ್ಟು ಧೈರ್ಯ, ದುರಹಂಕಾರ ಅವಳಿಗೆ. ನನ್ನ ಪ್ರೇಮವನ್ನು ಕಸಿದುಕೊಂಡಿದ್ದಲ್ಲದೆ, ನನ್ನ ಕೈಯ್ಯಲ್ಲಿ ಸೇವೆ ಮಾಡಿಸಿಕೊಳ್ಳುವ ಚಪಲ ಅವನಿಗೆ. ನನ್ನನ್ನು ಕೆಣಕಲೆಂದೇ ನನ್ನನ್ನು ನೋಡಿ ನಗುತ್ತಾನೆ, ಹಲ್ಲು ಕಿಸಿಯುತ್ತಾನೆ. "ನೋಡು, ನಿನ್ನ ಎದುರಿನಲ್ಲಿಯೇ ನಿನ್ನ ಹೆಂಡತಿಯ ಕೈಯ್ಯಲ್ಲಿ ಸ್ನಾನ ಮಾಡಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ನೀನು ಕೂಡಾ ನನ್ನ ಸೇವೆ ಮಾಡುವ ಹಾಗೆ ಮಾಡುತ್ತೇನೆ" ಎಂದು ಸವಾಲು ಹಾಕುತ್ತಾನೆ. ಅಯ್ಯೋ ನಾನೆಲ್ಲಿ ಓಡಿ ಹೋಗಲಿ? ಈ ಅವಮಾನವನ್ನು ಸಹಿಸಲಾರೆ.


ಬೇಕಾದರೆ ನೀವೆ ಕೇಳಿ ನನ್ನ ಹೆಂಡತಿಯ ಮಾತನ್ನು. "ರೀ, ಅದೇನು ಆರಾಮಾಗಿ ಕೂತು ಬಿಟ್ರಿ. ಅವನನ್ನು ನಾನೊಬ್ನೆ ನೋಡಿಕೊಳ್ಳಬೇಕೆ? ನನಗೂ ಸಾಕಾಗುತ್ತೆ, ಸುಸ್ತಾಗುತ್ತೆ. ನೀವ್ ಮಾತ್ರ ಸಂಬಂಧವೇ ಇಲ್ದೇ ಇರೋ ಥರ ನೋಡ್ತಾ ಇದ್ರೆ ಹೇಗೆ? ಅವನು ನನಗೊಬ್ನೇ ಮಗ ಅಲ್ಲ, ನಿಮಗೂ ಕೂಡ ಅನ್ನೋದು ಮರೀಬೇಡಿ. ಬೇಗ, ಮಗು ಅಳ್ತಾ ಇದೆ, ಉಚ್ಚೆ ಹೊಯ್ದಿರಬೇಕು, ಅವನ ಬಟ್ಟೆ ಬದ್ಲಾಯಿಸಿ"

ನೋಡಿದಿರಾ???

Wednesday, 18 August 2010

ಸ್ವಲ್ಪ ಸುತ್ತಾಡೋಣ ಬನ್ನಿ...

ನಮ್ಮ ಸುತ್ತಮುತ್ತಲಿನಲ್ಲೇ ನೋಡಬೇಕಾದ ಅನೇಕ ಜಾಗಗಳಿವೆ ಎಂದು ಹಿಂದೆ ಬರೆದಿದ್ದೆ. ಒಂದು ದಿನದಲ್ಲಿ ನೋಡಬಹುದಾದ ಕೆಲ ಜಾಗಗಳು ಇಲ್ಲಿವೆ. ಇವೆಲ್ಲ ಬೆಂಗಳೂರಿನ ದಕ್ಷಿಣದಲ್ಲಿ ಹೊಸೂರು ರಸ್ತೆ ಸುತ್ತಮುತ್ತಲಲ್ಲಿ ಇವೆ.

ಸಿಲ್ಕ್ ಬೋರ್ಡ್ ಸರ್ಕಲ್ ಇಂದ ಹೊಸೂರು ರಸ್ತೆಯಲ್ಲಿ ಸುಮಾರು ಹತ್ತು ಕಿಲೋಮೀಟರ್ ಹೋದರೆ ಎಲೆಕ್ಟ್ರಾನಿಕ್ ಸಿಟಿ ಸಿಗುತ್ತದೆ. ಇನ್ನೂ ಆರು ಕಿ.ಮಿ.ಮುಂದೆ ಹೋದರೆ ಸಿಗುವುದು ಚಂದಾಪುರ. ಇಲ್ಲಿ ಬಲಗಡೆ ರಸ್ತೆ ಹೋಗುವುದು ಆನೇಕಲ್ ಗೆ. ಚಂದಾಪುರ ಶನಿವಾರ ನಡೆಯುವ ಸಂತೆಗೆ ಪ್ರಸಿದ್ಧ. ಇಲ್ಲಿ ನಡೆಯುವ ಕುರಿ, ದನ, ಎತ್ತು, ಎಮ್ಮೆಗಳ ವ್ಯಾಪಾರಕ್ಕೆ ಸುತ್ತಮುತ್ತ ಮತ್ತು ತಮಿಳುನಾಡಿನ ರೈತರು ಬರುತ್ತಾರೆ.

ಚಂದಾಪುರದಲ್ಲಿ ಎಡಗಡೆ ರಸ್ತೆಯಲ್ಲಿ ಹೋದರೆ ಸಿಗುವುದು ನಮ್ಮ ಮೊದಲ ನಿಲ್ದಾಣ ರಾಮಸಾಗರ ಕೆರೆ. ಚಂದಾಪುರದ ಸುಂದರ ಕೆರೆ ಮೇಲೆ ಹಾದು ಹೋದರೆ ಮೊದಲು ಸಿಗುವುದು ಹೀಲಲಿಗೆಯ ಪುಟ್ಟ ರೈಲು ನಿಲ್ದಾಣ. ನಗರದಿಂದ ಮತ್ತು ತಮಿಳುನಾಡಿನಿಂದ ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಹೀಲಲಿಗೆಯಲ್ಲಿರುವ BCET ಇಂಜಿನಿಯರಿಂಗ್ ಕಾಲೇಜಿಗೆ ರೈಲಿನಲ್ಲಿ ಬರುವವರು ಇಲ್ಲೇ ಇಳಿಯಬೇಕು. ಇದೇ ರಸ್ತೆಯಲ್ಲಿ ಸುಮಾರು ಎರಡು ಕಿ.ಮಿ. ಹೋದರೆ ಸಿಗುವುದು ರಾಮಸಾಗರ. ಬಲಗಡೆ ಸಣ್ಣ ರಸ್ತೆಯಲ್ಲಿ ಹೋದರೆ ಇರುವುದು ರಾಮಸಾಗರ ಕೆರೆ. ಅಲ್ಲಿ ತೆಗೆದ ಕೆಲ ದೃಶ್ಯಗಳು.


White browed Bulbul

Red Whiskered Bulbul


ಇದು ಸುಮಾರು ದೊಡ್ಡ ಕೆರೆ. ಇದರ ಇನ್ನೊಂದು ದಡದಲ್ಲಿರುವ ಮುತ್ತಾನಲ್ಲೂರು ಗ್ರಾಮದಲ್ಲಿ ಒಡ್ಡಿನ ಮೂಲಕ ಹತ್ತಿರದ ಹೊಲಗದ್ದೆಗಳಿಗೆ ಈ ಕೆರೆ ನೀರು ಉಪಯೋಗವಾಗುತ್ತದೆ. ಪಕ್ಷಿವೀಕ್ಷಣೆಗೆ ಇದು ಒಳ್ಳೆ ಸ್ಥಳ

ಬನ್ನಿ, ಮುತ್ತಾನಲ್ಲೂರು ಮತ್ತು ರಾಮಸಾಗರದಿಂದ ವಾಪಸ್ ಚಂದಾಪುರಕ್ಕೆ ಬರೋಣ. ಹೊಸೂರು ರಸ್ತೆಯಲ್ಲಿ ಸ್ವಲ್ಪ ಮುಂದೆ, ಅಂದರೆ ಎರಡು ಕಿ.ಮಿ. ಹೋದರೆ ಸಿಗುವುದು ಹಳೆ ಚಂದಾಪುರ. ಇಲ್ಲಿರುವುದು ಈ ಅದ್ಭುತ ಜೈನ ಮಂದಿರ. ಸಂಪೂರ್ಣ ಅಮೃತಶಿಲೆಯಲ್ಲಿರುವ ಇದು ಇನ್ನೂ ನಿರ್ಮಾಣ ಹಂತದಲ್ಲಿದೆ.


ಇನ್ನು ಸೀದಾ ತಮಿಳುನಾಡಿನ ಹೊಸೂರಿಗೇ ಹೋಗೋಣ. ಚಂದಾಪುರದಿಂದ ಹತ್ತು ಕಿ.ಮಿ. ಇರುವುದು ಅತ್ತಿಬೆಲೆ. ಇದು ಮುಗಿಯುತ್ತಿದ್ದಂತೆ ಸಿಗುವುದು ಕರ್ನಾಟಕ-ತಮಿಳುನಾಡು ಗಡಿ
.
ಹೊಸೂರಿನಲ್ಲಿ ಎಡಗಡೆ ಬಾಗಲೂರು ರಸ್ತೆಯಲ್ಲಿ ತಿರುಗಿ ಸುಮಾರು ಹತ್ತು ಕಿ.ಮಿ. ಹೋದರೆ ಇರುವುದು ಕೆಲವಾರಪಳ್ಳಿ ಡ್ಯಾಂ. ಇದು ನಂದಿಬೆಟ್ಟದ ಬಳಿ ಹುಟ್ಟುವ ಪೊನ್ನಯ್ಯಾರ್ ನದಿಗೆ ಅಡ್ದಲಾಗಿ ಕಟ್ಟಲಾಗಿದೆ. ಇದೇ ನದಿಗೆ ಮುಂದೆ ಕೃಷ್ಣಗಿರಿ ಬಳಿ ಇನ್ನೊಂದು ಅಣೆಕಟ್ಟು ಇದೆ.

ಅಣೆಕಟ್ಟು ಮತ್ತು ಹಿನ್ನೀರು ಹೊಸೂರು ಜನತೆಗೆ ಒಳ್ಳೆ picnic spot. ಪಕ್ಷಿವೀಕ್ಷಣೆಗೆ ಇದು ಒಳ್ಳೆ ಜಾಗ
ಈ ಕೆಲವಾರಪಳ್ಳಿ ಅಣೆಕಟ್ಟು ಮತ್ತು ಸುತ್ತಮುತ್ತಲು ಸೆರೆಸಿಕ್ಕ ಕೆಲ ಚಿತ್ರಗಳು.

ನೀರಿನ ಒಳಹರಿವು ಕಡಿಮೆಯಿರುವುದರಿಂದ ಗೇಟ್ ಗಳು ಸಂಪೂರ್ಣ ತೆರೆದಿಲ್ಲ. ಮಳೆ ಚೆನ್ನಾಗಿ ಬಂದರೆ ಮನಮೋಹಕ ದೃಶ್ಯವಾಗಬಹುದು ಈ ಅಣೆಕಟ್ಟು.

ಮುಂದೆ ನದಿ ಮಧ್ಯದ ಮರದಲ್ಲಿದ್ದ ಅಸಂಖ್ಯಾತ ಗೀಜಗನ ಗೂಡುಗಳನ್ನು ನೋಡಿ. ಎಂತಹ ಅದ್ಭುತ ಕಲೆಗಾರ ಮತ್ತು ವಾಸ್ತುಶಿಲ್ಪಿ ಈ ಗೀಜಗ ಹಕ್ಕಿ (weaver bird).

ಕೆಲವಾರಪಳ್ಳಿ ಡ್ಯಾಂ ನೋಡಾಯ್ತಲ್ಲ. ವಾಪಸ್ ಹೊಸೂರಿಗೆ ಬಂದರೆ ಕಾಣುವುದು ನಗರದ ಮಧ್ಯದಲ್ಲಿರುವ ಬೆಟ್ಟ. ಇದರ ಮೇಲಿದೆ ಚಂದ್ರಚೂಡೇಶ್ವರ ದೇವಾಲಯ. ಬೆಟ್ಟದ ತುದಿಯವರೆಗೂ ರಸ್ತೆಯಿದೆ. ಅದರ ಕೆಲ ಚಿತ್ರಗಳು.
 ಬೆಟ್ಟದ ಮೇಲಿಂದ ಕಾಣುವ ಕಲ್ಯಾಣಿ
ಹೊಸೂರು ತಮಿಳುನಾಡಿನಲ್ಲಿ ಇದ್ದರೂ ಕನ್ನಡ, ತೆಲುಗು ಹೆಚ್ಚುಕಡಿಮೆ ಎಲ್ಲರಿಗೂ ಗೊತ್ತು. ನಾನು ಚಂದ್ರಚೂಡೇಶ್ವರ ಬೆಟ್ಟಕ್ಕೆ ಹೋದಾಗ ದೇವಸ್ಥಾನದ ಕಚೇರಿಯಲ್ಲಿ ಮೀಟಿಂಗ್ ಸಂಪೂರ್ಣ ಕನ್ನಡದಲ್ಲಿ ನಡೆಯುತ್ತಿತ್ತು.


ಸದ್ಯಕ್ಕಿಷ್ಟು ಪ್ರಯಾಣ ಸಾಕು. ಒಂದು ಭಾನುವಾರದ ಟೂರ್ ಆಯಿತು. ಇಲ್ಲಿ ತಿಳಿಸಿದ ಯಾವ ಸ್ಥಳಗಳೂ ಅದ್ಭುತ, ಸುಂದರ ಅಥವಾ ಪ್ರೇಕ್ಷಣೀಯ ಅನ್ನಿಸುವ ಜಾಗಗಳಲ್ಲ. ಆದರೆ, ಒಂದು ದಿನ ಹಾಯಾಗಿ ಕಾಲಕಳೆಯಲು ಹೋಗಿಬರಬಹುದು.

ಹಿಂದೊಮ್ಮೆ ಬರೆದಂತೆ ನಮ್ಮ ಸುತ್ತಮುತ್ತಲಿನಲ್ಲೇ ನೋಡುವಂತಹ ಅನೇಕ ಜಾಗಗಳಿರುತ್ತವೆ. ಅವು tourist attraction ಅನ್ನಿಸುವಂತಹದಲ್ಲದಿರಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೂ ಸೌಂದರ್ಯವಿರುತ್ತದೆ, ಆಶ್ಚರ್ಯಕರ ವಿಷಯಗಳು ಕಣ್ಣಿಗೆ ಸಿಕ್ಕೇಸಿಗುತ್ತದೆ. ನೋಡುವ ಕಣ್ಣು, ಅನುಭವಿಸುವ ಮನಸ್ಸಿದ್ದರೆ ಸಾಕು